ಜನಾಭಿಪ್ರಾಯ ವರದಿ.
ಮಂಗಳೂರು: ಈಗೀಗ ಖಾಸಗಿ ಹಾಗೂ ಸರಕಾರಿ ಮಟ್ಟದಲ್ಲಿ ಸೆಕೆಂಡ್ ಒಪೀನಿಯನ್ ಆರೋಗ್ಯ ಮಾಹಿತಿಯ ಅಗತ್ಯದ ಬಗ್ಗೆ ಕೇಳಿಬರುತ್ತಿದೆ. ಆದರೆ, ಇದನ್ನು ಒಂದು ದಶಕದ ಹಿಂದೆ ಮನಗಂಡು ಅದನ್ನು ಆರಂಭಿಸಿ ತನ್ನ ವೈದ್ಯ ಮಿತ್ರರ ಜೊತೆಗೂಡಿ ಉಚಿತವಾಗಿ ಸುಮಾರು 5೦೦೦ ಮಂದಿಗೆ ಸೇವೆ ಒದಗಿಸಿ ಸದ್ದಿಲ್ಲದೇ ಸುದ್ದಿ ಆಗಿರುವವರು ಡಾ ಅಣ್ಣಯ್ಯ ಕುಲಾಲ್ ಉಳ್ತೂರು. ಅವರು ತನ್ನ ತಂದೆಯ ನೆನಪಲ್ಲಿ ಸ್ಥಾಪಿಸಿದ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಕುಲಾಲ್ ಹೆಲ್ತ್ ಸೆಂಟರ್ ನ ಆಶ್ರಯದಲ್ಲಿ ಸರ್ವಜ್ಞ ಸೆಕೆಂಡ್ ಒಪೀನಿಯನ್ ಈ ಸೇವೆಯನ್ನು ಕರಾವಳಿ ಮಲೆನಾಡು ಅಲ್ಲದೇ ರಾಜ್ಯದಲ್ಲೇ ಪ್ರಥಮವಾಗಿ ಕೊಡುತ್ತಿರುವವರು. ಅವರ ಈ ಸೇವೆಗೆ ದೇವರಾಜ ಅರಸು ಪ್ರಶಸ್ತಿ, ಡಾ ಬಿ ಸಿ ರಾಯ್ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಸಹಿತ ಹತ್ತಾರು ಗೌರವಗಳು. ಐಎಂಎ ಮಂಗಳೂರು ಜೀವ ಮಾನದ ಶ್ರೇಷ್ಠ ಸೇವಾ ಸಾಧನ ರಾಜ್ಯೋತ್ಸವ ಪುರಸ್ಕಾರ ಲಭಿಸಿವೆ.



ಇಲ್ಲಿ ಬಡವರಿಗೆ, ನಿರ್ಗತಿಕರಿಗೆ, ಅವಿದ್ಯಾವಂತರಿಗೆ ಅವರಿಗೆ ಅರ್ಥ ಆಗುವ ಹಾಗೆ ಕಾಯಿಲೆಗಳ ಬಗ್ಗೆ ತಿಳಿ ಹೇಳುವುದು, ಕಾಯಿಲೆಯ ಹಂತ, ಅದರ ಮಾರಕ ಪರಿಣಾಮ, ಬೇಕಾದ ಚಿಕಿತ್ಸೆ, ಅದು ಉಚಿತವಾಗಿ ಸಿಗುವ ಆಸ್ಪತ್ರೆಗಳು, ಸರಕಾರದ ಪ್ರಯೋಜನಗಳು, ಖಾಸಗಿಯಾದರೆ ಕಡಿಮೆ ಖರ್ಚಿನಲ್ಲಿ ಮಾಡುವ ಆಸ್ಪತ್ರೆ ವೈದ್ಯರುಗಳು, ಬಡವರಾದರೆ ಖ್ಯಾತ ವೈದ್ಯರ ಮೂಲಕ ಉಚಿತ ಅಭಿಪ್ರಾಯ, ಕ್ಯಾನ್ಸರ್ ಸಹಿತ ಹಲವು ಚಿಕಿತ್ಸೆ ಗಳಿಗೆ ಸಲಹೆ ಸಾಂತ್ವನ ಸಹಿತ ಚಿಕಿತ್ಸೆ, ಅತೀ ಅಗತ್ಯ ಇದ್ದವರಿಗೆ ಒಂದಷ್ಟು ಕ್ರೌಡ್ ಫಂಡಿಂಗ್, ಹೀಗೆ ಸಮಾಜಮುಖಿ ಆರೋಗ್ಯ ಸೇವೆಯನ್ನು ಕಳೆದ 25 ವರ್ಷಗಳಿಂದ ಫ್ಯಾಮಿಲಿ ಮೆಡಿಸಿನ್ ಪಾಲಿಯೇಟಿವ್ ಮೆಡಿಸಿನ ಹಾಗು ಇಂಡಸ್ಟ್ರಿಯಲ್ ಮೆಡಿಸಿನ್ ಸೇವೆ ಕೊಡುತ್ತಾ ಬಂದಿರುವ ಡಾ ಅಣ್ಣಯ್ಯ ಕುಲಾಲ್, ಕಳೆದ ಹತ್ತು ವರ್ಷಗಳಿಂದ ಡಾ ಕುಲಾಲ್ಸ್ ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್ ಮೂಲಕ ನಾಡಿನಾದ್ಯಂತ ರೋಗಿಗಳಿಗೆ ಆಶಾಕಿರಣ ವಾಗಿದ್ದಾರೆ.





















































































































































































