ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ನಿಧನ – ಹಿರಿಯ ನ್ಯಾಯವಾದಿ ಬಿ. ಎಲ್. ಎನ್. ರೈ (94)

ಪುತ್ತೂರಿನ ಖ್ಯಾತ ನ್ಯಾಯವಾದಿ ಬೆಳ್ಳಿಪ್ಪಾಡಿ ಲಕ್ಷ್ಮಿನಾರಾಯಣ ರೈ (94) ಅವರು ಡಿಸೆಂಬರ್ 25ರಂದು ಗುರುವಾರ ರಾತ್ರಿ 10.3೦ರ ಸುಮಾರಿಗೆ ಮಂಗಳೂರಿನ ಕರಂಗಲ್ಪಾಡಿಯಲ್ಲಿರುವ ತಮ್ಮ ಹಿರಿಯ ಮಗಳ ನಿವಾಸದಲ್ಲಿ ವಯೋಸಹಜ ಸಾವನ್ನಪ್ಪಿದರು.ವೃತ್ತಿಪರವಾಗಿ ಬಿ. ಎಲ್. ಎನ್. ರೈ ಎಂದೇ ಪರಿಚಿತರಾಗಿದ್ದ ಅವರು ಮದ್ರಾಸ್ ಲಾ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದಿದ್ದು, ಬಿ.ಎ. ಬಿ.ಎಲ್. ಪದವಿ ಪಡೆದ ನಂತರ 1962 ರಲ್ಲಿ ಪುತ್ತೂರಿನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದರು. ಅವರು ತಮ್ಮ 64ವರ್ಷಗಳ ಸುಧೀರ್ಘ ಸೇವಾವಧಿಯಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಕೈಗೊಂಡು ವೃತ್ತಿಪರ ನಿಷ್ಠೆ, ಪ್ರಾಮಾಣಿಕತೆ ಮತ್ತು ಸಮರ್ಪಣೆಯಿಂದ ಹೆಸರು ಪಡೆದಿದ್ದರು. ನಿವೃತ್ತಿಯ ನಂತರ ಕೆಲವು ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ಸ್ಥಾಪಿಸಲಾದ ಹೊಸ ನ್ಯಾಯಾಲಯಕ್ಕೆ ತಮ್ಮ ಸಂಪೂರ್ಣ ಕಾನೂನು ಪುಸ್ತಕ ಸಂಗ್ರಹವನ್ನು ದಾನವಾಗಿ ನೀಡಿದ್ದರು. ಅವರು ಬಾರ್ ಅಸೋಸಿಯೇಷನ್ ನ ಸಕ್ರಿಯ ಸದಸ್ಯರಾಗಿದ್ದರು ಮತ್ತು ಈ ಹಿಂದೆ ಲಯನ್ಸ್ ಕ್ಲಬ್‌ನ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.ಮೃತರು ಇಬ್ಬರು ಪುತ್ರರು (ಉದಯಭಾನು ರೈ ಮತ್ತು ಸುದೇಶ್ ರೈ), ಇಬ್ಬರು ಪುತ್ರಿಯರು (ಪ್ರೊ. ಶರ್ಮಿಳಾ ರೈ ಮತ್ತು ಡಾ. ಸಪ್ನಾ ಸಂದೀಪ್) ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅವರ ಪತ್ನಿ ಶ್ರೀಮತಿ ನಳಿನಿ ರೈ ಅವರು 2022 ರಲ್ಲಿ ನಿಧನರಾಗಿದ್ದರು. ಡಿಸೆಂಬರ್ 26, ಶುಕ್ರವಾರ ಮಧ್ಯಾಹ್ನ 2.30ಕ್ಕೆ ಕದ್ರಿ ಸ್ಮಶಾನದಲ್ಲಿ ಅಂತ್ಯಕ್ರಿಯೆಗಳನ್ನು ನೆರವೇರಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ದಾಖಲೀಕರಣದಿಂದ ಸಾಧನೆಯ ನೆನಪು ಶಾಶ್ವತ-ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟಾೃನಿ ಆಲ್ವಾರಿಸ್

ಮಂಗಳೂರು: ಸಂಘ, ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯ ಚಟುವಟಿಕೆಗಳು ಕಾಲ ಕ್ರಮೇಣ ಮರೆತು ಹೋಗಬಹುದು. ಅವುಗಳನ್ನು ಕ್ರೋಢಿಕರಿಸಿ ಒಂದೆಡೆ ದಾಖಲೀಕರಣ ಮಾಡಿದಾಗ ಸಂಘದ ಸಾಧನೆ ಶಾಶ್ವತವಾಗಿ ಉಳಿಯುತ್ತದೆಎಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟಾೃನಿ ಆಲ್ವಾರಿಸ್ ಹೇಳಿದರು.ಮಂಗಳೂರು ಪ್ರೆಸ್ ಕ್ಲಬ್ ಮತ್ತು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗೃಹ ಪತ್ರಿಕೆ ‘ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರ ’ ಇದರ 7ನೇ ಸಂಚಿಕೆಯನ್ನು ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ ಮಾತನಾಡಿ ‘ ಪತ್ರಕರ್ತರು ಸಮಾಜದ ಕನ್ನಡಿಯಾಗಿದ್ದು ಅವರ ಸಂಘಟನೆಯ ಸಾಧನೆಯನ್ನು ದಾಖಲೆ ಮಾಡುವುದು ಉತ್ತಮಕಾರ್ಯ ಎಂದರು.ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್ ..ಕೆ. ಪೂಜಾರಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಹಿರಿಯ ಪತ್ರಕರ್ತಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಡಿಸೆಂಬರ್ 27 ಶ್ರೀ ಲಂಕಾ ಪತ್ರಕರ್ತರ ನಿಯೋಗ ಮಂಗಳೂರು ಭೇಟಿ

ಮಂಗಳೂರು,ಶ್ರೀ ಲಂಕಾ ಪತ್ರಕರ್ತರ ನಿಯೋಗ ಡಿಸೆಂಬರ್ 27 ಹಾಗೂ ಡಿಸೆಂಬರ್ 28 ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದೆ.ಡಿಸೆಂಬರ್ 27 ರಂದು ಮಂಗಳೂರಿಗೆ ನಿಯೋಗ ಆಗಮಿಸಲಿದೆ. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಕುಲಶೇಖರದಲ್ಲಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಪಿಲಿಕುಳ ನಿಸರ್ಗಧಾಮ, ಕರಾವಳಿ ಉತ್ಸವ, ಮಂಗಳೂರು ಕಂಬಳ, ಯಕ್ಷಗಾನ ಕೂಡಾ ವೀಕ್ಷಿಸಲಿದೆ.ಡಿಸೆಂಬರ್ 28 ರಂದು ಕರ್ನಾಟಕ ವಿಧಾನ ಸಭೆ ಸಭಾಪತಿ ಯು ಟಿ ಖಾದರ್ ಅವರನ್ನು ನಿಯೋಗ ಭೇಟಿ ಮಾಡಲಿದೆ. ಸ್ವಸಹಾಯ ಗುಂಪುಗಳ ಸದಸ್ಯರು ಹಾಗೂ ಗೊಂಡಂಬಿ ಕಾರ್ಖಾನೆಗೂ ಭೇಟಿ ನೀಡಲಿದ್ದಾರೆ. ಅಲ್ಲದೆ ಮಂಗಳೂರಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲಿದೆ.ಶ್ರೀ ಲಂಕಾ ಆರ್ಥಿಕ ಸಚಿವಾಲಯದ ಮಾಜಿ ಮಾಧ್ಯಮ ಕಾರ್ಯದರ್ಶಿ ಹಾಗೂ ಏಶಿಯನ್ ಮೀಡಿಯಾ ಅಸೋಸಿಯೇಷನ್ ನ ಅಧ್ಯಕ್ಷ ಪ್ಯಾಟಮ್ ಪ್ಯಾಸ್ತ್ಯಯುಲ್ ನೇತೃತ್ವದ ನಿಯೋಗದಲ್ಲಿ 6 ಮಂದಿ ಹಿರಿಯ ಪತ್ರಕರ್ತರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ನಿರ್ದೇಶಕ ಶ್ರೀನಿವಾಸ್ ನಾಯಕ್ ಇಂದಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಉರ್ವ ಶ್ರೀ ಮಾರಿಯಮ್ಮ ಸಭಾಂಗಣದಲ್ಲಿ ಧರ್ಮಾವಲೋಕನ ಸಭೆಧರ್ಮ – ನಂಬಿಕೆಗಳನ್ನು ವಿವೇಚನೆಗೆ ಬಿಡಿ: ಹರಿ ಆಸ್ರಣ್ಣ

