ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಅಮೃತಾನಂದಮಯಿ ಮಠದಲ್ಲಿ ಯೋಗಶಿಬಿರ ಉದ್ಘಾಟನೆ

ಮಂಗಳೂರು: ನಗರದ ಬೋಳೂರು ಅಮೃತಾನಂದಮಯಿ ಮಠದ ಆಶ್ರಯದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಹಾಗೂ ಬಳಗದವರಿಂದ ಯೋಗತರಬೇತಿ ಶಿಬಿರವನ್ನು ಸೋಮವಾರ ದಿನಾಂಕ 19ರಂದು ಉದ್ಘಾಟಿಸಲಾಯಿತು. ಮಠದ ದೇವಸ್ಥಾನ ಸಮಿತಿ ಸದಸ್ಯರಾದ ಮುರಳೀಧರ್ ಶೆಟ್ಟಿಯವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶರೀರ ಹಾಗೂ ಮನಸ್ಸಿನ ಸ್ವಾಸ್ಥ್ಯ ರಕ್ಷಣೆಯೊಂದಿಗೆ ದೀರ್ಘಾಯುಷ್ಯ ಹೊಂದಲು ಯೋಗ ಬಹಳ ಸರಳ ವಿಧಾನ. ಗೋಪಾಲಕೃಷ್ಣ ದೇಲಂಪಾಡಿಯವರು ಸಾರ್ವಜನಿಕರ ಹಿತದೃಷ್ಟಿಯಿಂದ ಹಲವಾರು ವರ್ಷಗಳಿಂದ ಶಿಬಿರಗಳನ್ನು ನಡೆಸುತ್ತಿದ್ದಾರೆ. ಅವರ ಈ ಸೇವೆ ಎಲ್ಲರಿಗೂ ಮಾದರಿಯಾಗಲಿ ಎಂದು ಹೇಳಿದರು. ಪ್ರಾರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾಡಿದ ಸೇವಾ ಸಮಿತಿಯ ಅಧ್ಯಕ್ಷರಾದ ಡಾ.ವಸಂತಕುಮಾರ್ ಪೆರ್ಲ ಅವರು ಮಾತಾ ಅಮೃತಾನಂದಮಯಿ ಮಠವು ಸಾಮಾಜಿಕ ಸ್ವಾಸ್ಥ್ಯ ರಕ್ಷಣೆಯ ಉದ್ದೇಶದಿಂದ ನಡೆಸುತ್ತಿರುವ ಕಾರ್ಯಕ್ರಮಗಳಲ್ಲಿ ಯೋಗವೂ ಪ್ರಮುಖವಾಗಿದೆ. ದೇಲಂಪಾಡಿ ಪ್ರತಿಷ್ಠಾನದ ಜೊತೆಗೆ ನಡೆಸುತ್ತಿರುವ ಈ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆಯುವಂತಾಗಬೇಕು ಎಂದರು.ಡಾ.ದೇವದಾಸ್ ಪುತ್ರನ್ ವಂದಿಸಿದರು. ಸೇವಾ ಸಮಿತಿಯ ಪದಾಧಿಕಾರಿಗಳಾದ ಭರತ್ ಕುಮಾರ್ ಎರ್ಮಾಳ್, ನಿರಂಜನ್ ಅಡ್ಯಂತಾಯ, ಆಯುಷ್ ವೈದ್ಯಾಧಿಕಾರಿ ಡಾ.ಶ್ರೀದೇವಿ, ಶ್ರೀಮತಿ ವೀಣಾ ಮಾರ್ಲ, ಭಾರತಿ ಎಸ್.ರಾವ್, ಕುಮಾರ್ ಶೆಣೈ, ಸ್ಕಂದ, ದಾಮೋದರ್ , ಹಾಗೂ ಗೋಪಾಲಕೃಷ್ಣದೇಲಂಪಾಡಿಯವರ ಶಿಷ್ಯರು ಮತ್ತು ಅಮ್ಮನ ಭಕ್ತರು ಭಾಗವಹಿಸಿದ್ದರು.ಯೋಗ ತರಬೇತಿಯನ್ನು ಪಡೆಯಲು ಆಸಕ್ತರಿಗೆ ಪ್ರವೇಶಾವಕಾಶ ಇರುತ್ತದೆ. ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ನೋಂದಣಿ ಮಾಡಬಹುದಾಗಿದೆ ಎಂದು ಡಾ.ವಸಂತಕುಮಾರ್ ಪೆರ್ಲ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

ಫೆ.11-15: ಉರ್ವ ಮಾರಿಯಮ್ಮನ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ, ಫೆ.26-ಮಾ.2: ವರ್ಷಾವಧಿ ಉತ್ಸವ, ಮಲರಾಯ ನೇಮೋತ್ಸವ

ಮಂಗಳೂರು: “ಪುರಾಣ ಪ್ರಸಿದ್ಧ ದೇವಸ್ಥಾನಗಳಲ್ಲಿ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಕೂಡಾ ಪ್ರಾಮುಖ್ಯತೆ ಪಡೆದಿರುತ್ತದೆ. ದ.ಕ. ಜಿಲ್ಲೆ ಮಾತ್ರವಲ್ಲದೇ ನಾಡಿನ ಸಮಸ್ತ ವರ್ಗದ ಭಕ್ತಾಭಿಮಾನಿಗಳು ಉರ್ವ ಶ್ರೀ ಮಾರಿಯಮ್ಮ ದೇವಿಯ ಕ್ಷೇತ್ರದ ಬಗ್ಗೆ ಅಪಾರ ಭಕ್ತಿ ಮತ್ತು ನಂಬಿಕೆಯನ್ನಿಟ್ಟು, ಶ್ರದ್ಧೆಯಿಂದ ಆರಾಧಿಸಿಕೊಂಡು ಬಂದಿದ್ದಾರೆ. ಇಂತಹ ದಿವ್ಯ ಮಾತೆಯ ಕ್ಷೇತ್ರದಲ್ಲಿ ಫೆ.11ರಿಂದ 15ರವರೆಗೆ ಬ್ರಹ್ಮಕಲಶೋತ್ಸವವು ನಡೆಯಲಿದ್ದು ಈ ಸಂದರ್ಭದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಪ್ರಚಾರ ರಥದ ಸಂಚಾರ, ಹೊರೆಕಾಣಿಕೆ ಮೆರವಣಿಗೆ, ಬೃಹತ್ ನೂತನ ಸಭಾಂಗಣ ಉದ್ಘಾಟನೆ ನಡೆಯಲಿದೆ” ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ನಾಡೋಜ ಜಿ. ಶಂಕರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. “ಫೆ.26ರಿಂದ ಕ್ಷೇತ್ರದಲ್ಲಿ ವರ್ಷಾವಧಿ ಮಹಾಪೂಜೆ, ಮಾರ್ಚ್ 2ರಂದು ಶ್ರೀ ಲ್ ಮಲರಾಯ ಪರಿವಾರ ದೈವಗಳ ನೇಮೋತ್ಸವ, ಧಾರ್ಮಿಕ ಸಭಾ ಕಲಾಪ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಕೂಡಾ ನೆರವೇರಲಿದೆ. ಈಗಾಗಲೇ ಪ್ರಚಾರ ರಥವು ಸಂಚಾರ ಆರಂಭಿಸಿದೆ” ಎಂದರು. “ಬ್ರಹ್ಮಕಲಶೋತ್ಸವ ಸಲುವಾಗಿ ಹೊರೆಕಾಣಿಕೆ ಮೆರವಣಿಗೆಯು ಫೆ.9ರಂದು ಅಪರಾಹ್ನ ಗಂಟೆ 3ಕ್ಕೆ ನಗರದ ಕೇಂದ್ರ ಮೈದಾನ ಹಾಗೂ ಕೂಳೂರು ಸಮೀಪದ ಗೋಲ್ಡ್ ಪಿಂಚ್ ಮೈದಾನದಿಂದ ಏಕಕಾಲದಲ್ಲಿ ಹೊರಡಲಿದ್ದು ಎರಡೂ ಕಡೆಯ ಹೊರೆಕಾಣಿಕೆ ಮೆರವಣಿಗೆಯು ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ ಒಟ್ಟು ಸೇರಿ ಕ್ಷೇತ್ರಕ್ಕೆ ಆಗಮಿಸಲಿದೆ. ಫೆ.11ರಿಂದ ಬ್ರಹ್ಮಕಲಶೋತ್ಸವದ ವೈದಿಕ ವಿಧಿ-ವಿಧಾನಗಳು