ಮಂಗಳೂರು : ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಗರದ ರೆಡ್ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ” ರಕ್ತಕ್ಕೆ ಯಾವುದೇ ಜಾತಿ, ಧರ್ಮದ ಭೇದವಿಲ್ಲ. ರಕ್ತದಾನ ಮಾನವೀಯತೆಯ ಅತ್ಯುನ್ನತ ಸಂಕೇತವಾಗಿದೆ. ಯುವ ಪೀಳಿಗೆ ರಕ್ತದಾನವನ್ನು ಜೀವನದ ಒಂದು ಮುಖ್ಯ ಸಂಕಲ್ಪವಾಗಿ ಮಾಡಿಕೊಂಡರೆ ಅಮೂಲ್ಯ ಜೀವಗಳನ್ನು ಉಳಿಸಬಹುದು’ ಎಂದರು.
ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಶಿವಪ್ರಕಾಶ್.ಡಿ.ಎಸ್., ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್.ಎಂ.ಆರ್. ಮುಖ್ಯ ಅತಿಥಿಗಳಾಗಿ
ಭಾಗವಹಿಸಿದ್ದರು.
ರೆಡ್ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹತ್ತು ಮತ್ತು ಅದಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ಜಿಲ್ಲೆಯ ೧೧ ಮಂದಿ ರಕ್ತದಾನಿಗಳನ್ನು ಸನ್ಮಾನಿಸಲಾಯಿತು. ರಕ್ತದಾನ ಶಿಬಿರಗಳನ್ನು ಆಯೋಜಿಸಿದ ಜಿಲ್ಲೆಯ ೧೩ ಸಂಸ್ಥೆಗಳ ಪ್ರತಿನಿಧಿಗಳನ್ನು ಇದೇ ಸಂದರ್ಭ ಗೌರವಿಸಲಾಯಿತು.
ಖಜಾಂಜಿ ಗುರುದತ್ .ಎಂ. ನಾಯಕ್, ನಿರ್ದೇಶಕ ರಾಘವೇಂದ್ರ ರಾವ್, ಕಾರ್ಯದರ್ಶಿ ಕಿಶೋರ್ಚಂದ್ರ ಹೆಗ್ಡೆ, ರೆಡ್ಕ್ರಾಸ್ ಬ್ಲಡ್ ಬ್ಯಾಂಕ್ನ ವೈದ್ಯಾಧಿಕಾರಿ ಡಾ.ಸುಕೇಶ್ ಉಪಸ್ಥಿತರಿದ್ದರು. ರೆಡ್ಕ್ರಾಸ್ ಸೊಸೈಟಿಯ ರಕ್ತದಾನ ಉಪ ಸಮಿತಿ ನಿರ್ದೇಶಕ ಪುಷ್ಪರಾಜ್ ಜೈನ್ ಸ್ವಾಗತಿಸಿ, ನಿರ್ದೇಶಕ ಪಿ.ಬಿ.ಹರೀಶ್ ರೈ ವಂದಿಸಿದರು. ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ರಕ್ತದಾನಿಗಳಿಗೆ ಸನ್ಮಾನ:
ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ನಾರಾಯಣ ಕುಂಪಲ (೫೩ ಬಾರಿ), ದೇವಿಪ್ರಸಾದ್ ರಾವ್.ಎ.ಕೊಟ್ಟಾರ(೪೬), ಮಹಮ್ಮದ್ ಮುಸ್ತಾಫ ಬೊಳಂತೂರು (೩೬),
ಎ.ನಿರಂಜನ್, ಕೆಎಸ್ಆರ್ಪಿ, ಕೊಣಾಜೆ (೩೨), ಫ್ಲಾನ್ಸಿ ಸುವಾರಿಸ್ ಪುತ್ತೂರು(೨೭), ಗಣೇಶ್ ನಾಯಕ್ ಡೊಂಗರಕೇರಿ (೨೫), ಅಭಿಷೇಕ್.ಎಚ್.ಎಸ್. (೨೦), ಮಹಮ್ಮದ್
ಅನ್ಸಾರ್ ಬೊಳಂತೂರು (೧೯), ರಾನ್ಸನ್ ಸ್ಟೀಫನ್ ಕ್ರಾಸ್ತಾ ವಾಮದಪದವು (೧೮), ಅಬ್ದುಲ್ ಮಲಿಕ್.ಕೆ.ಎಚ್.(೧೧) ಮತ್ತು ಸುಧೀರ್ ರಂಜನ್.ಕೆ. (೧೦ ಬಾರಿ) ಇವರುಗಳನ್ನು ಸನ್ಮಾನಿಸಲಾಯಿತು.




























































































































































