ಮಂಗಳೂರು: ‘ದೇವಸ್ಥಾನ, ದೈವಸ್ಥಾನಗಳಿಗೆ ಸಂಬಂಧಿಸಿ ಆಯಾ ಸ್ಥಳಕ್ಕೆ ಅನುಗುಣವಾಗಿ ನಿಯಮ, ಕ್ರಮಗಳು, ನಂಬಿಕೆಗಳು ಬದಲಾಗುತ್ತವೆ. ಧಾರ್ಮಿಕ ನಂಬಿಕೆಗಳನ್ನು ಪ್ರಶ್ನೆ ಮಾಡದೆ ಜನರ ವಿವೇಚನೆಗೆ ಬಿಡಬೇಕು’ ಎಂದು ಶ್ರೀ ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.ಗುರುಪುರ ದೋಣಿಂಜೆ ಗುತ್ತು ಗಡಿಪ್ರಧಾನರಾದ ಪ್ರಮೋದ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ವಿಶ್ವಹಿಂದು ಪರಿಷತ್ತು, ಹಿಂದು ಯುವಸೇನೆ, ತುಳುನಾಡ ರಕ್ಷಣಾ ವೇದಿಕೆ ಸಹಯೋಗದಲ್ಲಿ ಮಂಗಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ ‘ಧರ್ಮಾವಲೋಕನ ಸಭೆ: ಧರ್ಮಾಚರಣೆ – ಒಂದು ಅವಲೋಕನ’ ಮೊದಲ ಗೋಷ್ಠಿಯಲ್ಲಿ ‘ದೇವಸ್ಥಾನಗಳು ಮತ್ತು ಧರ್ಮಾಚರಣೆ’ ವಿಷಯದ ಬಗ್ಗೆ ಅವರು ಮಾತನಾಡಿದರು. ಸರಕಾರದ ಅಸಹಾಕಾರ:‘ದೇವಸ್ಥಾನಕ್ಕೆ ಆಗಮಿಸದವರು ಧರ್ಮಾ ಚರಣೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ದೈವಸ್ಥಾನ, ನೇಮಗಳಿಗೆ ಬರದವರು ದೈವಾರಾಧನೆಯನ್ನು ವಿಮರ್ಶಿಸುತ್ತಾರೆ. ಒಂದು ಸ್ಥಳ, ಒಬ್ಬ ವ್ಯಕ್ತಿಯ ನಂಬಿಕೆ, ನಿಯಮಗಳನ್ನು ಪ್ರಶ್ನೆ ಮಾಡಿದರೆ ಪರಸ್ಪರ ದೂಷಣೆಗೆ ಕಾರಣವಾಗಿ, ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹಿಂದು ಧರ್ಮ ಸರಿ ಇಲ್ಲ ಎಂಬಲ್ಲಿಗೆ ಬಂದು ನಿಲ್ಲುತ್ತದೆ’ ಎಂದರು. ಸರಕಾರವೇ ಸಹಕಾರ ನೀಡುತ್ತಿಲ್ಲ‘ದೇವಸ್ಥಾನಗಳಲ್ಲಿ ಬ್ರಹ್ಮಕಲಶದ ಬಳಿಕ ತಂತ್ರಿಗಳು ಆಯಾ ದೇವಸ್ಥಾನದ ನಿಯಮಗಳನ್ನು ನಿರ್ಧರಿಸುತ್ತಾರೆ. ಈಗ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾಧಿಕಾರಿ ಮುಂತಾದವರು ದೇವಸ್ಥಾನದ ನಿಯಮಗಳನ್ನು ನಿರ್ಧರಿಸುವಂತಾಗಿದೆ. ಆಗಮಶಾಸ್ತ್ರದ ಪ್ರಕಾರ ಬ್ರಹ್ಮಕಲಶ ನಡೆಸಲು ದೇವಸ್ಥಾನದ ಆಡಳಿತ ನಡೆಸುವ ಸರಕಾರವೇ ಸಹಕಾರ ನೀಡುತ್ತಿಲ್ಲ’ ಎಂದು ಅವರು ಹೇಳಿದರು.ಬ್ರಹ್ಮಕಲಶ: ತಪ್ಪುಗಳನ್ನು ಸರಿಪಡಿಸುವ ಅವಧಿಶರವು ಶ್ರೀ ಪರಮೇಶ್ವರ ಮಹಾಗಣಪತಿ ದೇವಳದ ಶಿಲೆ ಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತಿ ಮಾತನಾಡಿ, ‘ಪ್ರತಿ ದೇವಸ್ಥಾನಗಳಲ್ಲಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿ ಪ್ರತ್ಯೇಕ ನಿಯಮಗಳಿರುತ್ತವೆ. ಆಯಾ ದೇವಸ್ಥಾನಗಳಲ್ಲಿ ನಡೆಯಬೇಕಾದ ಆಚರಣೆಗಳು ಸ್ಥಗಿತಗೊಂಡರೆ ನಕಾರಾತ್ಮಕ ಅಂಶಗಳು ಹೆಚ್ಚುತ್ತವೆ. 12 ವರ್ಷಕ್ಕೊಮ್ಮೆ ಬ್ರಹ್ಮಕಲಶ ಎಂಬುದು ಆ ಅವಧಿಯಲ್ಲಿ ಆಗಿರಬಹುದಾದ ತಪ್ಪುಗಳನ್ನು ಸರಿಪಡಿಸುವ ಕಾರ್ಯವಾಗಿದೆ’ ಎಂದರು.ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ:‌‌. ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಗುರುಪುರ ಜಂಗಮ ಸಂಸ್ಥಾನ ಮಠದ ಶ್ರೀ ರುದ್ರಮುನಿ ಮಹಾಸ್ವಾಮೀಜಿ, ‘ವೇದ, ಉಪನಿಷತ್ತುಗಳನ್ನು ಓದದೇ, ಅವುಗಳನ್ನು ಮಕ್ಕಳಿಗೂ ಕಲಿಸದೆ ನಮ್ಮ ಧಾರ್ಮಿಕ ಆಚರಣೆಗಳನ್ನು ನಾವೇ ಪ್ರಶ್ನೆ ಮಾಡುವುದು ಸರಿಯಲ್ಲ. ಹಿಂದು ಸಮಾಜವನ್ನು ಒಡೆದು ಆಳುವವರ ಬಗ್ಗೆ ಎಚ್ಚರ ವಹಿಸಬೇಕು’ ಎಂದರು.ವ್ಯತ್ಯಾಸವನ್ನು ಸರಿಪಡಿಸಲು ಸಭೆ: ಪ್ರಮೋದ್‘ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ದೇವತಾರಾಧನೆ, ದೈವಾರಾಧನೆ ಆಗಬೇಕಿದೆ. ಧರ್ಮಾಚರಣೆಯಲ್ಲಿ ಉಂಟಾದ ಲೋಪ, ವ್ಯತ್ಯಾಸವನ್ನು ಸರಿಪಡಿಸಲು ಈ ಸಭೆ ಆಯೋಜಿಸಲಾಗಿದೆ’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ ಗುರುಪುರ ದೋಣಿಂಜೆ ಗುತ್ತು ಗಡಿ ಪ್ರಧಾನರಾದ ಪ್ರಮೋದ್ ಕುಮಾ‌ರ್ ರೈ ಹೇಳಿದರು.ಮೂಡಬಿದಿರೆ ಜೈನಮಠದ ಭಾರತ ಭೂಷಣ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಮಾಣಿಲ ಶ್ರೀ ರಾಜಯೋಗಿ ಮೋಹನದಾಸ ಸ್ವಾಮೀಜಿ, ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ, ಕಾಂಞಂಗಾಡು ನಿತ್ಯಾನಂದ ಆಶ್ರಮ ಗುರುವನದ ಶ್ರೀ ವಿದ್ಯಾನಂದ ಭಾರತಿ ಸ್ವಾಮೀಜಿ, ಶಾಸಕ ವೇದವ್ಯಾಸ ಕಾಮತ್, ಮುಲ್ಕಿ ಅರಮನೆಯ ಅರಸರಾದ ದುಗ್ಗಣ್ಣ ಸಾವಂತರು, ಕೂಳೂರು ಬೀಡಿನ ಆಶಿಕ್‌ಕುಮಾರ್ ಜೈನ್, ವೈದಿಕ ವಿದ್ವಾಂಸ ಭಾಸ್ಕರ ಭಟ್ ಪಂಜ, ಬಪ್ಪನಾಡು ಕ್ಷೇತ್ರದ ಪ್ರಸಾದ್ ಭಟ್, ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆ, ಉರ್ವ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್ ಕೋಡಿಕಲ್, ಪ್ರಮುಖರಾದ ಏಂತಿಮಾರು ಬೀಡು ಶೀನಪ್ಪ ರೈ, ಜಗದೀಶ ಅಧಿಕಾರಿ ಮೂಡುಬಿದಿರೆ, ಯೋಗೀಶ್‌ಕುಮಾ‌ರ್ ಜೆಪ್ಪು, ಎಸ್.ಆರ್. ಹರೀಶ್ ಆಚಾರ್ಯ, ಜನಾರ್ದನ ಅರ್ಕುಳ, ಗಂಗಾಧರ ಶೆಟ್ಟಿ, ಡಾ. ಅಣ್ಣಯ್ಯ ಕುಲಾಲ್, ಭುಜಂಗ ಶೆಟ್ಟಿ ಜಪ್ಪುಗುಡ್ಡೆಗುತ್ತು, ರೋಹಿತ್‌ಕುಮಾರ್ ಕಟೀಲು, ಭಾಸ್ಕರಚಂದ್ರ ಶೆಟ್ಟಿ ಕಮಲಾಕ್ಷ ಗಂಧಕಾಡು, ಪ್ರಕಾಶ್ ಇಳಂತಿಲ, ಪ್ರವೀಣ್ ಕುತ್ತಾರ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಲೀಲಾಕ್ಷ ಬಿ. ಕರ್ಕೇರ, ದಯಾನಂದ ಕತ್ತಲ್ಸಾರ್, ಕಿರಣ್ ಉಪಾಧ್ಯಾಯ, ವಿಜಯ್ ಶೆಟ್ಟಿ, ಮಯೂರ ಕೀರ್ತಿ ಜೈನ್, ನಿತ್ಯಾನಂದ ಮುಂಡೋಡಿ, ಜಿತೇಂದ್ರ ಕೊಟ್ಟಾರಿ, ಪದ್ಮನಾಭ ಮೂಡಬಿದಿರೆ, ಅಡ್ಯಾರ್ ಪುರುಷೋತ್ತಮ ಭಂಡಾರಿ, ಲೋಕಯ್ಯ ಗೌಡ, ದಿನಕರ ಶೆಟ್ಟಿ, ಮಾಧವ ಸುವರ್ಣ, ದಿವಾಕರ ಸಾಮಾನಿ, ಪ್ರಶಾಂತ್, ಗಂಗಾಧರ ಶೆಟ್ಟಿ,ಶಿವಪ್ಪ ನಂತೂರು ಮೊದಲಾದವರು ಉಪಸ್ಥಿತರಿದ್ದರು.ಧರ್ಮಾವಲೋಕನ ಸಮಿತಿ ಸಂಚಾಲಕರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ವಂದಿಸಿದರು. ವಾರುಣಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ದೈವಾರಾಧನೆ – ನಾಗಾರಾಧನೆ ಮತ್ತು ಧರ್ಮಾಚರಣೆ’ ಎರಡನೇ ಅವಲೋಕನ ಗೋಷ್ಠಿ ನಡೆಯಿತು.‘ಭಕ್ತಿ ಪಾರಮ್ಯ’ ತಾಳಮದ್ದಳೆ:ಸಭೆಯ ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಭಕ್ತಿ ಪಾರಮ್ಯ’ ಯಕ್ಷಗಾನ ತಾಳಮದ್ದಳೆ ಜರಗಿತು. ಡಾ. ಎಂ.ಪ್ರಭಾಕರ ಜೋಶಿ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ರವಿ ಅಲೆವೂರಾಯ, ಜಯರಾಮ ಭಟ್ ದೇವಸ್ಯ ಅರ್ಥಧಾರಿ ಗಳಾಗಿದ್ದರು.ಪ್ರಶಾಂತ ರೈ ಪುತ್ತೂರು ಅವರ ಭಾಗವತಿಕೆಗೆ ಪ್ರಣಾಮ್ ರಾವ್ ಮತ್ತು ಮೋಹನ್ ಶರವೂರು ಚೆಂಡೆ – ಮದ್ದಳೆಗಳಲ್ಲಿ ಸಹಕರಿಸಿದರು.