ಆರಂಭವಾಗಲಿದ್ದು, ಫೆ.13ರಂದು ದೇವರ ಪುನರ್ ಪ್ರತಿಷ್ಠೆ ನೆರವೇರುತ್ತದೆ. ಫೆ.15ರಂದು ಬ್ರಹ್ಮಕಲಶೋತ್ಸವವು ಸಂಪನ್ನವಾಗಲಿದೆ. ಫೆ.16ರಂದು ವರ್ಷಾವಧಿ ಮಹಾಪೂಜೆಗೆ ಪ್ರಸಾದ ಹಾರಿಸುವಿಕೆ, ಫೆ.23ರಂದು ಚಂಡಿಕಾಯಾಗ, ಫೆ.26 ಹಾಗೂ 27ರಂದು ವರ್ಷಾವಧಿ ಮಹಾಪೂಜೆ ನಡೆಯುತ್ತದೆ. ಮಾ.2ರಂದು ಕ್ಷೇತ್ರದ ಶ್ರೀ ಮಲರಾಯ ಪರಿವಾರ ದೈವಗಳ ನೇಮೋತ್ಸವ ನಡೆಯುವುದರೊಂದಿಗೆ ವರ್ಷಾವಧಿ ಉತ್ಸವ ಮುಕ್ತಾಯವಾಗಲಿದೆ. ಕ್ಷೇತ್ರದ ಮುಂಭಾಗದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನೂತನ ಬೃಹತ್ ಸಭಾಂಗಣದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು ಫೆ.3ರಂದು ಬೆಳಿಗ್ಗೆ ಗಂಟೆ 10.00ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ವೇದಿಕೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಗೌರವ ಸಲಹೆಗಾರ ಜಯ ಸಿ. ಕೋಟ್ಯಾನ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಕರ್ಕೇರ, ಪ್ರಧಾನ ಸಂಚಾಲಕ ಗೌತಮ್ ಸಾಲ್ಯಾನ್ ಕೋಡಿಕಲ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಬಂಗೇರ ಬೋಳೂರು, ಉಪಾಧ್ಯಕ್ಷ ಕುಮಾರ್ ಮೆಂಡನ್ ಬೈಕಂಪಾಡಿ, ಕೋಶಾಧಿಕಾರಿ ವಸಂತ ಅಮೀನ್ ಬೈಕಂಪಾಡಿ, ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಲೋಕೇಶ್ ಸುವರ್ಣ, ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್ ಕೋಡಿಕಲ್, ಪ್ರಚಾರ ಸಮಿತಿಯ ಯಶವಂತ ಬೋಳೂರು, ಪ್ರಧಾನ ಅರ್ಚಕ ಶಿವಾನಂದ ಕನ್ನಡ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರಿನ ಪ್ರಖ್ಯಾತ 30 ಮಾರ್ಕಿನ ಬೀಡಿ ತಯಾರಕರಾದ ಭಾರತ್ ಬೀಡಿ ವರ್ಕ್ಸ್ ಪ್ರೈ. ಲಿ. ನ ಸ್ಥಾಪಕರಾದ ಬಿ. ಮಂಜುನಾಥ್ ಪೈ ಯವರ 111 ನೇ ಜನ್ಮ ದಿನವನ್ನು ಸಂಸ್ಥಾಪಕರ ದಿನವನ್ನಾಗಿ ಆಚರಣೆ

