ಮಂಗಳೂರು, ಫೆ.25: ನಮ್ಮನ್ನಗಲಿದ ಹಿರಿಯ ಪತ್ರಕರ್ತ ವಿ.ಟಿ.ರಾಜಶೇಖರ ಶೆಟ್ಟಿ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಮುಝಫ್ಫರ್ ಅಸಾದಿ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದ ಪಿ.ಬಿ.ಡೇಸಾ ಒಂದು ಕಾಲಕ್ಕೆ ಜನಸಾಮಾನ್ಯರ ಜನಮನ ತಟ್ಟಿದವರು ಮತ್ತು ಯುವಕರನ್ನು ಒಟ್ಟುಗೂಡಿಸಿದವರು ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ(ರಿ) ಕಾರ್ಯದರ್ಶಿ ಡಾ. ಇಸ್ಮಾಯೀಲ್ ಎನ್ ಹೇಳಿದ್ದಾರೆ.

ದಲಿತ್ ವಾಯ್ಸ ‘ಸಂಪಾದಕ ವಿ.ಟಿ.ರಾಜಶೇಖರ , ಪ್ರೊ. ಮುಝಫ್ಫರ್ ಅ ಸ್ಸಾದಿ ಮತ್ತು ಪಿ.ಬಿ.ಡೇಸಾ ಇವರಿಗೆ ಮಂಗಳವಾರ ನಗರದ ಖಾಸಾಗಿ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂವರು ಬೇರೆ ಬೇರೆ ಸಮುದಾಯದಿಂದ ಬಂದವರಾಗಿದ್ದರೂ ಇವರ ಚಿಂತನೆ ಒಂದೇ ಆಗಿತ್ತು ಎಂದರು.
ಮೈಸೂರು ವಿವಿಯಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಆ ವಿಭಾಗಕ್ಕೆ ದೊಡ್ಡ ಕೊಡುಗೆಯನ್ನು ಅವರು ನೀಡಿದ್ದರು. ಧೀಮಂತ ಅಧ್ಯಾಪಕರಾಗಿ ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ತೆರೆದ ಕಣ್ಣುಗಳಿಂದ ಸಮಾಜವನ್ನು ನೋಡಿದವರು. ತನಗೆ ಬೇಕಾಗಿ ಸಂಘಟನೆ ಕಟ್ಟಿಕೊಂಡಿರಲಿಲ್ಲ. ಹೀಗಾಗಿ ಅವರಿಗೆ ವಿವಿ ಉಪಕುಲಪತಿಯಾಗಿ ಅವಕಾಶ ಸಿಗಲಿಲ್ಲ ಎಂದರು.
ಡೇಸಾ ಅವರು ತನ್ನ ಬಗ್ಗೆ ಚಿಂತನೆ ನಡೆಸುವುದಕ್ಕಿಂತ ಇನ್ನೊಬ್ಬರ ಬಗ್ಗೆ ಚಿಂತನೆ ನಡೆಸಿದವರು ಎಂದರು. ಆಧುನಿಕ ಅಂಬೇಡ್ಕರ್ ವಿ.ಟಿ .ರಾಜಶೇಖರ್: ವಿ.ಟಿ .ರಾಜಶೇಖರ್ ಅವರ ಪುತ್ರ ಅಮ್ನೆಸ್ಟಿ ಇಂಟರ್ನ್ಯಾಶನಲ್ನ ಮಾಜಿ ಪ್ರಧಾನ ಕಾರ್ಯದರ್ಶಿ
ಸಲೀಲ್ ಶೆಟ್ಟಿ ಮಾತನಾಡಿ ದಲಿತರಿಗಾಗಿ ಶ್ರಮಿಸಿದ ಆಧುನಿಕ ಅಂಬೇಡ್ಕರ್ ಆಗಿದ್ದರು ಎಂದು ಹೇಳಿದರು.
ಅವರು ಬರೆದದ್ದು ಇಂಗ್ಲಿಷ್ನಲ್ಲಿ ಜಾಸ್ತಿ. ಅದು ದಲಿತರಿಗೆ ಹೆಚ್ಚು ಮುಟ್ಟಲಿಲ್ಲ. ಅವರ ಚಿಂತನೆಗಳು ಎಂದೆಂದಿಗೂ ಸಕಾಲಿಕವಾಗಿದೆ ಎಂದರು.
ಪಿ.ಬಿ .ಡೇಸಾ ಅವರ ಪುತ್ರಿ ಪ್ರೀತಿಕಾ ಅವರು ಮಾತನಾಡಿ ತನ್ನ ತಂದೆಯ ಜೀವನ ಸರಳವಾಗಿತ್ತು. ನಾನಾ ಸವಾಲುಗಳು ಅವರ ಬದುಕಿನಲ್ಲಿ ಎದುರಾಗಿದ್ದರೂ ಅವೆಲ್ಲವನ್ನು ಬದಿಗೊತ್ತಿ ಇತರಿಗಾಗಿ ದುಡಿದರು ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟು ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಮಾತನಾಡಿದರು.
ಮಂಗಳೂರು ವಿವಿ ಪ್ರಾಧ್ಯಾಪಕ ಎಂ.ಪಿ.ಉಮೇಶ್ಚಂದ್ರ, ವಕೀಲರಾದ ಬಿ.ಎ. ಮೊಹಮ್ಮದ್ ಹನೀಫ್, ಪ್ರಮುಖರಾದ ಎನ್.ಜಿ. ಮೋಹನ್, ಖಾಲಿದ್ ತಣ್ಣೀರುಬಾವಿ, ಜೋಶಿ ಸತ್ಯಾನಂದ್, ವಿಕ್ಟರ್ ಕ್ರಾಸ್ತಾ, ರೆನ್ನಿ ಡಿ ಸೋಜ, ಭರತೇಶ್ ಬಜಾಲ್, ಯೂಸುಫ್ ವಕ್ತಾರ್, ಬಾವಾ ಪದರಂಗಿ, ಯೋಗೀಶ್ ಜೆಪ್ಪು, ಕಾಂತಪ್ಪ ಆಲಂಗಾರು, ಸದಾಶಿವ ಸಾಲ್ಯಾನ್, ಸೋಮಪ್ಪ ಆಲಂಗಾರು, ಯಾದವ್ ಶೆಟ್ಟಿ, ಡಾ.ಹರೀದಾಸ್ ರೈ, ಶಾಹಿದಾ, ದಿಲ್ಶಾದ್, ಶಾಹಿನ್ ಮತ್ತಿತರರು ಭಾಗವಹಿಸಿದ್ದರು.



















































































































































































