ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

2025-26ನೇ ಹಣಕಾಸು ವರ್ಷದಲ್ಲಿ 20,226.19 ಕೋಟಿ ರೂಪಾಯಿಗಳ ದಾಖಲೆಯ ಒಟ್ಟು ವ್ಯವಹಾರ ನಡೆಸಿ ಎಸ್ ಸಿಡಿಸಿಸಿ ಬ್ಯಾಂಕ್ ಹೊಸ ಇತಿಹಾಸ ನಿರ್ಮಿಸಿದೆ-ಡಾ. ಎಂ.ಎನ್.ರಾಜೇಂದ್ರ ಕುಮಾರ್

ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ), 2025-26ನೇ ಹಣಕಾಸು ವರ್ಷದಲ್ಲಿ ₹20,226.19 ಕೋಟಿಗಳ ದಾಖಲೆಯ ಒಟ್ಟು ವ್ಯವಹಾರ ನಡೆಸಿ ಹೊಸ ಇತಿಹಾಸ ನಿರ್ಮಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.ಬ್ಯಾಂಕಿನ ವಾರ್ಷಿಕ ಪ್ರಗತಿಯ ಕುರಿತು ಶನಿವಾರ ಬ್ಯಾಂಕಿನ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬ್ಯಾಂಕ್ ಕಳೆದ ವರ್ಷಕ್ಕೆ ಹೋಲಿಸಿದರೆ ವ್ಯವಹಾರದಲ್ಲಿ ಶೇ.16.47 ರಷ್ಟು ಏರಿಕೆ ಕಂಡಿದೆ. ಅಷ್ಟೇ ಅಲ್ಲದೆ, ₹131.14 ಕೋಟಿಗಳ ನಿವ್ವಳ ಲಾಭ ಗಳಿಸುವ ಮೂಲಕ ರಾಜ್ಯದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಲ್ಲೇ ಸಾರ್ವಕಾಲಿಕ ದಾಖಲೆ ಬರೆದಿದೆ. ಇದು ಕಳೆದ ವರ್ಷದ ಲಾಭಕ್ಕಿಂತ ಶೇ.18.78 ರಷ್ಟು ಹೆಚ್ಚಳವಾಗಿದೆ. ಬ್ಯಾಂಕಿನ ಅನುತ್ಪಾದಕ ಆಸ್ತಿ (NPA) ಪ್ರಮಾಣವು ಶೇ.2.21ಕ್ಕೆ ಇಳಿಕೆಯಾಗಿದ್ದು, ಇದು ಬ್ಯಾಂಕಿನ ಆರ್ಥಿಕ ಸುಸ್ಥಿತಿಯನ್ನು ಬಿಂಬಿಸುತ್ತದೆ ಎಂದರು. ಬ್ಯಾಂಕ್ ಒಟ್ಟು ₹9264.64 ಕೋಟಿಗಳ ಠೇವಣಿ ಸಂಗ್ರಹಿಸಿದ್ದು, ಕಳೆದ ಸಾಲಿಗಿಂತ ಶೇ.17.53 ರಷ್ಟು ಪ್ರಗತಿ ಸಾಧಿಸಿದೆ. ಮುಂಗಡ ವಿಭಾಗದಲ್ಲಿ ಒಟ್ಟು ₹9766.75 ಕೋಟಿಗಳ ಸಾಲ ವಿತರಿಸಲಾಗಿದ್ದು, ಇದರಲ್ಲಿ ಕೃಷಿ ಕ್ಷೇತ್ರಕ್ಕೆ ₹2340.08 ಕೋಟಿಗಳ ಸಾಲ ನೀಡಲಾಗಿದೆ. ವಿಶೇಷವೆಂದರೆ, ಕಳೆದ 31 ವರ್ಷಗಳಿಂದ ಕೃಷಿ ಸಾಲ ಮರುಪಾವತಿಯಲ್ಲಿ ಬ್ಯಾಂಕ್ ಶೇ.100 ರಷ್ಟು ಸಾಧನೆ ಮಾಡುತ್ತಾ ಬಂದಿದ್ದು, ಇದು ರಾಷ್ಟ್ರಮಟ್ಟದ ದಾಖಲೆಯಾಗಿದೆ.ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿರುವ ಬ್ಯಾಂಕ್, ಯುಪಿಐ (UPI), ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ (IMPS) ಮತ್ತು ಟ್ಯಾಬ್ ಬ್ಯಾಂಕಿಂಗ್ ಸೇವೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಈಗಾಗಲೇ 1.44 ಲಕ್ಷಕ್ಕೂ ಅಧಿಕ ರೈತರಿಗೆ ‘ರುಪೇ’ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಗ್ರಾಹಕರ ಮನೆ ಬಾಗಿಲಿಗೇ ಬ್ಯಾಂಕಿಂಗ್ ಸೇವೆ ಒದಗಿಸುವ ‘ಬ್ಯಾಂಕ್ ಆನ್ ವೀಲ್ಸ್’ (Bank on Wheel) ಯೋಜನೆ ಮತ್ತು ಮೊಬೈಲ್ ಆಪ್ ಮೂಲಕ ಹಣ ವರ್ಗಾವಣೆ ಸೌಲಭ್ಯಗಳು ಜನಪ್ರಿಯತೆ ಗಳಿಸಿವೆ.ಕೇಂದ್ರ ಸರ್ಕಾರದ ಅಟಲ್ ಪೆನ್ನನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದಕ್ಕಾಗಿ ಬ್ಯಾಂಕ್ ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ಸ್ತ್ರೀ ಶಕ್ತಿ ಸಂಘಗಳ ಸಬಲೀಕರಣದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಹೊಂದಿದ್ದು, 34,765 ಗುಂಪುಗಳನ್ನು ಹೊಂದಿದೆ. ಬ್ಯಾಂಕಿನ ಸರ್ವಾಂಗೀಣ ಸಾಧನೆಗಾಗಿ 23 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಹಾಗೂ 19 ಬಾರಿ ನಬಾರ್ಡ್ ಪ್ರಶಸ್ತಿಗಳು ಸಂದಿವೆ.ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಮುಂದಿನ ಅವಧಿಯಲ್ಲಿ 10 ಹೊಸ ಶಾಖೆಗಳನ್ನು ತೆರೆಯಲು ಯೋಜಿಸಲಾಗಿದೆ. ಪ್ರಸ್ತುತ ಬ್ಯಾಂಕಿನ ಎಲ್ಲಾ ಶಾಖೆಗಳು ಗಣಕೀಕೃತಗೊಂಡಿದ್ದು, ಆರ್.ಟಿ.ಜಿ.ಎಸ್ ಮತ್ತು ನೆಫ್ಟ್ ಸೌಲಭ್ಯಗಳನ್ನು ಹೊಂದಿವೆ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು 20 ಶಾಖೆಗಳನ್ನು ಸಂಪೂರ್ಣ ಹವಾನಿಯಂತ್ರಿತಗೊಳಿಸಲಾಗಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಬೆಳಪು ದೇವಿಪ್ರಸಾದ್ ಶೆಟ್ಟಿ ನಿರ್ದೇಶಕರುಗಳಾದ ಎಂ. ವಾದಿರಾಜ ಶೆಟ್ಟಿ, ಭಾಸ್ಕರ್ ಎಸ್.ಕೋಟ್ಯಾನ್, ಶಶಿಕುಮಾರ್ ರೈ ಬಾಲೊಟ್ಟು, ಎಸ್.ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಸದಾಶಿವ ಉಳ್ಳಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ. ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಡಾ. ಎನ್.ವಿನಯ ಹೆಗ್ಡೆ ಅವರ ಜನ್ಮ ವಾರ್ಷಿಕೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಸಂವಾದ ಕಾರ್ಯಕ್ರಮ

ಡಾ. ಎನ್ ವಿನಯ ಹೆಗ್ಡೆ ಅವರ ಜನ್ಮ ವಾರ್ಷಿಕೋತ್ಸವದ ಅಮೃತ ಮಹೋತ್ಸವದ ನಿಮಿತ್ತ ನಡೆದ ಸಂವಾದ ಕಾರ್ಯಕ್ರಮ ಏಪ್ರಿಲ್ 3, 2026 ಶುಕ್ರವಾರದಂದು ಮಂಗಳೂರು ರಾಮಕೃಷ್ಣ ಮಠದ ಅಮೃತ ಭವನದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಹ್ಯಾಂಗೊ ಐಸ್ ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್‌ನ ಎಂ.ಡಿ ಶ್ರೀ ಪ್ರದೀಪ್ ಜಿ ಪೈ, ಮತ್ತು ಯೆನೆಪೋಯಾ ವಿಶ್ವವಿದ್ಯಾಲಯದ ಪ್ರೊ. ಚಾನ್ಸಲರ್ ಶ್ರೀ ಮೊಹಮ್ಮದ್ ಫರ್ಹಾದ್, ನಿಟ್ಟೆ ವಿಶ್ವವಿದ್ಯಾಲಯದ ಶ್ರೀ ಎನ್. ವಿಶಾಲ್ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಮತ್ತು ಆಳ್ವಾಸ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದರು.ಸಮಾರಂಭದಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಪೂಜ್ಯ ಸ್ವಾಮಿ ಜಿತಕಾಮನಂದಜಿ ಮಹಾರಾಜ್ ಅವರು ಮಾತನಾಡುತ್ತಾ ನಿಟ್ಟೆ ವಿನಯ ಹೆಗಡೆ ಅವರ ಜೀವನ ಚರಿತ್ರೆ, ಪಠ್ಯಕ್ರಮ ರೀತಿಯಲ್ಲಿ ