ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

“ಧರ್ಮದೈವ” ತುಳು ಚಲನಚಿತ್ರ ಜುಲೈ 5ರಂದು ತೆರೆಗೆ

ಮಂಗಳೂರು: “ಧರ್ಮದೈವ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಧರ್ಮದೈವ ತುಳು ಸಿನಿಮಾ ಜುಲೈ 5 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಪುಣೆ, ಮುಂಬೈನಲ್ಲಿನಡೆದ ಪ್ರೀಮಿಯರ್ ಶೋ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.“ಧರ್ಮ ದೈವ” ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ನಟರಾಜ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಾಣಲಿದೆ” ಎಂದು ಚಿತ್ರದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಳಿಕ ಮಾತಾಡಿದ ರಮೇಶ್ ರೈ ಕುಕ್ಕುವಳ್ಳಿ ಅವರು, “ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಸೇರಿದಂತೆ ಅನೇಕ ಸಾನಿಧ್ಯ ಸ್ಥಳಗಳು, ದೈವಾರಾಧನೆ ನಾಗಾರಾಧನೆಗೆ ಪ್ರಸಿದ್ಧಿ ಪಡೆದಿವೆ. ಇಂದು ತುಳುನಾಡು, ತುಳು ಭಾಷೆ, ದೇಶ-ವಿದೇಶ ತುಂಬಾ ಮಾನ್ಯತೆ ಪಡೆದಿದೆ.ಸಿನಿಮಾ ಮಾಧ್ಯಮ ಇಂದು ಪರಿಣಾಮಕಾರಿ ಶ್ರೀಮಂತ ಮಾಧ್ಯಮವಾಗಿ ಬೆಳಗುತ್ತಿದೆ.ಈ ನಾಡಿನ ರೈತಾಪಿ ಜನರು ತಮ್ಮ ಬೇಸಾಯ- ಕೃಷಿ,ತೋಟಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ತುಳುನಾಡಿನ ದೈವ- ದೇವರು, ನೇಮ- ಕೋಲ-ತಂಬಿಲ, ನಾಗಾರಾಧನೆ -ದೈವಾರಾಧನೆ. ಮೂಲಕ ಈ ಮಣ್ಣಿನ, ಬದುಕಿನ ಕಥೆಯನ್ನು ಕಟ್ಟಿಕೊಡುವ ತುಳು ಚಲನಚಿತ್ರ “ಧರ್ಮ ದೈವ” ಬೆಳ್ಳಿ ತೆರೆಯಲ್ಲಿ ಮೂಡಿಬರಲು ಸಿದ್ಧವಾಗಿದೆ. ತುಳುವರು ಸಿನಿಮಾ ನೋಡಿ ಕಲಾವಿದರನ್ನು ಬೆಳೆಸಿ” ಎಂದರು. ನಟ ಚೇತನ್ ರೈ ಮಾಣಿ ಮಾತನಾಡಿ, “ಇಂದು ನಮ್ಮ ಯುವ ಜನಾಂಗ ತಮ್ಮ ಹಿರಿಯರು ಬಾಳಿಬೆಳಗಿದ ರೀತಿ- ನೀತಿ, ನಂಬಿಕೆ- ಸಂಸ್ಕೃತಿ, ನಡವಳಿಕೆಗಳಿಗೆ ಪ್ರಾಧಾನ್ಯತೆ ಕೊಟ್ಟು ಚಿತ್ರ-ಕಥೆಗಳನ್ನು ನಿರ್ಮಿಸುವ ಮೂಲಕ ಹಿರಿಯರ, ಸಂಘ- ಸಂಸ್ಥೆಗಳ ಅಭಿಮಾನಕ್ಕೂ ಪಾತ್ರರಾಗಿರುವರು. ಅವಿಭಜಿತ. ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದ ವಿಶೇಷವಾಗಿ ಉಡುಪಿ, ಮಂಗಳೂರು ಮತ್ತು ಪುತ್ತೂರಿನ ಯುವಕರು ತಾವೇ ಸೇರಿಕೊಂಡು “ಧರ್ಮದೈವ ಪ್ರೊಡಕ್ಷನ್ಸ್ ಲಾಂಛನದಲ್ಲಿ” “ಧರ್ಮ ದೈವ”ಎಂಬ ಹೆಸರಿನಲ್ಲಿ ಒಂದು ಪೂರ್ಣ ಚಲನಚಿತ್ರವನ್ನು ನಿರ್ಮಾಣ ಮಾಡಿ ಸೆನ್ಸಾರ್ ಮಂಡಳಿಯಿಂದ ಮಾನ್ಯತೆ ಪಡೆದು ಜುಲೈ 5 ರಂದು ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ. ಯುವ ನಿರ್ಮಾಪಕ ಬಿಳಿಯೂರು ರಾಕೇಶ್ ಭೋಜರಾಜ ಶೆಟ್ಟಿ, “ಧರ್ಮದೈವ” ತುಳು ಚಲನ ಚಿತ್ರವನ್ನು ಭಕ್ತಿ -ಶಕ್ತಿ ಶ್ರದ್ಧೆಯಿಂದ ನಿರ್ಮಾಣ ಮಾಡಿಕೊಟ್ಟಿರುವರು, ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಕೇರಳ ಗಡಿಭಾಗದಲ್ಲಿರುವ ಕರ್ನುರಿನಲ್ಲಿ ಮತ್ತು ಸುಳ್ಯ, ಪುತ್ತೂರು ತಾಲೂಕಿನ ಸುತ್ತಮುತ್ತ ಸುಮಾರು 25 ದಿನ ನಡೆದಿದೆ” ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಬಿಳಿಯೂರು ರಾಕೇಶ್ ಭೋಜರಾಜ ಶೆಟ್ಟಿ, ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ , ರಮೇಶ್ ರೈ ಕುಕ್ಕುವಳ್ಳಿ, ಚೇತನ್ ರೈ ಮಾಣಿ, ಅರುಣ್ ರೈ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.ಚಿತ್ರ ಕಥೆ- ಸಂಭಾಷಣೆಯನ್ನು ಹಮೀದ್ ಪುತ್ತೂರು ಬರೆದಿದ್ದಾರೆ. ಅರುಣ್ ರೈ ಪುತ್ತೂರು ಇವರ ಛಾಯಾಗ್ರಹಣ, ಸಂಗೀತ ಮತ್ತು ಹಿನ್ನೆಲೆ ಸಂಗೀತ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇವರ ಶಿಷ್ಯ ನಿಶಾನ್ ರೈ ಮಠಂತಬೆಟ್ಟು, ಸಾಹಿತ್ಯ :ಕೆ.ಕೆ ಪೇಜಾವರ್ , ಸುಮಂತ್ ಬೈಲಾಡಿ, ಹಿನ್ನೆಲೆ ಗಾಯನ: ಖ್ಯಾತ ಯಕ್ಷಗಾನ ಭಾಗವತರು ಪಟ್ಲ ಸತೀಶ್ ಶೆಟ್ಟಿ, ಕು.ಸಮನ್ವಿ ಆರ್.ರೈ ನುಳಿಯಾಲು, ಚಿತ್ರ ಸಂಕಲನ: ರಾಧೇಶ್ ರೈ ಮೊಡಪ್ಪಾಡಿ ಮತ್ತು ಶ್ರೀನಾಥ್ ಪವಾರ್,ಸಹ ಸಂಕಲನ: ಚರಣ್ ಆಚಾರ್ಯ, ಶೀರ್ಷಿಕೆ ವಿನ್ಯಾಸ: ನಿತಿನ್ ಕಾನಾವು, ವಸ್ತ್ರ ವಿನ್ಯಾಸ: ಸಾತ್ವಿಕಾ ನಿತಿನ್ ರೈ ಕುಂಜಾಡಿ, ಮನೋಜ್ ಕುಮಾರ್, ಸ್ಥಿರಚಿತ್ರ: ಅಭಿಪೂಜಾರ್, ಪ್ರಣವ್ ಭಟ್, ಧ್ವನಿ ಸಂಕಲನ:ಚಿದಾನಂದ ಕಡಬ. ಟಿ.ಟಿ.ಎಸ್ :ಲಾಯ್ ವೇಲೆಂಟೈನ್, ಪ್ರಸಾಧನ: ಕಿಶೋರ್ ಉಪ್ಪಿನಂಗಡಿ, ನಿರ್ಮಾಣದಲ್ಲಿ ಸುಧೀರ್ ಕುಮಾರ್ ಕಲ್ಲಡ್ಕ ಮತ್ತು ರಾಕೇಶ್ ಶೆಟ್ಟಿ ಜಿ ಅವರ ಸಹಕಾರವು ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ದೈವದ ನಂಬಿಕೆ- ಇರುವಿಕೆಯನ್ನು ಮಾತ್ರ ಸಾದರ ಪಡಿಸಲಾಗಿದೆ. ನವರಸ ಭರಿತವಾಗಿರುವ “ಧರ್ಮದೈವ” ತುಳು ಚಲನ ಚಿತ್ರದ ತಾರಾಗಣದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ರೂಪಶ್ರೀ ವರ್ಕಾಡಿ, ದಯಾನಂದ ರೈ ಬೆಟ್ಟಂಪಾಡಿ, ಭರತ್ ಶೆಟ್ಟಿ, ರವಿ ಸಾಲ್ಯಾನ್ (ಸ್ನೇಹಿತ್), ಸಂದೀಪ್ ಪೂಜಾರಿ, ಪುಷ್ಪರಾಜ್ ಬೊಳ್ಳರ್ ,ರಂಜನ್ ಬೋಳಾರ್, ಕೌಶಿಕ್ ರೈ ಕುಂಜಾಡಿ,ದೀಕ್ಷಾ ಡಿ.ರೈ, ಹಾಗೂ ಗ್ರೇಷಿಯಲ್ ಕಲಿಯಂಡ ಕೊಡಗು ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರಗಳು : ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

“ವಿದ್ಯಾರ್ಥಿಗಳು ದೈನಂದಿನ ಆಗುಹೋಗು ತಿಳಿಯಲು ಪತ್ರಿಕೆಗಳನ್ನು ಓದಬೇಕು”-ಸ್ಪೀಕರ್ ಯು.ಟಿ. ಖಾದರ್. “ಪತ್ರಕರ್ತರೇ ಹಾಸ್ಯ ಪ್ರಜ್ಞೆ ಬೆಳೆಸಿಕೊಳ್ಳಿ”-ಭುವನೇಶ್ವರಿ ಹೆಗಡೆ. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯು ಸೋಮವಾರ ಬೆಳಗ್ಗೆ ನಗರದ ಪತ್ರಿಕಾಭವನದಲ್ಲಿ ಜರುಗಿತು. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ಪತ್ರಿಕೆಗಳು ಜನರ ಧ್ವನಿಯಾಗಿ ಸ್ವಾತಂತ್ರ್ಯ ಪೂರ್ವದಿಂದಲೇ ಕಾರ್ಯ ನಿರ್ವಹಿಸುತ್ತ ಬಂದಿವೆ. ಅಂಬೇಡ್ಕರ್, ಗಾಂಧೀಜಿ ಕೂಡ ಜನರನ್ನು ತಲುಪಲು ಪತ್ರಿಕೆಯನ್ನು ಆರಂಭಿಸಿದ್ದರು. ಇಂದು ಬದಲಾದ ಕಾಲಘಟ್ಟದಲ್ಲಿ ಪತ್ರಿಕೆಗಳ ಸ್ವರೂಪ ಬದಲಾಗಿದೆ. ವಿದ್ಯಾರ್ಥಿಗಳು ದೈನಂದಿನ ಆಗುಹೋಗು ತಿಳಿಯಲು ಪ್ರತಿನಿತ್ಯ ಪತ್ರಿಕೆಗಳನ್ನು ಓದಬೇಕು. ನಾನು ಚಿಕ್ಕಂದಿನಲ್ಲಿ ಪತ್ರಿಕೆ ಓದುವುದರ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೆ. ಪತ್ರಿಕೆಯನ್ನು ಕಾದು ಕುಳಿತು ತಗೊಂಡು ಅಲ್ಲೇ ಕೂತು ಓದುವಷ್ಟು ಆಸಕ್ತಿ ನನ್ನಲ್ಲಿತ್ತು. ಭಾಷೆಯ ಬಗ್ಗೆ ಹಿಡಿತ ಹೊಂದಲು ಪತ್ರಿಕೆ ಓದುವುದು ಸಹಕಾರಿ. ಸಮಾಜದಲ್ಲಿ ಶಾಂತಿ ಸಾಮರಸ್ಯ ಕಾಪಾಡುವಲ್ಲಿ ಪತ್ರಕರ್ತರ ಕೊಡುಗೆ ಹೆಚ್ಚಿದೆ. ಪತ್ರಕರ್ತರು ವಾಸ್ತವವನ್ನು ಅರಿತುಕೊಂಡು ಕೆಲಸ ಮಾಡಬೇಕು” ಎಂದರು. ಬಳಿಕ ಸಂವಾದ ಕಾರ್ಯಕ್ರಮದಲ್ಲಿ ಮಾತಾಡಿದ ನಿವೃತ್ತ ಉಪನ್ಯಾಸಕಿ ಭುವನೇಶ್ವರಿ ಹೆಗಡೆ ಅವರು, “ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ವಿಷಯವನ್ನು ಉತ್ಪ್ರೇಕ್ಷೆ ಮಾಡಿ ಬರೆಯಬಾರದು. ಪತ್ರಕರ್ತರು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬಾರದು. ಪತ್ರಕರ್ತರು ಸ್ವಸ್ಥ ಸಮಾಜದ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ಪತ್ರಕರ್ತರು ಹಾಸ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಿ. ಇದರಿಂದ ಒತ್ತಡ ಕಡಿಮೆಯಾಗಿ ನಿಮ್ಮ ಅರೋಗ್ಯ ಸುಸ್ಥಿತಿಯಲ್ಲಿ ಇರುತ್ತದೆ” ಎಂದರು. ವೇದಿಕೆಯಲ್ಲಿ ಮೂಡಾದ ಅಧ್ಯಕ್ಷ ಸದಾಶಿವ ಉಳ್ಳಾಲ್,ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ವಾರ್ತಾ ಸಾರ್ವಜನಿಕ ಇಲಾಖೆ ಸಹಾಯಕ ಖಾದರ್ ಶಾ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು.ಹಿರಿಯ ಪತ್ರಿಕಾ ವಿತರಕ ತಾರನಾಥ್ ಅವರನ್ನು ಇದೇ ಸಂದರ್ಭದಲ್ಲಿ ಅತಿಥಿಗಳು ಸನ್ಮಾನಿಸಿದರು.ಛಾಯಾಗ್ರಾಹಕ ಸತೀಶ್ ಇರಾ ದೇವರನ್ನು ಸ್ತುತಿಸಿದರು. ಶ್ರೀನಿವಾಸ್ ಇಂದಾಜೆ ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ವಿಜಯ್ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ತುಳು ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಭಾರತದ ಅತಿ ದೊಡ್ಡ OTT App – Book My Show Stream ನಲ್ಲಿ ಪ್ರದರ್ಶನ ಕಾಣುತ್ತಿರುವ ಮೊಟ್ಟ ಮೊದಲ ತುಳು ಸಿನಿಮಾ ‘One And Only Gabbar Singh’

