‘ಸಂದೇಶ ಕ್ರೈಸ್ತರಿಗೆ ಮಾತ್ರ ಸೀಮಿತವಲ್ಲ’
ಉಳ್ಳಾಲ: ಏಸು ಕ್ರಿಸ್ತರ ಶಾಂತಿಯ ಸಂದೇಶದ ಫಲವಾಗಿ ಜಗತ್ತಿನಲ್ಲಿ ಶಾಂತಿ ನೆಲೆಸಿದ್ದು ಭಾರತದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸಿದೆ. ಅವರ ಸಂದೇಶ ಕೇವಲ ಕ್ರಿಸ್ತರಿಗೆ ಸೀಮಿತವಲ್ಲ ಎಂದು ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಅಭಿಪ್ರಾಯಪಟ್ಟರು.ಪಜೀರ್ ಮೆರ್ಸಿಯಮ್ಮನವರ ಇಗರ್ಜಿಯ ಸೇಕ್ರೆಡ್ ಹಾರ್ಟ್ ವಾರ್ಡ್ ವತಿಯಿಂದ ಭಾನುವಾರ ಪಾವೂರು ಗ್ರಾಮದ ಕೊಂತಪದವಿನಲ್ಲಿ ನಡೆದ ಕ್ರಿಸ್ಮಸ್ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಾಜಿ ಸದಸ್ಯ ವಿವೇಕ್ ರೈ ಮಾತನಾಡಿ, ಭಾರತ ವೈವಿಧ್ಯತೆಯಲ್ಲಿ ಏಕತೆ ಇದ್ದರೂ ಆಚರಣೆಗಳು ಒಂದು ಧರ್ಮ, ಜಾತಿಗೆ ಸೀಮಿತವಾಗಿ ನಡೆಯುತ್ತಿರುವುದು ಖೇದಕರ. ವೇದಿಕೆಯಲ್ಲಾಡುವ ಮಾತುಗಳು ನಮ್ಮ ಜೀವನದಲ್ಲಿ ಅಳವಡಿಸುವಂತಾಗಬೇಕು ಎಂದು ತಿಳಿಸಿದರು.ಘಟಕ ಸಂಯೋಜಕ ಸಂತೋಷ್ ಗೋನ್ಸಾಲ್ವಿಸ್ ಮಾತನಾಡಿ, ಏಸು ಕ್ರಿಸ್ತರು ಪ್ರೀತಿ, ಕ್ಷಮೆ, ಹಂಚುವ ಸಂದೇಶ ನೀಡಿದ್ದಲ್ಲದೆ ಮಾಡಿ ತೋರಿಸಿದ್ದರು. ಹಬ್ಬಗಳು ಬರುತ್ತವೆ ಹೋಗುತ್ತವೆ, ಎಲ್ಲಾ ಹಬ್ಬಗಳು ಸೌಹಾರ್ದ ಸಂದೇಶ ನೀಡಿದೆ. ಸರ್ವ ಧರ್ಮೀಯರು ಸೇರಿ ಹಬ್ಬಗಳನ್ನು ಆಚರಿಸುವುದರಿಂದ ಪರಸ್ಪರ ಪ್ರೀತಿಯ ಭಾವನೆ ಹೆಚ್ಚಾಗುತ್ತದೆ ಎಂದರು.ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ, ಗ್ರಾಮ ಪಂಚಾಯಿತಿ ಸದಸ್ಯ ದಯಾನಂದ ಪೂಜಾರಿ ಕಿಲ್ಲೂರು, ಸ್ಥಳೀಯರಾದ ಹಮೀದ್ ಬಿ.ಸೈಟ್, ವಾರ್ಡ್ ಸಚೇತಕ ಸಿಸ್ಟರ್ ಜಾಯ್ಸ್ ಮೊಂತೆರೋ, ಕಾರ್ಯಕ್ರಮ ಸಂಯೋಜಕ ವಿನ್ಸೆಂಟ್ ಲೋಬೋ ಮೊದಲಾದವರು ಉಪಸ್ಥಿತರಿದ್ದರು.ರೀಶಲ್ ಡಿಸೋಜ ಸ್ವಾಗತಿಸಿದರು. ಜೆಸ್ವಿಟಾ ಕ್ತಾಸ್ತಾ ಕಾರ್ಯಕ್ರಮ ನಿರೂಪಿಸಿದರು.