ಪ್ರಾದೇಶಿಕ ವಾರ್ತೆಗಳು

ಮಿಸೆಸ್ ಇಂಡಿಯಾ -2025 ಕಿರೀಟ ಮುಡಿಗೇರಿಸಿದ ಕನ್ನಡತಿ ಡಾ. ರಶ್ಮಾ ಎಂ. ಶೆಟ್ಟಿ

ಮಂಗಳೂರು : ಮುಲುಂಡ್‌ನ ಪ್ರಕೃತಿ ಚಿಕಿತ್ಸಕಿ ವೈದ್ಯೆ ಡಾ. ರಶ್ಮಾ ಮೋಹಿತ್ ಶೆಟ್ಟಿ ಅವರು ಡಿ. 18 ರಿಂದ ಡಿ 21 ವರಗೆ ನಡೆದ ಜೈಪುರದ ಜೈಬಾಗ್ ಪ್ಯಾಲೇಸ್‌ನಲ್ಲಿ ದೀಪಾಳಿ ಫಡ್ನಿಸ್ (ನ್ಯಾಷನಲ್ ಡೈರೆಕ್ಟರ್, ಮಿಸೆಸ್ ಇಂಡಿಯಾ) ಅವರ ಆಯೋಜನೆಯಲ್ಲಿ ನಡೆದ ಭವ್ಯ ಅಂತಿಮ ಸ್ಪರ್ಧೆಯಲ್ಲಿ ಮಿಸೆಸ್ ಇಂಡಿಯಾ – ಸೀಸನ್ 15 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.ಮಿಸೆಸ್ ಇಂಡಿಯಾ ಭಾರತದಲ್ಲಿನ ಅತ್ಯಂತ ಪ್ರತಿಷ್ಠಿತ ಹಾಗೂ ದೀರ್ಘಕಾಲದಿಂದ ನಡೆದ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾಗಿದೆ. ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ 40 ಅಂತಿಮ ಸ್ಪರ್ಧಿಗಳು ಭಾಗವಹಿಸಿದ್ದ ಈ ನಾಲ್ಕು ದಿನಗಳ ಸ್ಪರ್ಧೆಯಲ್ಲಿ ಪ್ರತಿಭಾ ಸುತ್ತು, ಪ್ರೇರಣಾದಾಯಕ ಜೀವನ ಕಥೆ, ವೈಯಕ್ತಿಕ ಸಂದರ್ಶನ, ರ‍್ಯಾಂಪ್ ವಾಕ್, ರಾಷ್ಟ್ರೀಯ ವೇಷಭೂಷಣ, ಸಾಂಪ್ರದಾಯಿಕ ಸುತ್ತು ಹಾಗೂ ಈವಿನಿಂಗ್ ಗೌನ್ ಸುತ್ತುಗಳ ಮೂಲಕ ಸ್ಪರ್ಧಿಗಳನ್ನು ಮೌಲ್ಯಮಾಪನ ಮಾಡಲಾಯಿತು.ರಾಷ್ಟ್ರಮಟ್ಟದ ವೇದಿಕೆಯಲ್ಲಿ ಡಾ. ರಶ್ಮಾ ಮೋಹಿತ್ ಶೆಟ್ಟಿ ಅವರು ತೋರಿದ ಆತ್ಮವಿಶ್ವಾಸ, ಸಮರ್ಪಣೆ ಮತ್ತು ಸರ್ವತೋಮುಖ ಶ್ರೇಷ್ಠತೆ ಈ ಗೌರವಕ್ಕೆ ಕಾರಣವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಮಿಸೆಸ್ ಇಂಡಿಯಾ ಕರ್ನಾಟಕ 2024 ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಟ್ಯಾಲೆಂಟ್‌ ರೌಂಡ್ ನಲ್ಲಿ ಉತ್ತಮ ಪ್ರದರ್ಶನ ಬಹುಮಾನ , ರ‍್ಯಾಂಪ್ ವಾಕ್ ಸ್ಪರ್ಧೆಯಲ್ಲಿ ಅತ್ಯುತ್ತಮ ನಡೆ ಬಹುಮಾನ, ಉತ್ತಮ ಟಾಸ್ಕ್ (ಶಾರ್ಟ್ ಫಿಲ್ಮ್) ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ.ಮೇ 19, ರಂದು ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆದ ಪ್ರತಿಷ್ಠಿತ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿ ಹಾಗೂ ಬಂಟರ ಸಂಘ ಮುಂಬಯಿ ಯುವ ವಿಭಾಗ ಆಯೋಜಿಸಿದ ಆಕಾಂಕ್ಷ ಮಿಸೆಸ್ ಬಂಟ್ಸ್ 2023 ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿದ್ದಾರೆ.ನಾರ್ಯಗುತ್ತು ರಘುನಾಥ ಶೆಟ್ಟಿ ಮತ್ತು ಅಮ್ಟೂರು ಬಾಳಿಕೆ ಕಸ್ತೂರಿ ಶೆಟ್ಟಿ ದಂಪತಿಯ ಸುಪುತ್ರಿ, ಡಾ.ರಶ್ಮಾ ಎಂ.ಶೆಟ್ಟಿ ಯವರು ಮೋಹಿತ್ ಶೆಟ್ಟಿಯವರ ಪತ್ನಿ ಇವರಿಗೆ 7 ವರ್ಷದ ಮಗಳು ನೇಸರ. ಇವರು ಕಟಪಾಡಿ ಮೂಡು ಬೆಟ್ಟು ಹೊಸಮನೆ ಮನೋಹರ್ ಶೆಟ್ಟಿ (ಐನಾಕ್ ಅಪ್ಟಿಕ್ಸ್) ಮತ್ತು ಮುಚ್ಚೂರು ಬರ್ಕೆ ದಿ. ಮಮತಾ ಶೆಟ್ಟಿ (ಮಾಜಿ ಅಧ್ಯಕ್ಷೆ ಮುಲುಂಡ್ ಬಂಟ್ಸ್ ಮಹಿಳಾ ವಿಭಾಗ) ಅವರ ಸೊಸೆ. ಪುತ್ತೂರಿನ ಮುಂಡೂರು ಗ್ರಾಮದ ಪೊನೋನಿಯದಲ್ಲಿ ಬೆಳೆದ ಇವರು ಪ್ರಸ್ತುತ ಮುಂಬೈನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವರು.ಇವರು ವೈದ್ಯಕೀಯ ಸೇವೆಯೊಂದಿಗೆ, ಗೃಹಿಣಿಯಾಗಿ ಜೊತೆಗೆ, ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ಮುಲುಂಡ್ ಹಿಲ್ಸ್ ಇನ್ನರ್ ವೀಲ್ ಕ್ಲಬ್‌ನ ಸಮಿತಿಯ ಕಾರ್ಯದರ್ಶಿಯಾಗಿ, ಮಹಿಳೆಯರ ಆರೋಗ್ಯ ಮತ್ತು ಜೀವನಶೈಲಿಯ ಅಸ್ವಸ್ಥತೆಗಳ ಕುರಿತು ಅನೇಕ ಲೈವ್ ಸೆಮಿನಾರ್‌ಗಳನ್ನು ನಡೆಸಿದ್ದಾರೆ. ನವಿ ಮುಂಬಯಿಯ ಡಾ. ಡಿವೈ ಪಾಟೀಲ್ ಪ್ರಕೃತಿ ಚಿಕಿತ್ಸೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಡಾ.ರಶ್ಮಾ ಎಂ. ಶೆಟ್ಟಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಪಾಪೆಮಜಲು ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದು, ನಂತರ ಪುತ್ತೂರು ಕೊಂಬೆಟ್ಟು ಸರ್ಕಾರಿ ಕಾಲೇಜಿನಲ್ಲಿ ಪ್ರಿ-ಯುನಿವರ್ಸಿಟಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪ್ರಕೃತಿ ಚಿಕಿತ್ಸೆ ಪದವಿಯನ್ನು ಪಡೆದು, ರಾಜೀವ್‌ ಗಾಂಧಿ ವಿಶ್ವವಿದ್ಯಾಲಯದಲ್ಲಿ ಎರಡನೇ ಸ್ಥಾನ ಪಡೆದರು ಮತ್ತು ತಮ್ಮ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿಯಾಗಿ ಘೋಷಿಸಲ್ಪಟ್ಟ ಇವರು ರಾಜ್ಯಮಟ್ಟದ ಅಥ್ಲೆಟಿಕ್ ಮತ್ತು ಥ್ರೋಬಾಲ್ ಆಟಗಾರ್ತಿಯೂ ಆಗಿದ್ದು, ಮುಲುಂಡ್ ಬಂಟ್ಸ್‌ ಮಹಿಳಾ ವಿಭಾಗದ ಸದಸ್ಯೆಯಾಗಿ , ದಿನಾಂಕ 8-6-2024 ರಂದು ಮುಂಬಯಿ ಬಂಟರ ಭವನ ಕುರ್ಲಾ ದಲ್ಲಿ ನಡೆದ ಕರ್ನಾಟಕ ಸಂಘ ಅಂಧೇರಿ (ರಿ) ಹಾಗೂ ಕನ್ನಡ ಕಲಾ ಕೇಂದ್ರ, ಮುಂಬಯಿ ಸಹಯೋಗ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಸಹಕಾರದಿಂದ ಆಯೋಜಿಸಿದ ರಾಜ್ಯ ಮಟ್ಟದ “ಡಾ! ಶಿವರಾಮ ಕಾರಂತ ನಾಟಕೋತ್ಸವ -2024 ಸ್ಪರ್ಧೆಯಲ್ಲಿಕಲಾ ಸ್ಪಂದನ ಮುಂಬಯಿ ತಂಡ ಪ್ರಸ್ತುತ ಪಡಿಸಿದ ಬಾಬಾ ಪ್ರಸಾದ್ ಅರಸ ನಿರ್ದೇಶನದ “ಸ್ವಾಮಿ ಕೊರಗಜ್ಜ ” ನಾಟಕದಲ್ಲಿ ಅತ್ಯುತ್ತಮ ನಟಿ ಪ್ರಥಮ ಪ್ರಶಸ್ತಿಯನ್ನು ಡಾ. ರಶ್ಮಾ ಶೆಟ್ಟಿ ಪಡೆದಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

