ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸುರತ್ಕಲ್, ಇದರ ಪಶ್ಚಿಮ ಬದಿಯ “ಪುಷ್ಕರಣಿ” ಕೆರೆಯ ಜೀರ್ಣೋದ್ಧಾರದ ಪ್ರಯುಕ್ತ ಇಡ್ಯಾ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ಹಾಗೂ ಪರಿವಾರ ಶಕ್ತಿಗಳಿಗೆ ಪ್ರಾರ್ಥನೆ ಸಲ್ಲಿಸಲಾಯಿತು.


ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರರಾದ ವೇ। ಮೂ। ಐ. ರಮಾನಂದ ಭಟ್ ಅವರ ಅಮೃತ ಹಸ್ತದಿಂದ ಪಶ್ಚಿಮ ಬದಿಯ ‘ಪುಷ್ಕರಣಿ’ ಕೆರೆಗೆ ‘ಭೂಮಿ ಪೂಜೆ’ ನೆರವೇರಿಸಲಾಯಿತು. ಈ ಸಂದರ್ಭ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಐ. ರಮಾನಂದ ಭಟ್ರವರು ಸಹಸ್ರಾರು ವರ್ಷದಿಂದ ಪುರಾತನವಾದ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಡುಬದಿಯ ಕೆರೆಯ ಅಭಿವೃದ್ಧಿ ಭಗವದ್ಭಕ್ತರ ಸಹಕಾರದಿಂದ ಆಗಬೇಕಾಗಿದೆ. ಹಾಗಾಗಿ ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು.

ಇದೇ ಸಂದರ್ಭ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಪುಷ್ಕರಣಿ’ ಕೆರೆ ಅಭಿವೃದ್ಧಿ ಸಮಿತಿಯ ಸಂಚಾಲಕರಾದ ಶಂಕರನಾರಾಯಣ ಭಟ್, ಸೂರ್ಯನಾರಾಯಣ ಭಟ್, ಗೌರವ ಸಲಹೆಗಾರರಾದ ಸತೀಶ್ ರಾವ್ ಇಡ್ಯಾ, ಧಾರ್ಮಿಕ ಮುಂದಾಳು ಪುಂಡಲೀಕ ಹೊಸಬೆಟ್ಟು, ಕೆ. ರಾಜ್ ಮೋಹನ್ ರಾವ್, ಕೃಷ್ಣಕುಮಾರ್ ಇಡ್ಯಾ, ಸಮಿತಿ ಸದಸ್ಯರಾದ ಸಂದೀಪ್ ರಾವ್ ಇಡ್ಯಾ, ವಸಂತ್ ಕುಮಾರ್ ನಾಯಕ್, ಸೋಮನಾಥ ಇಡ್ಯಾ ಹಾಗೂ ಇಡ್ಯಾ ಪರಿಸರದ ಭಕ್ತರು ಉಪಸ್ಥಿತರಿದ್ದರು.



















































































































































