ಮಂಗಳೂರು: ಮಂಗಳೂರಿನ ಪ್ರಖ್ಯಾತ 30 ಮಾರ್ಕಿನ ಬೀಡಿ ತಯಾರಕರಾದ ಭಾರತ್ ಬೀಡಿ ವರ್ಕ್ಸ್ ಪ್ರೈ ಲಿಮಿಟೆಡ್ ಇದರ ಸ್ಥಾಪಕರಾದ ಬಿ. ಮಂಜುನಾಥ ಪೈಯವರ 111 ನೇ ಜನ್ಮ ದಿನವನ್ನು ಸಂಸ್ಥಾಪಕರ ದಿನವನ್ನಾಗಿ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು.ಸಂಸ್ಥೆಯ ಕಾರ್ಯದರ್ಶಿ ವಾಸುದೇವ ಎಸ್. ಪೈ ಯವರು ಸ್ವಾಗತಿಸಿ ಪ್ರಸ್ತಾವನೆಗೈದರು.ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಸುಭ್ರಾಯ ಎಂ. ಪೈ ಯವರು ಮಾತನಾಡಿ ಸಂಸ್ಥೆಗೆ ಸ್ಥಾಪಕರು ನೀಡಿದ ಕೊಡುಗೆ, ಅವರ ದೂರ ದೃಷ್ಟಿ ಹಾಗೂ ಅವರಿಗೆ ಸಮಾಜದ ಬಗ್ಗೆ ಇದ್ದ ಕಾಳಜಿಯನ್ನು ವಿವರಿಸಿದರು.ಲೆಕ್ಕ ಪರಿಶೋಧಕರಾದ ಸಿಎ ಶಿವಾನಂದ ಪೈಯವರು ಸಂಸ್ಥೆಯ ಬಗ್ಗೆ ಸವಿಸ್ತಾರವಾದ ವಿವರಗಳನ್ನು ನೀಡಿದರು. ಸಂಸ್ಥಾಪಕರು ಹಾಕಿ ಕೊಟ್ಟ ಮೌಲ್ಯಗಳನ್ನು ಅನುಚಾನವಾಗಿ ಸಂಸ್ಥೆಯು ಅನುಸರಿಸುತ್ತಾ ಬಂದಿದ್ದು, ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯು ಸಾಂಸ್ಥಿಕ ಸಮಾಜಿಕ ಕಳಕಳಿಗಳನ್ನು ತನ್ನ ಆರಂಭದ ದಿನಗಳಿಂದಲೂ ಅನುಸರಿಸುತ್ತಾ ಬಂದಿದೆ ಎಂದರು.ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ನಾಗೇಂದ್ರ ಡಿ. ಪೈ ಯವರು ಸಂಸ್ಥೆಯ ಹೊಸ ಉತ್ಪನ್ನವಾದ ಮೂವತ್ತು ಮಾರ್ಕಿನ “ಕಡಕ್ ಪ್ಯಾಲಿ” ಚಹಾ ಪುಡಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಹೊಸ ಉತ್ಪನ್ನದ ಬಗ್ಗೆ ಸಂಸ್ಥೆಯ ಹಿರಿಯ ಅಧಿಕಾರಿ ಎಚ್. ರಮೇಶ್ ಶೆಣೈಯವರು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ವಿವಿಧ ಬ್ಯಾಂಕುಗಳ ಅಧಿಕಾರಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಸಂಸ್ಥೆಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಗೆ 55 ವರ್ಷಗಳ ಸೇವೆ ಸಲ್ಲಿಸಿರುವ ಸುರೇಶ್ ಶೆಣೈಯವರನ್ನು ಆಡಳಿತ ಮಂಡಳಿಯು ಅಭಿನಂದಿಸಿ ಪುರಸ್ಕರಿಸಿತು.ಕಾರ್ಯಕ್ರಮದಲ್ಲಿ ನಿರ್ದೇಶಕರಾದ ವೆಂಕಟೇಶ್ ಎಂ. ಪೈ, ಉಪಸ್ಥಿತರಿದ್ದರು. ಸಂಸ್ಥೆಯ ಇನ್ನೊರ್ವ ಕಾರ್ಯಕಾರಿ ನಿರ್ದೇಶಕರಾದ ಆನಂದ್ ಜಿ. ಪೈ ಬಂದ ಎಲ್ಲಾ ಅತಿಥಿಗಳಿಗೆ ಧನ್ಯವಾದವಿತ್ತರು.

ಪ್ರಾದೇಶಿಕ ವಾರ್ತೆಗಳು

ಪತ್ರಕರ್ತರ ಗ್ರಾಮ ವಾಸ್ತವ್ಯ‌ ಕಾರ್ಯಕ್ರಮ ರಾಜ್ಯಕ್ಕೆ ಮಾದರಿ-ಸ್ಪೀಕರ್ ಯು.ಟಿ.ಖಾದರ್

ಅಹವಾಲುಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಸೂಚಿಸುತ್ತೇನೆ-ಪತ್ರಕರ್ತರ ಗ್ರಾಮ ವಾಸ್ತವ್ಯ ಸಮಾರೋಪದಲ್ಲಿ ಸ್ಪೀಕರ್ ಭರವಸೆ ಕೊಲ್ಲಮೊಗ್ರ: ತಮ್ಮ ಒತ್ತಡದ ಕೆಲಸದ ಮಧ್ಯೆಯೂ ಗ್ರಾಮ ವಾಸ್ಯವ್ಯ ಮಾಡಿ ಆ ಊರಿನ ಸಮಸ್ಯೆಗಳನ್ನು ಅರಿತು ಪರಿಹಾರಕ್ಕಾಗಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪತ್ರಕರ್ತರು ಮಾಡಿದ ಗ್ರಾಮ ವಾಸ್ತವ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್, ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯತ್, ದ.ಕ.ಪೊಲೀಸ್ ಇಲಾಖೆ, ಸುಳ್ಯ ತಾಲೂಕು ಆಡಳಿತ, ಹರಿಹರ, ಕೊಲ್ಲಮೊಗರು ಗ್ರಾಮ ಪಂಚಾಯತ್ ಮತ್ತು‌ ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಲ್ಲಮೊಗ್ರದಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಮಾರೋಪ‌‌ ಸಮಾರಂಭದಲ್ಲಿ ಅವರು ಮಾತನಾಡಿದರು. ಇಲ್ಲಿ ಜನರು ಮಂಡಿಸಿದ ಎಲ್ಲಾಅಹವಾಲುಗಳನ್ನು ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳು ಪರಿಹರಿಸುತ್ತಾರೆ. ಜಿಲ್ಲೆ ಹಾಗು ರಾಜ್ಯ ಮಟ್ಟದಲ್ಲಿ ಇದರ ಪರಿಹಾರಕ್ಕೆ ಪೂರ್ಣ ಸಹಾಕರ ನೀಡುತ್ತೇನೆ. ಆದ್ಯತೆಯ ಮೇರೆಗೆ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸೂಚಿಸುತ್ತೇನೆ. ಕೆಲವೊಂದು ಸಮಸ್ಯೆಗಳ ಪರಿಹಾರಕ್ಕೆಅಗತ್ಯ ಇದ್ದಲ್ಲಿ ಕೇಂದ್ರಕ್ಕೂ ಪತ್ರ ಬರೆಯುತ್ತೇನೆ ಎಂದು ಅವರು ಭರವಸೆ ನೀಡಿದರು. ಮುಂದಿನ ತಲೆಮಾರಿನ ಮತ್ತು ವಿದ್ಯಾರ್ಥಿಗಳ ಬೆಳವಣಿಗೆಯ ದೃಷ್ಟಿಯಿಂದ ನೆಟ್ ವರ್ಕ್ ಮತ್ತು ಬ್ರಾಡ್ ಬ್ಯಾಂಡ್ ಸಂಪರ್ಕ ಅತೀ ಅಗತ್ಯ. ಈ ಭಾಗದಲ್ಲಿ ಅದರ ಯಶಸ್ವಿ ಅನುಷ್ಠಾನಕ್ಕೆ ಸಂಂಧಪಟ್ಟವರಿಗೆ ಸೂಚಿಸುತ್ತೇನೆ ಎಂದರು.