“ನೆರವು ಪಡೆದ ಮಕ್ಕಳು ಮುಂದೆ ನನ್ನಂತೆ ಸಮಾಜದ ನೊಂದವರ ಪರ ನಿಲ್ಲಬೇಕು“-ಡಾ.ಪ್ರಕಾಶ್ ಶೆಟ್ಟಿ. ಆಶಾಪ್ರಕಾಶ್ ಶೆಟ್ಟಿ ಸಹಾಯ ಹಸ್ತ “ನೆರವು” ಪ್ರದಾನ‌. 4 ಸಾವಿರ ಕುಟುಂಬಗಳಿಗೆ 9.5 ಕೋ. ರೂ ಆರ್ಥಿಕ ನೆರವು

ಮಂಗಳೂರು: ಎಂ.ಆರ್.ಜಿ. ಗ್ರೂಪ್ ನ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಪ್ರದಾನ ಸಮಾರಂಭ ‘ನೆರವು-2025’ ಗುರುವಾರ ಸಂಜೆ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಎಂ.ಆರ್.ಜಿ.ಗ್ರೂಪಿನ ಚೇರ್ಮನ್ ಡಾ.ಪ್ರಕಾಶ್ ಶೆಟ್ಟಿ ಅವರು, “ನಾನೊಬ್ಬ ಸಾಮಾನ್ಯ ಕುಟುಂಬದಲ್ಲಿ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದೆ. ತಂದೆ ಮಾಧವ ಶೆಟ್ಟಿ, ತಾಯಿ ರತ್ನ ಶೆಟ್ಟಿ ಅವರೊಂದಿಗೆ ಕಷ್ಟದ ಜೀವನ ನಡೆಸಿ ಶಾಲಾ ದಿನಗಳಲ್ಲಿ ಜಾತಿ, ಧರ್ಮ ಯಾವುದನ್ನು ನೋಡದೆ ಎಲ್ಲರ ಮನೆಗಳಲ್ಲಿ ತಿಂದು ಅವರ ಅಂಗಳದಲ್ಲಿ ಆಡಿದ ನೆನಪು ಇನ್ನೂ ಇದೆ. ಅಮ್ಮನಿಗಿಂತ ಶ್ರೇಷ್ಠವಾದುದು ಜಗತ್ತಿನಲ್ಲಿ ಯಾವುದೂ ಇಲ್ಲ. ನಮ್ಮ ಮುಂದಿನ ಬದುಕನ್ನು ರೂಪಿಸುವುದು ನಮ್ಮ ಅಮ್ಮ ಮಾತ್ರ. ಅಮ್ಮನ ಮಮತೆ, ತಂದೆಯ ಪ್ರೀತಿ, ತುಳುನಾಡಿನ ಸಂಸ್ಕೃತಿ ಜೊತೆಗಿನ ಬದುಕು ನನ್ನನ್ನು ಇಂದು ಈ ಮಟ್ಟಕ್ಕೆ ಬೆಳೆಸಿದೆ. 1983ರಲ್ಲಿ ಬದುಕು ಕಟ್ಟಿಕೊಳ್ಳಲು ಬೆಂಗಳೂರು ತಲುಪಿ 15 ವರ್ಷಗಳ ಕಾಲ ಅವಮಾನ, ಕಷ್ಟ ಎಲ್ಲವನ್ನು ಮೆಟ್ಟಿನಿಂತು ಯಶಸ್ಸಿನತ್ತ ಒಂದೊಂದೇ ಮೆಟ್ಟಿಲು ಹತ್ತತೊಡಗಿದೆ. ರಿಯಲ್ ಎಸ್ಟೇಟ್, ಹೋಟೆಲ್ ಉದ್ಯಮಕ್ಕೆ ಕೈಹಾಕಿದೆ. ದೇವರ ಶಕ್ತಿ ಆಶೀರ್ವಾದದಿಂದ ನಾನೊಬ್ಬ ಉದ್ಯಮಿಯಾಗಿ ಬೆಳೆದೆ. ಆಗ ನನಗೆ ಕಂಡಿದ್ದು ನನ್ನ ಉಡುಪಿ, ಮಂಗಳೂರಿನ ಜನತೆ. ನನ್ನ ಊರಿಗೆ ಏನಾದರೂ ಮಾಡಬೇಕು ಎಂಬ ನಿಟ್ಟಿನಲ್ಲಿ 2019ರಲ್ಲಿ ನನ್ನ ಆತ್ಮೀಯರು ಹೇಳಿದ್ದಕ್ಕೆ ಧ್ವನಿಗೂಡಿಸಿ ನೆರವು ಯೋಜನೆ ಪ್ರಾರಂಭಿಸಿದೆ. ಏಳು ಜಿಲ್ಲೆಗಳ ಫಲಾನುಭವಿಗಳಿಗೆ ಇಂದು ನೀಡುತ್ತಿರುವ ಆರ್ಥಿಕ ಸಹಾಯದ ಸದುಪಯೋಗವಾಗಬೇಕು. ಹಿಂದೆ ನಾನು ನಿಮ್ಮಂತೆ ವೇದಿಕೆಯ ಕೆಳಗಡೆ ಕೂತಿರುತ್ತಿದ್ದೆ. ಇಂದು ನಿಮ್ಮನ್ನು ನೋಡುವಾಗ ಖುಷಿಯಾಗುತ್ತದೆ. ನಿಮಗೆಲ್ಲರಿಗೂ ಪ್ರೇರಣೆಯಾಗಬೇಕು ಎಂದು ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಂಡು ಸಮಾಜದಲ್ಲಿ ಎತ್ತರದ ಸ್ಥಾನಕ್ಕೇರಬೇಕು. ಮುಂದೆ ನನ್ನಂತೆ ಸಮಾಜದ ನೊಂದವರ ಶೋಷಿತರ ಪರ ನೀವೆಲ್ಲರೂ ನಿಲ್ಲಬೇಕು“ ಎಂದು ಆಶಯ ವ್ಯಕ್ತಪಡಿಸಿದರು. ”ಈ ವರ್ಷ ನೆರವು ಯೋಜನೆ ಏಳನೇ ವರ್ಷವನ್ನು ಪೂರೈಸುತ್ತಿದೆ. ಇನ್ನು ಮೂರು ವರ್ಷಗಳ ಕಾಲ ಯೋಜನೆ ಮುಂದುವರಿಯುತ್ತದೆ. ದಶಮಾನೋತ್ಸವ ಬಳಿಕ ‘ನೆರವು’ ಯೋಜನೆಯ ಫಲಾನುಭವಿಗಳನ್ನು ಸೇರಿಸಿಕೊಂಡು ಅದಕ್ಕೊಂದು ಸಾಮೂಹಿಕ ರೂಪ ಕೊಡುವ ಚಿಂತನೆ ಇದೆ. ಈ ವಿಸ್ತರಣೆಯಿಂದ ಪ್ರತೀ ವರ್ಷ ಕನಿಷ್ಠ ಹದಿನಾಲ್ಕು ಸಾವಿರ ಕುಟುಂಬಗಳಿಗೆ ನೆರವು ಕೊಡಲು ಸಾಧ್ಯವಾಗಲಿದೆ. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವೈದ್ಯಕೀಯ ಚಿಕಿತ್ಸೆ ಸುಲಭವಾಗಿದೆ. ಆದರೆ ಆ ಸವಲತ್ತುಗಳಿಗೆ ಎಲ್ಲರಿಗೂ ಪ್ರವೇಶ ಸಾಧ್ಯವಾಗುತ್ತಿಲ್ಲ ಎಂಬುದೂ ಅಷ್ಟೇ ಸತ್ಯ, ನಮ್ಮ ನೆರವಿನ ಮೊತ್ತದಲ್ಲಿ ದೊಡ್ಡ ಭಾಗ ಇದಕ್ಕೆ ಮೀಸಲಾಗಿದೆ. ಆಧುನಿಕ ಚಿಕಿತ್ಸೆಯ ಪ್ರಜಾಪ್ರಭುತ್ವೀಕರಣದ ನಿಟ್ಟಿನಲ್ಲಿ ನಮ್ಮದೊಂದು ಕಿರು ಹೆಜ್ಜೆ ಎಂದು ನಾವು ಪ್ರಾಮಾಣಿಕವಾಗಿ ಮತ್ತು ನಮ್ಯತೆಯಿಂದ ಭಾವಿಸುತ್ತೇವೆ. ಈ ಯೋಜನೆಯನ್ನು ಆರಂಭ ಮಾಡಿದ ಮೊದಲ ವರ್ಷ ಒಟ್ಟು 1.25 ಕೋ.ರೂ. ನೆರವು ವಿತರಿಸಿದ್ದೇವೆ. ಆಗ 28 ಸಂಘ ಸಂಸ್ಥೆಗಳು ಪ್ರಯೋಜನ ಪಡೆದಿವೆ. ಈಗ 7ನೇ ವರ್ಷದಲ್ಲಿ 100ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ನೆರವು ವಿತರಣೆಯಾಗಲಿದೆ“ ಎಂದರು.ಬಳಿಕ ಮಾತಾಡಿದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು, ”ಹುಟ್ಟುವಾಗ ಹೆಸರು ಇರುವುದಿಲ್ಲ ಉಸಿರು ಮಾತ್ರ ಇರುತ್ತದೆ. ಹೋಗುವಾಗ ಉಸಿರು ಇರುವುದಿಲ್ಲ ಹೆಸರು ಮಾತ್ರ ಉಳಿಯುತ್ತದೆ ಅನ್ನುವ ಮಾತಿನಂತೆ ಎಂ.ಆರ್.ಜಿ. ಗ್ರೂಪ್ ಒಂದು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿದೆ. ಬದುಕು ಬೆಲೆ ಕಟ್ಟಲಾರದ ಮಾಣಿಕ್ಯ ಅದರಲ್ಲಿ ಶಾಂತಿ ಸಹಬಾಳ್ವೆ ಪ್ರೀತಿ ವಿಶ್ವಾಸದಿಂದ ಬದುಕಬೇಕು ಪ್ರಕಾಶ್ ಶೆಟ್ಟಿಯವರ ಬದುಕು ನಮಗೆಲ್ಲರಿಗೂ ಆದರ್ಶವಾಗಬೇಕು. ಮಾನವೀಯ ಮೌಲ್ಯಗಳನ್ನು ಇಂದಿನ ಯುವಪೀಳಿಗೆ ಮತ್ತು ಮುಂದಿನ ಸಮುದಾಯಕ್ಕೆ ವರ್ಗಾಯಿಸುವ ಬಲುದೊಡ್ಡ ಜವಾಬ್ದಾರಿ ನಮ್ಮೆಲ್ಲರದ್ದಾಗಬೇಕು. ಎಲ್ಲ ಜಾತಿ ಎಲ್ಲ ಸಮುದಾಯದ ಜನರನ್ನು ಒಂದೆಡೆ ಸೇರಿಸಿ ನೊಂದ ಶೋಷಿತ ಜನರ ಜೊತೆ ನಾನಿದ್ದೇನೆ ಎನ್ನುವ ಪ್ರಕಾಶ್ ಶೆಟ್ಟಿಯವರ ಮನೋಬಲಕ್ಕೆ ನಾವೆಲ್ಲರೂ ಬೆಂಬಲ ನೀಡಬೇಕಿದೆ. ಸಾಮರಸ್ಯ ಮತ್ತು ಶಾಂತಿಯುತ ಸಮಾಜದ ನಿರ್ಮಾಣವಾಗಬೇಕು ಇದಕ್ಕಾಗಿ ನಾವೆಲ್ಲರೂ ಶ್ರಮಪಡಬೇಕು“ ಎಂದರು.ವೇದಿಕೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಆಶಾ ಪ್ರಕಾಶ್ ಶೆಟ್ಟಿ, ಮೂಡಬಿದ್ರೆಯ ಅಳ್ವಾಸ್ ಎಜುಕೇಷನ್ ಟ್ರಸ್ಟ್‌ ಅಧ್ಯಕ್ಷ ಡಾ.ಮೋಹನ್ ಆಳ್ವ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ.ಗ್ರೂಪ್ ಆಡಳಿತ ನಿರ್ದೇಶಕ ಗೌರವ್ ಪಿ.ಶೆಟ್ಟಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಗುರುಪುರ ವಜ್ರದೇಹಿ ಸ್ವಾಮೀಜಿ, ಸಂಸದ ಬ್ರಿಜೇಶ್ ಚೌಟ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ವೈ.ಶೆಟ್ಟಿ, ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ದೇವಾನಂದ ಶೆಟ್ಟಿ ಹಾಜರಿದ್ದರು.ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.ಸಭಾ ಕಾರ್ಯಕ್ರಮದ ಬಳಿಕ ಸುಮಾರು 4000 ಕುಟುಂಬಗಳು ಹಾಗು 100ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ಒಟ್ಟು ರೂಪಾಯಿ 9.5 ಕೋಟಿಗೂ ಅಧಿಕ ಮೊತ್ತದ ನೆರವು ವಿತರಣೆ ಮಾಡಲಾಯಿತು.ದಾಮೋದರ ಶರ್ಮಾ, ನಿತೇಶ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಸಮೀಕ್ಷಾ ಶೆಟ್ಟಿ ಧನ್ಯವಾದ ಸಮರ್ಪಿಸಿದರು.ಚಿತ್ರಗಳು -ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಮಾನವ ಜನಾಂಗದ ಉಳಿವಿಗೆ ಪ್ರಕೃತಿಯ ಸಂರಕ್ಷಣೆ ಅತೀ ಅಗತ್ಯ-ಪ್ರೊ. ಪಿ.ಎಲ್. ಧರ್ಮ

ಮಂಗಳೂರು,ಡಿ.25;ಮಾನವ ಜನಾಂಗದ ಉಳಿವಿಗೆ ಪ್ರಕೃತಿಯ ಸಂರಕ್ಷಣೆ ಅತೀ ಅಗತ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪಿ.ಎಲ್.ಧರ್ಮ ತಿಳಿಸಿದ್ದಾರೆ.ಅವರು ಗುರುವಾರ ರೈತ ಕುಡ್ಲ ಪ್ರತಿಷ್ಠಾನ, ಗಾಂಧಿ ಶಿಲ್ಪ ಬಜಾರ್ ,ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪುತ್ತೂರು ಇವರ ಸಂಯಕ್ತ ಆಶ್ರಯದಲ್ಲಿ ಪಿಲಿಕುಳ ಉದ್ಯಾನವನದಲ್ಲಿ ಹಮ್ಮಿಕೊಂಡ ಪಿಲಿಕುಳ ಪರ್ಬ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.ಪ್ರಾಣಿ ಪಕ್ಷಿಗಳ ಆಶ್ರಯ ತಾಣವಾದ ಈ ಸಂದರ ಪ್ರಕೃತಿಯನ್ನು ಸಂರಕ್ಷಿಸದೆ ಇದ್ದರೆ ಮುಂದೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಈ ಬಗ್ಗೆಎಚ್ಚರ ವಹಿಸಬೇಕಾಗಿದೆ ಎಂದು ಪ್ರೊ.ಧರ್ಮ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಸ್ವಚ್ಚತಾ ಜಿಲ್ಲಾ ರಾಯಭಾರಿ ಶೀನ ಶೆಟ್ಟಿ ಮಾತನಾಡುತ್ತಾ, ಪರಿಸರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಯಾವ ರೀತಿ ನಮ್ಮ ಬದುಕಿಗೆ ಮಾರಕವಾಗಿದೆ ಈ ಸಮುದಾಯದಲ್ಲಿ ಜಾಗೃತಿ ಅಗತ್ಯ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಮತ್ತು ಟೆರೇಸ್ ಮೂಲಕ ಭತ್ತದ ಹಲವು ತಳಿಗಳ ಕೃಷಿ ಮಾಡಿ ರಾಷ್ಟ ಅಂತರಾಷ್ಟ್ರೀಯ ಗಮನ ಸೆಳೆದ ಕೃಷಿಕ ಕೃಷ್ಣಪ್ಪ ಗೌಡ ಪಡ್ಡಂಬೈಲು ಇವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ,ಜನರಲ್ ಮ್ಯಾನೇ ಜರ್ ರವಿ ಜೇರಾ,ಮೂಡಾ ಆಯುಕ್ತ ಮುಹಮ್ಮದ್ ನಸೀರ್,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ‌.ಎನ್,ಮೀನುಗಾರಿಕಾ ಕಾಲೇಜಿನ ಪ್ರೊ.ಶಿವ ಪ್ರಕಾಶ್,ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.ಕುಡ್ಲ ರೈತ ಪ್ರತಿಷ್ಠಾನದ ಅಧ್ಯಕ್ಷ ಭರತ್, ಲತೀಶ್ ,ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯದರ್ಶಿ ಜನಾರ್ದನ ಎಸ್ ಮೂಲ್ಯ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಗೋಲ್ಡ್ ಫಿಂಚ್ ಸಿಟಿ ಯಲ್ಲಿ ಡಿ.27 ಮತ್ತು ಡಿ.28ರಂದು ಸಂಭ್ರಮದ ಜನ ಮೆಚ್ಚುಗೆ ಪಡೆದಿರುವ 9ನೇ ವರ್ಷದ ಮಂಗಳೂರು ಕಂಬಳ.