ಮಂಗಳೂರು :ಭಾರತದ ಯಾವುದೇ ಜಾಗದಲ್ಲಿ ನಿಮ್ಮ ಮನೆಯಲ್ಲೇ ಕೂತು Tv , Android Mobile , I Phone (IOS) ನಲ್ಲಿ ನೋಡುವ ಅವಕಾಶ.ಜೂನ್ 28 ರಿಂದ Book My Show Stream ನಲ್ಲಿ ಸೂಪರ್ ಹಿಟ್ ತುಳು ಸಿನಿಮಾ “One And Only Gabbar Singh” ಸಿನಿಮಾ ನೋಡಲು ಏನು ಮಾಡಬೇಕು ? ನಿಮ್ಮ ಮೊಬೈಲ್ ನಲ್ಲಿ Book My Show App Download ಮಾಡಿಕೊಳ್ಳಿ Search Button ಒತ್ತಿ ‘One And Only Gabbar Singh’ ಎಂದು Type ಮಾಡಿ. ಸಿನಿಮಾದ Profile Display ಆಗುತ್ತದೆ ಅದರ ಹತ್ತಿರವೇ ಕೆಂಪು ಬಣ್ಣದಲ್ಲಿ Rent-89rs Buy-149rs ಕಾಣುವ Button Click ಮಾಡಿ Payment Mode ತುಂಬಾ Easy ಇದೆ. 89rs ಕೊಟ್ಟು 1 ಬಾರಿ ಸಿನಿಮಾ ನೋಡಬಹುದು,149rs ಕೊಟ್ಟರೆ ಸಿನಿಮಾವನ್ನು app ನಲ್ಲೇ ಖರೀದಿಸಿ ಯಾವಾಗ ಬೇಕಾದರೂ ನೋಡಬಹುದು.ಮಂಗಳೂರು, ಉಡುಪಿ ನಲ್ಲಿ ಮಾತ್ರ ತುಳು ಸಿನಿಮಾ ನೋಡಬಹುದೇ ಎಂದು ಕೇಳುತ್ತಿದ್ದ ತುಳುವರಿಗೆ ಇದೊಂದು ಅತಿ ದೊಡ್ಡ ಸಂತಸದ ಸುದ್ದಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಸಿನಿಮಾ ನೋಡೋಣ ಭಾರತದ ಅತಿ ದೊಡ್ಡ OTT App ನಲ್ಲಿ ನಮ್ಮ ತುಳುವರ ಒಗಟ್ಟು, ಶಕ್ತಿಯನ್ನು ಪ್ರದರ್ಶಿಸೋಣವೆಂದು ಗಬ್ಬರ್ ಸಿಂಗ್ ಸಿನೆಮಾದ ನಿರ್ಮಾಪಕ, ನಿರ್ದೇಶಕ ಸತೀಶ್ ಪೂಜಾರಿ ಬಾರಕೂರು ಅವರು ಹೇಳಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ದೈಹಿಕ ಮಾನಸಿಕ ಆರೋಗ್ಯಕ್ಕೆ ಯೋಗಾಭ್ಯಾಸ ಅಗತ್ಯ -ನಟರಾಜ್

ಮಂಗಳೂರು,ಜೂ.29;ದೈಹಿಕ,ಮಾನಸಿಕ ಆರೋಗ್ಯಕ್ಕೆ ಯೋಗಾಭ್ಯಾಸ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ಇಲಾಖೆಯ ಎಸ್.ಪಿ ನಟರಾಜ್ ಹೇಳಿದರು.ಅವರು ಶನಿವಾರ ಪತ್ರಿಕಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದೇವಿಕಾ ಯೋಗ ಕ್ಲಾಸ್ ಕೇಂದ್ರದ ನಿರ್ದೇಶಕಿ ದೇವಿಕಾ ಪುರುಷೋತ್ತಮ್ ಇವರ ನೇತ್ರತ್ವದಲ್ಲಿ ನಡೆದ ಪತ್ರಕರ್ತರ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಯೋಗಾಭ್ಯಾಸ ಎಂದರೆ ಕೇವಲ ದೈಹಿಕ ಅಂಗಾಂಗಗಳನ್ನು ಬಳಸಿ ಆಸನಗಳನ್ನು ಮಾಡುವುದು ಮಾತ್ರವಲ್ಲ, ಯೋಗದಿಂದ ನಮ್ಮ ಮನಸ್ಸು ಹಾಗೂ ನಮ್ಮ ಚಟುವಟಿ ಕೆಗಳನ್ನು ಹೆಚ್ಚು ಉತ್ಸಾಹದಿಂದ ಮಾಡಲು ಸಹಕಾರಿ ಇದರಿಂದ ಯೋಗ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ ಎಂದರು.ದೇವಿಕಾ ಯೋಗ ತರಬೇತಿ ಕೇಂದ್ರದ ಶಿಕ್ಷಕಿ ದೇವಿಕಾ ಪುರುಷೋತ್ತಮ ಮಾತನಾ ಡುತ್ತಾ,ಯೋಗ ತರಬೇತಿ ನೀಡುವವರು ವ್ಯಕ್ತಿಯ ಮಾನಸಿಕ,ದೈಹಿಕ ಸ್ಥಿತಿಯನ್ನು ಅರಿತುಕೊಂಡು ಆತನಿಗೆ ಪೂರಕವಾದ ಯೋಗ ತರಬೇತಿ ನೀಡಿದಾಗ ಆತನ ದೇಹದ ಅಂಗಾಂಗಗಳಲ್ಲಿ ಶಕ್ತಿ ತುಂಬಲು ಸಾಧ್ಯ ಮತ್ತು ಮಾನಸಿಕ ಆರೋಗ್ಯ ವರ್ಧನೆಗೆ ಸಹಾಯವಾಗುತ್ತದೆ ಎಂದರು. ಯೋಗ ಶಿಬಿರದ ಮೂಲಕ ಬಂದಿರುವ ಗುರು ದಕ್ಷಿಣೆಯನ್ನು ಸಾಮಾಜಿಕ ಕಾರ್ಯ ಚಟುವಟಿಕೆ ಗಳಿಗೆ ಬಳಸಲಾಗಿದೆ. ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ಆಶ್ರಮಗಳಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.ಐಎಂಎ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಅವಿನ್ ಆಳ್ವ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ,ಯೋಗದ ಮೂಲಕ ಮಾಡುವ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾದ ಚಟುವಟಿಕೆ ವೈದ್ಯಕೀಯ ಚಿಕಿತ್ಸೆಯಲ್ಲೂ ರೋಗಿಯ ರೋಗ ಗುಣಮುಖವಾಗಲು ಸಹಕಾರಿ ಎಂದರು.ಸಮಾರಂಭದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್, ಉಪಾಧ್ಯಕ್ಷ ಆರಿಫ್ ಪಡುಬಿದ್ರೆ,ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯ ದಯಾ ಕುಕ್ಕಾಜೆ, ಪತ್ರಕರ್ತರಾದ, ಗಿರಿಧರ ಶೆಟ್ಟಿ ಉಪಸ್ಥಿತರಿದ್ದರು.ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.ಪತ್ರಕರ್ತರಿಗೆ ಯೋಗ ಶಿಬಿರ ನಡೆಸಿದ ಯೋಗ ಶಿಕ್ಷಕಿ ದೇವಿಕಾ ಪುರುಷೋ ತ್ತಮ ಇದೇ ಸಂದರ್ಭದಲ್ಲಿ ಅನ್ನಪೂರ್ಣೇಶ್ವರಿ ಅಂಧ ಕಲಾವಿದರ ಸಂಘದ ಕಲಾವಿದರಿಗೆ ತಮಗೆ ನೀಡಿದ ಗೌರವಧನ, ಗುರು ಕಾಣಿಕೆಗಳನ್ನು ಹಾಗೂ ಜೀವನ ಅವಶ್ಯಕ ಸಾಮಗ್ರಿ ಗಳನ್ನು ಹಸ್ತಾಂತರಿಸಿ ಗೌರವಿಸಿದರು.

ಪ್ರಾದೇಶಿಕ ವಾರ್ತೆಗಳು

ಡ್ರಾಮಾ ಜೂನಿಯರ್‌ ವಿಜೇತೆಗೆ ವಿಪ್ರ ಸನ್ಮಾನ. ವಿಪ್ರಸಮಾಗಮ ವೇದಿಕೆಯ ಪ್ರತಿಭಾ ಪುರಸ್ಕಾರ; ರಿಷಿಕಾ ಕುಂದೇಶ್ವರಗೆ ಸನ್ಮಾನ

ಮಂಗಳೂರು: ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ವಿಪ್ರ ಸಮಾಗಮ ವೇದಿಕೆಯ ಕಲಾ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಝೀ ಕನ್ನಡ ಡ್ರಾಮಾ ಜೂನಿಯರ್ಸ್ ಸೀಸನ್-5ರ ವಿಜೇತೆ ರಿಷಿಕಾ ಕುಂದೇಶ್ವರಗೆ ಗೌರವ ಸನ್ಮಾನ ನಡೆಯಿತು.ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್, ಕಾರ್ಯದರ್ಶಿ ಎಸ್. ಪ್ರದೀಪ ಕುಮಾರ ಕಲ್ಕೂರ, ಟ್ರಸ್ಟಿ ಸುಧಾಕರ ರಾವ್ ಪೇಜಾವರ, ಎಸ್.ಕೆ. ಡಿ. ಬಿ. ಅಸೋಸಿಯೇಶನ್ ಅಧ್ಯಕ್ಷ ಪ್ರಭಾಕರ ರಾವ್ ಪೇಜಾವರ, ರಿಷಿಕಾ ಪೋಷಕರಾದ ಜಿತೇಂದ್ರ ಕುಂದೇಶ್ವರ, ಸಂಧ್ಯಾ ಕುಂದೇಶ್ವರ, ಪದಾಧಿಕಾರಿಗಳಾದ ರಮಾಮಣಿ ಭಟ್, ಪದ್ಮಾ ಭಿಡೆ, ಕೆ. ಎಲ್. ಉಪಾಧ್ಯಾಯ, , ಸುಬ್ರಹ್ಮಣ್ಯ ರಾವ್, ಶೇಷಾದ್ರಿ ಭಟ್, ಸುಧಾಕರ ಭಟ್, ಪ್ರಕಾಶ್ ರಾವ್, ಹರೀಶ್ ರಾವ್, ರಘುರಾಮ ರಾವ್, ವಿಘ್ನೇಶ್ ಭಿಡೆ ಉಪಸ್ಥಿತರಿದ್ದರು.ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ವಿಪ್ರ ಸಮಾಗಮ ವೇದಿಕೆಯ ಸದಸ್ಯರು, ಮಕ್ಕಳು, ಮೊಮ್ಮಕ್ಕಳು ಗಾಯನ, ಕೊಳಲು ವಾದನ, ಏಕಪಾತ್ರಾಭಿನಯ, ಭರತನಾಟ್ಯ, ಯಕ್ಷ ನೃತ್ಯ, ಕಿರು ಪ್ರಹಸನ, ನೃತ್ಯ ಭಜನೆ ಪ್ರಸ್ತುತಪಡಿಸಿದರು.ವೇದಿಕೆಯ ಅಧ್ಯಕ್ಷ ರಾಮಕೃಷ್ಣ ರಾವ್ ಸ್ವಾಗತಿಸಿದರು. ಪೂರ್ಣಿಮಾ ಪ್ರಶಾಂತ್ ಶಾಸ್ತ್ರಿ ವಂದಿಸಿದರು. ಕಾರ್ಯದರ್ಶಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್ ನಿಂದ 84 ಸಾವಿರ ಕೃತಕ ಅಂಗಾಂಗ ವಿತರಣೆ -ಡಾ.ಶಾಂತಾರಾಮಶೆಟ್ಟಿ *ಮಾಧ್ಯಮ ಸಂವಾದ

