ಫೆ.8ರಂದು ಸದಾಶಿವ ಶೆಟ್ಟಿ ಸೇವಾ ಬಳಗದ ವತಿಯಿಂದ ಸಹಾಯ ಹಸ್ತ ಮತ್ತು ಉಚಿತ ಅರೋಗ್ಯ ವಿಮೆ ಉದ್ಘಾಟನೆ

114.4K Views 5 Feb 2025

ಮಂಗಳೂರು: “ಸದಾಶಿವ ಶೆಟ್ಟಿ ಸೇವಾ ಬಳಗ ಕೇಂದ್ರೀಯ ಸಮಿತಿ ವತಿಯಿಂದ ಫೆ.8ರಂದು ಶನಿವಾರ ಸಂಜೆ 4 ಗಂಟೆಯಿಂದ ಮೀಂಜ ಬಂಟರ ಸಂಘ ಮೈದಾನ ಚಿಗುರುಪಾದೆಯಲ್ಲಿ ನಡೆಯುವ ಸದಾಶಿವ ಸಹಾಯ ಹಸ್ತ ವಿತರಣೆ ಮತ್ತು ಉಚಿತ ಅರೋಗ್ಯ ವಿಮೆ ಉದ್ಘಾಟನೆ ಹಾಗೂ ಸದಾಶಿವ ಶೆಟ್ಟಿ ಅಭಿಮಾನಿ ಬಳಗ ಹಾಗೂ ಹಿತೈಷಿಗಳಿಂದ ತುಳುನಾಡ ಕಣ್ಮಣಿ, ಕೊಡುಗೈ ದಾನಿ ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಸದಾಶಿವ ಶೆಟ್ಟಿ ಕನ್ಯಾನರವರಿಗೆ ಅಭಿನಂದನಾ ಕಾರ್ಯಕ್ರಮವು ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತುಳು ಜಾನಪದ ನಾಟಕದೊಂದಿಗೆ ಸಮಾರೋಪಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಸುಮಾರು 4000ಕ್ಕಿಂತ ಮೇಲ್ಪಟ್ಟು ಜನಸಾಮಾನ್ಯರು ಭಾಗವಹಿಸಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಉಪಹಾರ ಮತ್ತು ಭೋಜನದ ವ್ಯವಸ್ಥೆ ಇದೆ. ಹಾಗೂ ಈ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ, ಉಚಿತ ಅರೋಗ್ಯ ಕುಟುಂಬ ವಿಮೆ (5 ಲಕ್ಷ) ಆಂಬುಲೆನ್ಸ್ ಹಸ್ತಾಂತರ, ಶಾಲಾ ವಾಹನ ಹಸ್ತಾಂತರ, ಶಾಲಾ ಅಭಿವೃದ್ಧಿಗೆ ಸಹಾಯ, ಅಂಗವಿಕಲರಿಗೆ ಕೃತಕ ಕಾಲು, ವೀಲ್‌ ಚೇರ್, ಹೊಲಿಗೆ ಮಿಷನ್, ಕ್ಯಾನ್ಸ‌ರ್ ರೋಗಿಗಳಿಗೆ ಹಾಗೂ ಇತರ ರೋಗಿಗಳಿಗೆ ವಿಶೇಷ ಸಹಕಾರ ನಡೆಯಲಿದೆ“ ಎಂದು ಸೇವಾ ಬಳಗದ ಉಪಾಧ್ಯಕ್ಷ ಕೆ. ನಾರಾಯಣ್ ನಾಯ್ಕ್ ನಡುಹಿತ್ತಿಲು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜರಾಜೇಶ್ವರಿ ದೇವಸ್ಥಾನ ಮುಂಡಪಲ್ಲ ಕುಂಬಳೆ ಇದರ ಆಡಳಿತ ಮೊತ್ತೇಸರರಾದ ಕೆ.ಕೆ. ಶೆಟ್ಟಿ ಕುತ್ತಿಕ್ಕಾರ್ ವಹಿಸಲಿರುವರು. ಆಶೀರ್ವಚನವನ್ನು ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಇವರು ನೀಡಲಿರುವರು.
ಉದ್ಘಾಟನೆಯನ್ನು ಗೌರವಾನ್ವಿತ ವಿಧಾನ ಸಭಾ ಅಧ್ಯಕ್ಷರಾದ ಎ.ಎನ್.ಶಂಸೀರ್ ಮಾಡಲಿರುವರು. ಸಹಾಯ ಹಸ್ತ ಆರೋಗ್ಯ ವಿಮ ಉದ್ಘಾಟನೆಯನ್ನು ಕನ್ಯಾನ ಸದಾಶಿವ ಶೆಟ್ಟಿಯವರು ಮಾಡಲಿರುವರು.
ಡಾ.ಎಂ.ಶಾಂತಾರಾಮ್ ಶೆಟ್ಟಿ, ರೆ.ಫಾದರ್ ಮೆಲ್ವಿನ್ ಜೋಸೆಫ್ ಪಿಂಟೋ ಎಸ್‌ಜೆ, ಉಸ್ತಾದ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಉಪಸ್ಥಿತಿಯಿರಲಿದ್ದಾರೆ.
ಮುಖ್ಯಅತಿಥಿಯಾಗಿ ಸ್ಪೀಕರ್ ಯು.ಟಿ.ಖಾದರ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ, ಕಾಸರಗೋಡು ಎಸ್ಪಿ ಡಿ.ಶಿಲ್ಪಾ, ರಘುರಾಮ್ ಶೆಟ್ಟಿ ಕುಳೂರು ಕನ್ಯಾನ, ಸುಜಾತ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಸತೀಶ್ ಕುಂಪಲ, ಐಕಳ ಹರೀಶ್ ಶೆಟ್ಟಿ, ಶಶಿಧರ ಶೆಟ್ಟಿ ಬರೋಡ, ಸತೀಶ್ ಶೆಟ್ಟಿ ಪಟ್ಲ , ಐ.ಸುಬ್ಬಯ್ಯ ರೈ, ಗುರುಕಿರಣ್, ರಕ್ಷಿತ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ, ಕೋಶಾಧಿಕಾರಿ ಕಾರ್ತಿಕ್ ಶೆಟ್ಟಿ ಮಜಿಬೈಲು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
ಚಿತ್ರಗಳು ಸತೀಶ್ ಕಾಪಿಕಾಡ್

Read More News

Scroll to Top