ಮಂಗಳೂರು: ಇದೇ ಬರುವ ಡಿ.27ರಂದು ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ 9ನೇ ವರ್ಷದ ರಾಮ – ಲಕ್ಷ್ಮಣ ಜೋಡುಕರೆ ಕಂಬಳವು ನಡೆಯಲಿದೆ”ಕಂಬಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೇಶ ವಿದೇಶದ ಮಕ್ಕಳಿಗೆ ತುಳುನಾಡಿನ ಸಂಸ್ಕೃತಿಯ ಪರಿಚಯ ಆಗಬೇಕು ಎಂಬ ನಿಟ್ಟಿನಲ್ಲಿ ಪ್ರಾರಂಭಗೊಂಡ ಕಂಬಳ 9ನೇ ವರ್ಷಕ್ಕೆ ಕಾಲಿಟ್ಟಿದ್ದು ಸಂತಸದ ವಿಚಾರವಾಗಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ದ.ಕ ಜಿಲ್ಲೆಯ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಡಿ.27ರ ಬೆಳಗ್ಗೆ 8 ಗಂಟೆಗೆ ಕಂಬಳದ ಉದ್ಘಾಟನೆ ನಡೆಯಲಿದ್ದು ಉದ್ಘಾಟನೆಯನ್ನು ಗರೋಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಮೊಕ್ತೇಸರರಾದ ಚಿತ್ತರಂಜನ್ ಅವರು ದೀಪ ಬೆಳಗಿಸುವ ಮೂಲಕ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೆಂದ್ರ ಸಹಿತ ಶಾಸಕರು, ಸಾಮಾಜಿಕ,ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ.ನಗರ ಪ್ರದೇಶದಲ್ಲಿ ನೆಲೆಸಿರುವ ಜನರಿಗೆ ನಮ್ಮ ತುಳುನಾಡಿನ ಕಂಬಳದ ಪರಿಚಯವಾಗಬೇಕು ಎಂದು ವಿಶೇಷವಾಗಿ ಈ ಬಾರಿ 9 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತುಳುನಾಡಿನ ಹೆಮ್ಮೆಯ ರಾಣಿ ಅಬ್ಬಕ್ಕ ಚಿತ್ರಕಲಾ ಸ್ಪರ್ಧೆಯನ್ನು ಮಕ್ಕಳಿಗಾಗಿ ಆಯೋಜಿಸಲಾಗಿದೆ.ವಂದೇ ಮಾತರಂ150ನೇ ವರ್ಷ ಆಚರಣೆಯ ನಿಮಿತ್ತ ಕಂಬಳದಲ್ಲಿ ವಂದೇ ಮಾತರಂ ಗಾಯನ ಮತ್ತು 150 ವಿದ್ಯಾರ್ಥಿನಿಯರಿಂದ ಸಾಮೂಹಿಕ ವಂದೇ ಮಾತರಂ ಗಾಯನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಪ್ರಧಾನಿ ಮೋದಿಯವರ ಆಶಯದಂತೆ ಗಿಡ ನೆಟ್ಟು ಬೆಳೆಸುವ ಕಾರ್ಯಕ್ರಮದ ಅಂಗವಾಗಿ ಗಿಡ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ. ಬ್ಯಾಕ್ ಟು ಊರು ಅಭಿಯಾನದಡಿ 9 ಮಂದಿಯನ್ನು ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಮಂಗಳೂರು ನಗರದಲ್ಲಿರುವ ವ್ಯದ್ಯಾಶ್ರಮದ ಹಿರಿಯ ಜೀವಗಳಿಗೆ ಕಂಬಳ ತೋರಿಸುವ ಕಾರ್ಯಕ್ರಮ, ಪೇಂಟಿಂಗ್, ರೀಲ್ಸ್ ಸ್ಪರ್ಧೆ, ಫೋಟೋಗ್ರಾಫಿ, Al ಮುಖಾಂತರ ಮಂಗಳೂರು ಕಂಬಳ ಕ್ರಿಯೇಟ್ ಮಾಡುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಕ್ಕಳು, ಹಿರಿಯರು, ಯುವಕರು ಹೀಗೆ ಎಲ್ಲರನ್ನೂ ಸೇರಿಸಿಕೊಂಡು ಕಂಬಳವನ್ನು ಸದಾಕಾಲ ನೆನಪಲ್ಲಿ ಉಳಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ” ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಸಾದ್ ಕುಮಾರ್ ಶೆಟ್ಟಿ, ಕಿರಣ್ ಕೋಡಿಕಲ್, ಸಂಜಯ್ ಪ್ರಭು, ವಿಜಯ ಕುಮಾರ್ ,ವಸಂತ ಪೂಜಾರಿ, ಸುಜಿತ್ ಕುಮಾರ್ ಮಂಗಲ್ಮಾಡಿ ನಂದನ್ ಮಲ್ಯ , ಸಚಿನ್ ಶೆಟ್ಟಿ, ಈಶ್ವರ್, ಮತ್ತಿತರರು ಉಪಸ್ಥಿತರಿದ್ದರು.ಚಿತ್ರಗಳು- ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ. ಅಧ್ಯಕ್ಷರಾಗಿ ಶಶಿಧರ್ ಪೊಯತ್ತಬೈಲ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆ

ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಿಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಶಶಿಧರ ಪೊಯ್ಯತ್ತಬೈಲ್, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ , ಉಪಾಧ್ಯಕ್ಷರಾಗಿ ಜನಾರ್ದನ ಮತ್ತು ಮಹಮ್ಮದ್ ಆಸಿಫ್, ಕಾರ್ಯದರ್ಶಿಯಾಗಿ ಸತೀಶ್ ಎ. ಮತ್ತು ಅಬ್ದುಲ್ ಬಶೀರ್, ಕೋಶಾಧಿಕಾರಿಯಾಗಿ ವಜ್ರೇಶ್ವರಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮೋಹನ್ ಕುತ್ತಾರ್ , ವಸಂತ ಎನ್.ಕೊಣಾಜೆ, ಶಿವಶಂಕರ್ ಎಂ, ರಜನಿಕಾಂತ್ ಸಿ, ಗಣೇಶ್ ತಲಪಾಡಿ ಆಯ್ಕೆಯಾಗಿದ್ದಾರೆ. ಎಲ್ಲಾ ಸ್ಥಾನವೂ ಅವಿರೋಧ ಆಯ್ಕೆಯಾಗಿರುತ್ತದೆ.ಚುನಾವಣಾಧಿಕಾರಿಯಾಗಿ ಸತೀಶ್ ಇರಾ, ಉಪಚುನಾವಣಾಧಿಕಾರಿಯಾಗಿ ಅಶೋಕ್ ಶೆಟ್ಟಿ ಬಿ.ಎನ್ ಅವರು ಪಾಲ್ಗೊಂಡಿದ್ದರು.

ಪ್ರಾದೇಶಿಕ ವಾರ್ತೆಗಳು

ನಾಳೆ ಡಿ.25ರಂದು ಗೋಲ್ಡ್ ಫ್ರಿಂಚ್ ಮೈದಾನದಲ್ಲಿ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ ನೆರವು ಕಾರ್ಯಕ್ರಮ

ಮಂಗಳೂರು : ಪ್ರತೀ ವರ್ಷದಂತೆ ಈ ವರ್ಷವು ಡಿಸೆಂಬರ್ 25 ರಂದು ಗೋಲ್ಡ್ ಫಿಂಚ್ ಮೈದಾನದಲ್ಲಿ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ “ನೆರವು” ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಈ ಯೋಜನೆಯನ್ನು ಆರಂಭ ಮಾಡಿದ ಮೊದಲ ವರ್ಷ ಒಟ್ಟು 1.25 ಕೋ.ರೂ. ನೆರವು ವಿತರಿಸಿದ್ದೇವೆ.ಆಗ 28 ಸಂಘ ಸಂಸ್ಥೆಗಳು ಪ್ರಯೋಜನ ಪಡೆದಿವೆ. ಈಗ 7ನೇ ವರ್ಷದಲ್ಲಿ 100ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ನೆರವು ವಿತರಣೆಯಾಗಲಿದೆ. ಸರಿಸುಮಾರು 4 ಸಾವಿರ ಕುಟುಂಬಗಳು ಈ ಕಾರ್ಯಕ್ರಮದಲ್ಲಿ “ನೆರವು ಬೆಂಬಲ ಪಡೆಯಲಿವೆ. 9.5 ಕೋ.ರೂ. ಗಳಿಗೂ ಅಧಿಕ ಮೊತ್ತ ವಿತರಿಸಲಾಗುತ್ತಿದೆ ಎಂದು ಎಂಆರ್ ಜೆ ಗ್ರೂಪಿನ ಮುಖ್ಯಸ್ಥರಾದ ಪ್ರಕಾಶ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಜಾತಿ, ಧರ್ಮ, ಪಂಗಡ ಎಂಬ ಯಾವ ಮನುಷ್ಯ ನಿರ್ಮಿತ ಗಡಿಗಳಿಲ್ಲದೆ. ಅವಶ್ಯಕತೆ ಇರುವವರನ್ನು ನಮ್ಮ ತಂಡ ಹುಡುಕಿ, ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಇಲ್ಲಿ ಅವಶ್ಯಕತೆಯೇ ಮಾನದಂಡವಾಗಿದೆ. ನಮಗೆ ವಿಶ್ವಾಸವಿದೆ -ಅನಿವಾರ್ಯತೆ ಇಲ್ಲದಿದ್ದರೆ ಯಾರೂ ಅರ್ಜಿ ಹಾಕುವುದಿಲ್ಲ. ದೈಹಿಕ ಸಮಸ್ಯೆ ಇರುವ ದಿವ್ಯಾಂಗರು, ಡಯಾಲಿಸ್ ಸಹಿತ ನಿರಂತರ ಚಿಕಿತ್ಸೆಯನ್ನು ಪಡೆಯಬೇಕಾದ ಅನಿವಾರ್ಯತೆ ಇರುವವರು, ಶಿಕ್ಷಣ ಮುಂದುವರಿಕೆಗೆ ನೆರವು ಬೇಕಾದವರು, ಸಿಂಗಲ್ ಪೇರೆಂಟ್ ಮಕ್ಕಳು, ಸಾಂಸ್ಕೃತಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ನೆರವಿನ ಬೆಂಬಲ ಪಡೆಯಲಿದ್ದಾರೆ. ಮನೆ ಕಟ್ಟಿ ಅದರ ಗೃಹ ಪ್ರವೇಶಕ್ಕಾಗಿ ಕಾಯುತ್ತಿರುವವರಿಗೂ ಅವರ ಭಾವನಾತ್ಮಕ ಮತ್ತು ಹಣಕಾಸಿನ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ ನೆರವು ಕೊಡಲಾಗುತ್ತಿದೆ. ಮನೆ ಕಟ್ಟಲು ಸಹಾಯ ಕೋರಿದ ಅರ್ಜಿಗಳನ್ನು ಪುರಸ್ಕರಿಸಲಾಗಿದೆ ಎಂದರುಫಲಾನುಭವಿಗಳ ಆಯ್ಕೆಯಲ್ಲಿ ಪ್ರಾದೇಶಿಕತೆಯನ್ನೂ ಗಮನಿಸಲಾಗಿದೆ. ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಕೊಪ್ಪ, ಸಕಲೇಶಪುರ ಮತ್ತು ನಮ್ಮ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗಿದೆ. ನಾವು ಆಯ್ಕೆಗೆ ಸಂಬಂಧಿಸಿ ಸ್ವಾಯತ್ತ ಸಮಿತಿಯನ್ನು ಹೊಂದಿದ್ದೇವೆ, ಎಲ್ಲ ಜವಾಬ್ದಾರಿಯನ್ನೂ ಅದು ನಿಭಾಯಿಸುತ್ತದೆ ಎಂದರು.ನೆರವು ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳನ್ನು ಕರೆತರಲು ಬಸ್ ಹಾಗೂ ಕಾರಿನ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿದೆ.ಅರ್ಹರಿಗೆ ಚೆಕ್ ಗಳನ್ನು ಮೈದಾನದಲ್ಲಿ ತೆರೆಯಲಾದ ಕೌಂಟರ್ ನಲ್ಲಿಯೇ ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ.ವರ್ಷಂಪ್ರತಿಯಂತೆ ಈ ವರ್ಷವೂ ಸಾಧಕರನ್ನು ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಅವರು ಪಾಲ್ಗೊಳ್ಳುತ್ತಾರೆ. ಚಲನ ಚಿತ್ರ ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾಗವಹಿಸುತ್ತಾರೆ. ಮೂಡಬಿದ್ರೆಯ ಆಳ್ವಾಸ್ ಎಜುಕೇಷನ್‌ ಟ್ರಸ್ಟ್‌ನ ಡಾ. ಮೋಹನ್ ಆಳ್ವ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ.ಗ್ರೂಪಿನ ಗೌರವ್ ಪಿ. ಶೆಟ್ಟಿ ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಚಿತ್ರಗಳು ಸತೀಶ್ ಕಾಪಿಕಾಡ್

Scroll to Top