ಮಂಗಳೂರು,ಜೂ.28; ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್ ವತಿಯಿಂದ ಕಳೆದ 50 ವರ್ಷಗಳಲ್ಲಿ ಒಟ್ಟು 84 ಸಾವಿರ ಕೃತಕ ಕಾಲು ಸೇರಿದಂತೆ ಕೃತಕ ಅಂಗಾಂಗ ವಿತರಿಸಲಾಗಿದೆ. ಇದರಲ್ಲಿ ಶೇ.80 ಜನರಿಗೆ ವಿವಿಧ ಸಂಘಸಂಸ್ಥೆಗಳು, ದಾನಿಗಳ ನೆರವಿನಿಂದ ಪೂರ್ತಿ ಉಚಿತವಾಗಿ ಸೌಲಭ್ಯ ಒದಗಿಸಲಾಗಿದೆ ಎಂದು ಸೆಂಟರ್‌ನ ನಿರ್ದೇಶಕ, ಖ್ಯಾತ ಮೂಳೆ ತಜ್ಞ ಡಾ.ಶಾಂತಾರಾಮ ಶೆಟ್ಟಿ ತಿಳಿಸಿದರು.ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.ದೈಹಿಕ ಊನತೆ ಹೊಂದಿದವರು ಕಾಲು ಇಲ್ಲದವರಿಗೆ ಕೃತಕ ಕಾಲು ಒದಗಿಸಿ ಸ್ವಾವಲಂಬಿ ವ್ಯಕ್ತಿಯಾಗಿ ರೂಪಿಸುವುದು ಮತ್ತು ಅವರನ್ನು ಕುಟುಂಬ, ಸಮಾಜ ಮತ್ತು ದೇಶಕ್ಕೆ ಆಸ್ತಿಯಾಗಿ ಮಾರ್ಪಡಿಸುವುದು ಯೋಜನೆಯ ಉದ್ದೇಶ ಎಂದು ಅವರು ತಿಳಿಸಿದರು.*ಖ್ಯಾತ ವೇಗದ ಓಟಗಾರ ಹುಸೇನ್ ಬೊಲ್ಟ್ ದಾಖಲೆಯ ಸಮವಾಗಿ ಕೃತಕ ಕಾಲುಗಳಲ್ಲಿ ಓಡಬಲ್ಲರು:- ಒಲಿಂಪಿಕ್ ನಲ್ಲಿ ನಾಲ್ಕು ಚಿನ್ನಗೆದ್ದ ಉಸೇನ್ ಬೋಲ್ಟ್ 100 ಮೀಟರ್ ಓಟವನ್ನು 9.58 ಸೆಕೆಂಡ್ ನಲ್ಲಿ ಕ್ರಮಿಸಿದರೆ ದಕ್ಷಿಣ ಆಫ್ರಿಕಾದ ಆಸ್ಕರ್ ಪಿಸ್ಟೋರಿಸ್ ಕೃತಕ ಕಾಲು ಬಳಸಿ 11 ಸೆಕೆಂಡ್‌ಗಳಲ್ಲಿ ಈ ದೂರವನ್ನು ಕ್ರಮಿಸಿ ದಾಖಲೆ ಬರೆದಿದ್ದಾರೆ.ಖ್ಯಾತ ನೃತ್ಯ ಕಲಾವಿದೆ ಸುಧಾಚಂದ್ರ ಅವರು ಕೃತಕ ಕಾಲು ಧರಿಸಿ ನಿರಂತರ ಒಂದೂವರೆ ತಾಸು ನೃತ್ಯ ಕಾರ್ಯಕ್ರಮ ನೀಡಬಲ್ಲರು. ಇದು ಇಂದಿನ ಆಧುನಿಕ ಕೃತಕ ಅವಯವಗಳು ಮನುಷ್ಯನ ಸಹಜ ಜೀವನಕ್ಕೆ ಅಡ್ಡಿಯಾಗಲಾರದು ಎನ್ನುವುದನ್ನು ತೋರಿಸುತ್ತದೆ ಮತ್ತು ಅವರಿಗೆ ಸ್ಫೂರ್ತಿಯಾಗಿದೆ ಎಂದು ಡಾ.ಶಾಂತಾರಾಮ ಶೆಟ್ಟಿ ಉದಾಹರಣೆ ನೀಡಿದರು.ಹೊಂದಿದ್ದಾರೆ.ಅಂತಹ ಸುಧಾರಿತ ಕೃತಕ ಕಾಲುಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಂತರಾಮ ಶೆಟ್ಟಿ ತಿಳಿಸಿದರು.ವೆನ್ಲಾಕ್ ಕೇಂದ್ರದಲ್ಲಿ ಬಹುಪಯೋಗಿ ಅಪ್ಪರ್ ಲಿಂಬ್ (ಕೃತಕ ಕಾಲಿನ ತೊಡೆ ಸೇರಿ ದಂತೆ ) ಅಂಗಾಂಗಗಳ ತಯಾರಿಕೆ ಮತ್ತು ಪೂರೈಕೆ ಮುಂದಿನ ಕನಸು. ಆದರೆ ಈ ಯೋಜನೆ ಅತ್ಯಂತ ದುಬಾರಿಯಾಗಿದ್ದು, ಪರಿಣಿತ ತಂತ್ರಜ್ಞರ ಕೊರತೆ ತುಂಬಾ ಇದೆ. ಪ್ರಸ್ತುತ, ಜೈಪುರ, ಮುಂಬೈ ಕೊಲ್ಕತ್ತ ಸಹಿತ ದೇಶದ ಸುಮಾರು ನಾಲ್ಕು ಕೇಂದ್ರಗಳಲ್ಲಿ ಮಾತ್ರ ಈ ಸೌಲಭ್ಯವಿದೆ. ಪ್ರಸ್ತುತ ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ಹಾಗೂ ಬಹುಪಯೋಗಿ ಕೃತಕ ಕಾಲುಗಳನ್ನು ಲಯನ್ಸ್ ಲಿಂಬ್ ಸೆಂಟರ್‌ನಲ್ಲಿ ಉತ್ಪಾದಿಸಲಾಗುತ್ತಿದೆ. ಕೃತಕ ಕಾಲಿನ ಆವಶ್ಯಕತೆ ಇರುವ ಆರ್ಥಿಕವಾಗಿ ತುಂಬಾ ಕಷ್ಟದಲ್ಲಿ ಇರುವವರು ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಅವರು ಮಾಹಿತಿ ನೀಡಿದರು.ಅಪಘಾತದಿಂದ ಅಂಗಾಂಗ ಕಳೆದು ಕೊಳ್ಳುವವರು ಅಧಿಕ:- ಹಿಂದೆ ಮಾರಕ ರೋಗಗಳಾದ ಕುಷ್ಠ ರೋಗ, ಪೋಲಿ ಯೋದಿಂದ ಅಂಗಾಂಗ ಊನತೆ ಹೊಂದಿದವರು ಹೆಚ್ಚಿದ್ದರು‌ ಅವರಿಗೆ ಚಿಕಿತ್ಸೆ ನೀಡಬೇಕಾಗಿತ್ತು ,ಆದರೆ ಇತ್ತೀಚಿಗೆ ಅಪಘಾತಗಳಲ್ಲಿ ಕಾಲು ಕಳೆದುಕೊಂಡವರ ಸಂಖ್ಯೆ ಹೆಚ್ಚು. ಇಂತವರಿಗೆ ಕೃತಕ ಕಾಲು ಆವಶ್ಯಕತೆ ಬೀಳುತ್ತದೆ.ಪೋಲಿಯೋ ಸಮಸ್ಯೆ ಇಲ್ಲ. ಕುಷ್ಠ ರೋಗ ನಿಯಂತ್ರಣದಲ್ಲಿದೆ. ದೇಶದಲ್ಲಿ ನಾಲ್ಕು ನಿಮಿಷಕ್ಕೆ ಒಬ್ಬರು ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ ಅದರಲ್ಲಿ ಕುಡಿತದಿಂದ ಆಗುವ ಅಪಘಾತ ಅಧಿಕ .ಈ ಬಗ್ಗೆ ಯುವ ಜನರಲ್ಲಿ ಅಗತ್ಯವಿದೆ ಎಂದು ಅವರು ವಿವರ ನೀಡಿದರು.ಪ್ರೆಸ್‌ಕ್ಲಬ್ ನಿಂದ ನೆರವುವರ್ಷದಲ್ಲಿ ಅರ್ಹ ಇಬ್ಬರು ವ್ಯಕ್ತಿಗಳಿಗೆ ಕೃತಕ ಕಾಲು ಒದಗಿಸಲು ಮಂಗಳೂರು ಪ್ರೆಸ್‌ಕ್ಲಬ್ ವತಿಂದ ನೆರವು ನೀಡಲಾಗುವುದು ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅವರು ಈ ಸಂದರ್ಭದಲ್ಲಿ ಪ್ರಕಟಿಸಿದರು.ದಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್ ಕೋಶಾಧಿಕಾರಿ ಡಾ.ಕೆ. ಆರ್.ಕಾಮತ್,ವ್ಯವಸ್ಥಾಪಕ ಸುರೇಶ್ ಶೆಟ್ಟಿ, ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಉಪಸ್ಥಿತರಿದ್ದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಕೆ. ಬಾಲರಾಜ್ ಆಯ್ಕೆ.

ಬೆಂಗಳೂರು :ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ನೌಕರ ಸಂಘಕ್ಕೆ ಜೂನ್ 26ರಂದು ಬೆಂಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ. ಬಾಲರಾಜ್ ಅವರು ಆಯ್ಕೆಯಾಗಿದ್ದಾರೆ. ಮಂಗಳೂರಿನ ಇಂಜಿನಿಯರ್‌ ಎಚ್. ಎಸ್.ಗುರುಮೂರ್ತಿ ಯವರು ಮೂರನೇ ಬಾರಿಗೆ ಉಪಾಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ. ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿ ಪುಣೆ-ಮೂಡಬಿದ್ರಿ ಇವರ ನೇತೃತ್ವದಲ್ಲಿ ಕಲ್ಲಬೆಟ್ಟುವಿನಲ್ಲಿ ಜುಲೈ 14 ರಂದು ಮಕ್ಕಳ ಉಚಿತ ಅರೋಗ್ಯ ತಪಾಸಣೆ ಮತ್ತು ಅಪೌಷ್ಟಿಕತೆ ನಿವಾರಣಾ ಶಿಬಿರ.

ಕಲ್ಲಬೆಟ್ಟು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುಧಾಕಾರ್ ಶೆಟ್ಟಿ ನೇತೃತ್ವದಲ್ಲಿ ಜುಲೈ 14ರಂದು ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಅಕ್ಷರಧಾಮದಲ್ಲಿ ಮಕ್ಕಳ ಉಚಿತ ಅರೋಗ್ಯ ತಪಾಸಣೆ ಮತ್ತು ಅಪೌಷ್ಟಿಕತೆ ನಿವಾರಣಾ ಶಿಬಿರ ನಡೆಯಲಿದೆ. ಇದಕ್ಕೆ ಡಾ. ಮೋಹನ್ ಆಳ್ವರ ಆಳ್ವಾಸ್ ಹೆಲ್ತ್ ಸೆಂಟರ್ ಮೂಡಬಿದ್ರಿ ಇವರ ಸಹಕಾರವಿ ದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಪ್ರಾದೇಶಿಕ ವಾರ್ತೆಗಳು

“ಪಾಸಿಟಿವ್ ವರದಿಗಳು ಕೋಮು ಸೌಹಾರ್ದತೆಗೆ ಪೂರಕ”-ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್. ಪತ್ರಕರ್ತ ಮಿಥುನ್ ಕೊಡೆತ್ತೂರುಗೆ “ಬ್ರಾಂಡ್ ಮಂಗಳೂರು” ಪ್ರಶಸ್ತಿ ಪ್ರದಾನ