ನಿಮ್ಮ ಸಮಸ್ಯೆ ಪರಿಹಾರಕ್ಕೆ ಸ್ಪೀಕರ್‌ ಕಚೇರಿ ಬಾಗಿಲು ಸದಾ ತೆರೆಸಿರುತ್ತದೆ ಎಂದ ಅವರು ಮುಂದಿನ ದಿನಗಳಲ್ಲಿ ಕೊಲ್ಲಮೊಗ್ರ ಹರಿಹರ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಇಲ್ಲಿನ ವಿದ್ಯಾರ್ಥಿಗಳಿಗೆ ವಿಧಾನಸಭಾ ಕಲಾಪಗಳ ವೀಕ್ಷಣೆಗೆ ಅವಕಾಶ ಮಾಡಿ ಕೊಡುತ್ತೇನೆ, ಶ್ರೀನಿವಾಸ ನಾಯಕ್ ಇಂದಾಜೆ ನೇತೃತ್ವದಲ್ಲಿ ಅವರನ್ನು ಕರೆ ತರಬೇಕು ಎಂದು ಅವರು ಹೇಳಿದರು.ಗ್ರಾಮ ವಾಸ್ತವ್ಯದ ನೆನಪಿಗಾಗಿ ಸ್ಪೀಕರ್ ಯು.ಟಿ.ಖಾದರ್ ತೆಂಗಿನ ಗಿಡವನ್ನು ನೆಟ್ಟರು.ಸಮಾರೋಪ ಭಾಷಣ ಮಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ‘ಗ್ರಾಮಗಳ ಅಭಿವೃದ್ಧಿ ಆದರೆ ಮಾತ್ರ ಭಾರತ ಬೆಳಗಲು ಸಾಧ್ಯ. ಪತ್ರಕರ್ತರ ಗ್ರಾಮ ವಾಸ್ತವ್ಯ ಕೊಲ್ಲಮೊಗ್ರ, ಹರಿಹರ , ಕಲ್ಮಕಾರು, ಬಾಳುಗೋಡು ಗ್ರಾಮಗಳ ಅಭಿವೃದ್ಧಿಯ ಬಾಗಿಲು ತೆರೆಯಲು ಸ್ಪೂರ್ತಿ ನೀಡಲಿ. ತನ್ನ ಕಡೆಯಿಂದಲೂ ಈ ಗ್ರಾಮಗಳ ಅಭಿವೃದ್ಧಿಗೆ ನೆರವು ನೀಡುತ್ತೇನೆ ಎಂದು ಹೇಳಿದರು‌.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.ಸುಳ್ಯ ಟಿಎಪಿಸಿಎಂಎಸ್ ಅಧ್ಯಕ್ಚ ನಿತ್ಯಾನಂದ ಮುಂಡೋಡಿ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ.ಸಿ.ಜಯರಾಮಮುಖ್ಯ ಅತಿಥಿಗಳಾಗಿದ್ದರು.ಕೊಲ್ಲಮೊಗ್ರ ಗ್ರಾ.ಪಂ. ಅಧ್ಯಕ್ಷೆ ಜಯಶ್ರೀ ಚಾಂತಾಳ, ಉಪಾಧ್ಯಕ್ಷ ಅಶ್ವತ್ ಯಾಲದಾಳ,ಹರಿಹರ ಗ್ರಾ.ಪಂ. ಅಧ್ಯಕ್ಷ ವಿಜಯ ಅಙಣ, ಉಪಾಧ್ಯಕ್ಷ ಜಯಂತ ಬಾಳುಗೋಡು, ಮಹಾರಾಷ್ಟ್ರ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ವೇದಿಕೆಯಲ್ಲಿ ಉಪಸ್ಥಿದ್ದರು.ಡಾ.ಸೋಮಶೇಖರ ಕಟ್ಟೆಮನೆ ಅವಳಿ ಗ್ರಾಮಗಳ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರಾದ ಬಾಲಕೃಷ್ಣ ಭೀಮಗುಳಿ ಸ್ವಾಗತಿಸಿ, ಲೋಕೇಶ್ ಬಿ.ಎನ್.ವಂದಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಕಾರ-ಪುತ್ತೂರು ಸಹಾಯಕ ಕಮೀಷನರ್

ಸುಳ್ಯ: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಫೆ.10ರಂದು ನಡೆಯುವ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡುವುದಾಗಿ ಪುತ್ತೂರು ಸಹಾಯಕ ಕಮೀಷನರ್ ಜುಬಿನ್ ಮಹಾಪಾತ್ರ ಹೇಳಿದ್ದಾರೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪೂರ್ವಭಾವಿಯಾಗಿ ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನರಿಂದ ಬರುವ ಅರ್ಜಿಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಮಾಡುವ ಪ್ರಯತ್ನ ಮಾಡಲಾಗುವುದು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ಧತೆಗಳೊಂದಿಗೆ ಭಾಗವಹಿಸಬೇಕು. ವಿವಿಧ ಇಲಾಖೆಗಳ ಸ್ಟಾಲ್‌ಗಳನ್ನು ತೆರೆದು ಇಲಾಖೆಗಳ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಿದರು. ಗ್ರಾಮ ವಾಸ್ತವ್ಯದ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು. ತಹಶೀಲ್ದಾರ್ ಜಿ.ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್, ವಲಯ ಅರಣ್ಯಾಧಿಕಾರಿಗಳಾದ ಎನ್.ಮಂಜುನಾಥ್, ವಿಮಲ್ ಬಾಬು, ಆರ್.ಗಿರೀಶ್, ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಿತಿನ್‌ ಪ್ರಭು, ಸಿಡಿಪಿಒ ಶೈಲಜಾ ದಿನೇಶ್ ಕುಕ್ಕುಜಡ್ಕ, ಲೋಕೋಪಯೋಗಿ ಇಲಾಖೆಯ ಸಹಾಯಕ‌ ಕಾರ್ಯನಿರ್ವಾಹಕ‌ ಇಂಜಿನಿಯರ್ ಗೋಪಾಲ, ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರುಕ್ಕು, ಸಹಾಯಕ ಇಂಜಿನಿಯರ್ ಮಣಿಕಂಠ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಶಿಕ್ಷಣ ಸಂಯೋಜಕಿ ಸಂಧ್ಯಾ ಕುಮಾರಿ, ತಾಲೂಕು ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಅರ್ಷಿಯಾ, ಗೀತಾ, ನಗರ ಪಂಚಾಯತ್‌ನ ತಿಮ್ಮಪ್ಪ,  ದ.ಕ.ಜಿಲ್ಲಾ‌ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಬಿ.ಎನ್.ಪುಷ್ಪರಾಜ್, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ  ಹರೀಶ್ ಬಂಟ್ವಾಳ್, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ‌ ಕಲ್ನಾರ್, ಕಾರ್ಯದರ್ಶಿ ತೇಜೇಶ್ವರ ಕುಂದಲ್ಪಾಡಿ, ಕೋಶಾಧಿಕಾರಿ ಪ್ರಜ್ಞಾ ಎಸ್.ನಾರಾಯಣ, ಮಾಜಿ ಅಧ್ಯಕ್ಷರಾದ ಪದ್ಮನಾಭ ಮುಂಡೋಕಜೆ, ಕೃಷ್ಣ ಬೆಟ್ಟ, ಸದಸ್ಯ ಮಿಥುನ್ ಕರ್ಲಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

Scroll to Top