ಪತ್ತನಾಜೆಯಲ್ಲಿ ಕೃಷಿ ಸಂಸ್ಕೃತಿ ಅಂತರ್ಗತ – ಯುವ ವಾಗ್ಮಿ ವಿಜೇತ್ ಶೆಟ್ಟಿ ಮಂಜನಾಡಿ

117K Views 29 May 2026

ಮಂಗಳೂರು : ಪತ್ತನಾಜೆ ಆಚರಣೆಯ ಹಿಂದೆ ಈ ನೆಲದ ನಂಬಿಕೆ ಮತ್ತು ಕೃಷಿ ಸಂಸ್ಕೃತಿ ಅಂತರ್ಗತವಾಗಿದೆ. ಸಾಂಪ್ರದಾಯಿಕ ಜಾತ್ರೆ, ಉತ್ಸವ, ದೈವಾರಾಧನೆ, ಯಕ್ಷಗಾನ ಮೇಳಗಳ ತಿರುಗಾಟಕ್ಕೆ ತೆರೆ ಎಳೆಯುವ ಕೃಷಿ ವರ್ಗದ ಜನರು ಕೃಷಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಗಡುವಿನಂತೆ ಪತ್ತನಾಜೆಯನ್ನು ಆಚರಿಸುತ್ತಾರೆ. ಇದೊಂದು ಕಾಲ ನಿರ್ಣಯದ ಮಹತ್ವವನ್ನು ಪಡೆದಿದೆ ಎಂದು ಯುವ ವಾಗ್ಮಿ ವಿಜೇತ್ ಶೆಟ್ಟಿ ಮಂಜನಾಡಿ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಂಗಳೂರು ತಾಲೂಕು ಸಮಿತಿ ಹಾಗೂ ಥಿಯಾಸೋಫಿಕಲ್ ಸೊಸೈಟಿ ಮಂಗಳೂರು ಸಹಯೋಗದಲ್ಲಿ ನಗರದ ಥಿಯಾಸೋಫಿಕಲ್ ಸೊಸೈಟಿ ಸಭಾಂಗಣದಲ್ಲಿ
ನಡೆದ ಕಾರ್ಯಕ್ರಮದಲ್ಲಿ ಅವರು ಪತ್ತನಾಜೆ ಆಚರಣೆ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಯಾಗಿದ್ದ ವಿದ್ವಾನ್ ತುಪ್ಪೆಕಲ್ಲು ನರಸಿಂಹ ಶೆಟ್ಟಿ ಮಾತನಾಡಿ ” ಚೆನ್ನಾಗಿ ಫಸಲು ಬರಲು ನೈಸರ್ಗಿಕ ಕ್ರಮವನ್ನು ಅಳವಡಿಸುವ ಮಹತ್ವದ ವಿಚಾರ ಪತ್ತನಾಜೆ ಆಚರಣೆಯ ಹಿಂದೆ ಇದೆ ಎಂದರು.
ಅಭಾಸಾಪ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷೆ ಡಾ. ಮೀನಾಕ್ಷಿ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಅಭಾಸಾಪ ಮಂಗಳೂರು ವಿಭಾಗ ಸಂಯೋಜಕ ಸುಂದರ ಶೆಟ್ಟಿ, ವಿದ್ವಾಂಸ ಡಾ. ಪ್ರಭಾಕರ ಜೋಷಿ
ಉಪಸ್ಥಿತರಿದ್ದರು. ಅಭಾಸಾಪ ಕಾರ್ಯದರ್ಶಿ ಪ್ರೊ. ಶೈಲಜಾ ಪುದುಕೋಳಿ ಸ್ವಾಗತಿಸಿ, ಯಶೋದಾ ಕುಮಾರಿ ವಂದಿಸಿದರು. ಉಷಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

Read More News

Scroll to Top