ಮಂಗಳೂರು: ಸೌಹಾರ್ದ ಮಂಗಳೂರು ಸ್ಥಾಪಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಬ್ರಾಂಡ್ ಮಂಗಳೂರು 2024ನೇ ಪ್ರಶಸ್ತಿಯನ್ನು ಹೊಸದಿಗಂತ ಪತ್ರಿಕೆಯ ವರದಿಗಾರ ಮಿಥುನ್ ಕೊಡೆತ್ತೂರು ಅವರಿಗೆ ಪ್ರದಾನ ಮಾಡಲಾಯಿತು. ನಗರದ ಪತ್ರಿಕಾ ಭವನದಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಪ್ರಶಸ್ತಿ ಪ್ರದಾನಗೈದು ಮಾತಾಡಿದರು. “ಪ್ರತಿಯೊಂದು ಕಡೆಯಲ್ಲೂ ಪಾಸಿಟಿವ್ ಮತ್ತು ನೆಗೆಟಿವ್ ಅಭಿಪ್ರಾಯ ಇದ್ದೇ ಇರುತ್ತದೆ. ನಾವು ನೋಡುವ ರೀತಿ ಪಾಸಿಟಿವ್ ಆಗಿದ್ದರೆ ಎಲ್ಲವೂ ಪಾಸಿಟಿವ್ ಆಗಿಯೇ ಗೋಚರಿಸುತ್ತದೆ. ಮಂಗಳೂರು ಅನ್ನುವುದೇ ಒಂದು ದೊಡ್ಡ ಬ್ರಾಂಡ್. ಬೇರೆ ಕಡೆಗಿಂತ ಇಲ್ಲಿನ ಜನರು ಭಿನ್ನವಾಗಿದ್ದಾರೆ. ಇಲ್ಲಿನ ಜನರು ವಿಶ್ವದಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಕಳೆದೆರಡು ದಶಕಗಳಿಂದ ಇಲ್ಲಿ ಕೋಮು ಗಲಭೆ, ವೈಷಮ್ಯ ಬೆಳೆದಿದೆ. ಇದನ್ನು ಮಟ್ಟಹಾಕಲು ಪತ್ರಕರ್ತರ ನೆರವು ಅಗತ್ಯ. ಪಾಸಿಟಿವ್ ವರದಿಗಳ ಅಗತ್ಯವಿದೆ. ಆ ಕೆಲಸವನ್ನು ಮಾಡುವ ಪತ್ರಕರ್ತರಿಗೆ ಪ್ರಶಸ್ತಿ ನೀಡುವುದು ಖುಷಿಯ ವಿಚಾರ” ಎಂದರು. ಬಳಿಕ ಮಾತಾಡಿದ ಮಿಥುನ್ ಕೊಡೆತ್ತೂರು ಅವರು, “ಸಮಾಜದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ದೇವಸ್ಥಾನಗಳಿಗೆ ಹೂವು ಕೊಂಡೊಯ್ಯುವಾಗ ಅದನ್ನು ಮುಸ್ಲಿಮರು ಅಥವಾ ಕ್ರೈಸ್ತರು ಬೆಳೆದಿದ್ದಾರೆಯೇ ಎಂದು ನೋಡುವುದಿಲ್ಲ. ಅದೇ ರೀತಿ ತಿನ್ನುವ ಅನ್ನ ಯಾರು ಬೆಳೆದಿದ್ದಾರೆ ಅನ್ನೋದು ತಿಳಿದಿರುವುದಿಲ್ಲ. ಎಲ್ಲವೂ ನಮ್ಮಲ್ಲಿನ ಚಿಂತನೆಯಲ್ಲಿ ಅಡಕವಾಗಿರುತ್ತದೆ” ಎಂದರು.ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, “ದಕ್ಷಿಣ ಕನ್ನಡ ಜಿಲ್ಲೆಯ ಜನರು ಪರಿಶ್ರಮದಿಂದ ಮೇಲೆ ಬಂದವರು. ಇಲ್ಲಿನ ಜನರು ಎಲ್ಲ ಭಾಷೆಯನ್ನು ಮಾತಾಡುತ್ತಾರೆ. ಮಂಗಳೂರಲ್ಲಿ ಹುಟ್ಟಿರುವುದೇ ನಮ್ಮೆಲ್ಲರ ಭಾಗ್ಯ. ಇಲ್ಲಿನ ಪತ್ರಕರ್ತರು ಸಾಮಾಜಿಕ ವ್ಯವಸ್ಥೆಯಲ್ಲಿನ ಸರಿ ತಪ್ಪುಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಕೋಮು ಸೌಹಾರ್ದ ಸ್ಥಾಪಿಸುವ ನಿಟ್ಟಿನಲ್ಲಿ ಬ್ರಾಂಡ್ ಮಂಗಳೂರು ಪ್ರಶಸ್ತಿಯನ್ನು ಪತ್ರಕರ್ತರ ಸಂಘ ಕೊಡುತ್ತಿರುವುದು ಒಳ್ಳೆಯ ವಿಚಾರ” ಎಂದರು.ವೇದಿಕೆಯಲ್ಲಿ ಕ್ಯಾ. ಗಣೇಶ್ ಕಾರ್ಣಿಕ್, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೋ, ಆಯುಷ್ ಇಲಾಖೆಯ ಮುಹಮ್ಮದ್ ಇಕ್ಬಾಲ್,ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ ಮತ್ತಿತರರು ಉಪಸ್ಥಿತರಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ ಎನ್ ನಿರೂಪಿಸಿ,ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪಾಜಕಕ್ಷೇತ್ರಕ್ಕೆ ಬರುವ ರಸ್ತೆಯನ್ನು ತಕ್ಷಣ ಸರಿಪಡಿಸುವ ಬಗ್ಗೆ ಉಡುಪಿ ಡಿಸಿಯವರಿಗೆ ಸಾರ್ವಜನಿಕರ ಮನವಿ.

ಉಡುಪಿ :ಉಡುಪಿ ಜಿಲ್ಲೆಯ ಪಾಜಕ ಕ್ಷೇತ್ರ ಪ್ರೇಕ್ಷಣೀಯ ಸ್ಥಳ ಮತ್ತು ಇತಿಹಾಸ ಪ್ರಸಿದ್ಧ ಶ್ರೀಮನ್ ಮಧ್ವಾಚಾರ್ಯರ ಜನ್ಮಸ್ಥಳವಾಗಿದೆ. ಅನಂತ ಪದ್ಮನಾಭ ದೇವರ ಸನ್ನಿಧಿ ಇರುವ ಪಾಜಕಕ್ಷೇತ್ರಕ್ಕೆ ದೇವರ ದರ್ಶನ ಮಾಡಲು ದೇಶದ ಹಲವೆಡೆಯಿಂದ, ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಬಸ್ಸು , ಟೆಂಪೋ, ಕಾರುಗಳಲ್ಲಿ ದಿನ ನಿತ್ಯ ಆಗಮಿಸುತ್ತಿದ್ದಾರೆ. ಅಲ್ಲದೆ, ಪೇಜಾವರ ಮಠದ ವತಿಯಿಂದ ಆನಂದ ತೀರ್ಥ ವಿದ್ಯಾ ಸಂಸ್ಥೆ ಸಹ ಕಾರ್ಯ ನಿರ್ವಹಿಸುತ್ತಿದೆ. ಈ ರಸ್ತೆಯಲ್ಲಿ ದಿನಕ್ಕೆ ಕನಿಷ್ಠ ಪಕ್ಷ 50ರಿಂದ 70ರಷ್ಟು ಬೃಹತ್ ಮತ್ತು ಮಧ್ಯಮ ಗಾತ್ರದ ವಾಹನಗಳು ಸಂಚರಿಸುತ್ತವೆ. ಇದೀಗ ಸಮಸ್ಯೆ ಏನೆಂದರೆ, ಕಾಪು ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇರುವ ಕಾರಣ, ಬೆಳ್ಳೆಯ ನದಿಯಿಂದ ನೀರನ್ನು ಕುಂಜಾರುಗಿರಿ ದೇವಸ್ಥಾನದ ಬಳಿ ಬೃಹತ್ ಟ್ಯಾಂಕ್ ನಿರ್ಮಿಸಿಕೊಂಡು, ಅಲ್ಲಿಂದ ನೀರನ್ನು ಕಾಪು ಗೆ ಪಂಪ್ ಮಾಡುವ ವ್ಯವಸ್ಥೆಯ ಕಾಮಗಾರಿ ಹಲವು ಸಮಯದಿಂದ ನಡೆಯುತ್ತಿದೆ. ಹಿಂದೊಮ್ಮೆ ರಸ್ತೆ ಅಗೆದು ಪೈಪ್ ಲೈನ್ ಹಾಕಿದ್ದು, ಇದೀಗ ಮತ್ತೊಮ್ಮೆ ಡಾಮರೀಕರಣಗೊಂಡ ರಸ್ತೆ ಅಗೆದು ಪೈಪ್ ಲೈನ್ ಹಾಕುವ ಕಾರ್ಯ ನಡೆದಿದೆ.ಆದರೆ,ಮಾರ್ಗದ ಮಧ್ಯೆ ಅಗೆದು ಪೈಪ್ ಲೈನ್ ಹಾಕುವ ಕಾಮಗಾರಿ ಮುಗಿದಿದ್ದರೂ, ಕಾಮಗಾರಿ ನಡೆಸಿದ ಗುತ್ತಿಗೆದಾರರು ರಸ್ತೆ ಅಗೆದ ನಂತರ ಅದನ್ನು ಪುನಃ ಸರಿ ಪಡಿಸುವ ಗೋಜಿಗೆ ಹೋಗಲಿಲ್ಲ. ಈ ರಸ್ತೆಯಲ್ಲಿ ಪ್ರತಿನಿತ್ಯ ಹಲವಾರು ವಾಹನಗಳು ಸಂಚರಿಸುತ್ತಿದ್ದು,ಪ್ರಸಕ್ತ ಅಡ್ಡಾದಿಡ್ಡಿ ರಸ್ತೆ ಅಗೆತದಿಂದ ದಿನಂಪ್ರತಿ ಎನ್ನುವಂತೆ ಅಪಘಾತಗಳು ಸಂಭವಿಸುತ್ತಿದೆ. ಯಾತ್ರಾರ್ಥಿಗಳು ದೂರದ ಊರುಗಳಿಂದ ಬರುತ್ತಿರುವ ಕಾರಣ ,ಅಪಘಾತ ನಡೆದರೂ ಪೊಲೀಸರಿಗೆ ಮಾಹಿತಿ ನೀಡದೆ ರಾಜಿ ಪಂಚಾಯಿತಿ ಮೂಲಕ ಪ್ರಕರಣವನ್ನು ಮುಗಿಸಿ ಹೋಗುತ್ತಿದ್ದಾರೆ. ರಸ್ತೆ ರಿಪೇರಿ ನಡೆಸುವ ಬಗ್ಗೆ ಸ್ಥಳೀಯ ಗುತ್ತಿಗೆದಾರರ ಬಳಿ ವಿಚಾರಿಸಿದರೆ, ಅದು ಪಂಚಾಯತ್ ನವರ ಕೆಲಸ ಅಂತ ಹೇಳಿ ನುಣುಚಿಕೊಳ್ಳುತ್ತಾರೆ.ಅಲ್ಲದೆ,ಅಪಘಾತ ನಡೆದ ಸಂದರ್ಭ ಯಾತ್ರಿಕರ ಬಳಿ ಸಹ ಉಡಾಫೆ ಹೇಳಿಕೆ ನೀಡುತ್ತಾರೆ. ಸದ್ರಿ ವಿಷಯಕ್ಕೆ ಸಂಬಂದ ಪಟ್ಟಂತೆ ದಯಾಳುಗಳಾದ ತಾವು ಒಮ್ಮೆ ಗಮನ ಹರಿಸಿ ಸುಭಾಸ್ ನಗರದಿಂದ ಪಾಜಕಕ್ಷೇತ್ರ ಕ್ಕೆ ಹೋಗುವ ರಸ್ತೆಯನ್ನು ಸರಿಪಡಿಸಿ ಕೊಡಬೇಕೆಂದು ಸರ್ವ ನಾಗರಿಕರ ಪರವಾಗಿ ಕೇಳಿಕೊಳ್ಳುತ್ತೇವೆ. ಪೇಜಾವರ ಮಠದ ಆನಂದ ತೀರ್ಥ ವಿಧ್ಯಾಲಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಓದುತಿದ್ದಾರೆ. ಹಾಗಾಗಿ ಇಲ್ಲಿ ಏನಾದರೂ ಅವಘಡ ಸಂಭವಿಸಿದರೆ ಇಡೀ ಊರಿಗೆ ಕಳಂಕ ಬರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಗಮನ ಹರಿಸಿ ತಕ್ಷಣ ರಸ್ತೆಯನ್ನು ಸರಿಪಡಿಸಿ ಕೊಡಬೇಕೆಂದು ಕೇಳಿ ಕೊಳ್ಳುತ್ತೇವೆಂದು ಸಾರ್ವಜನಿಕರು ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.

Scroll to Top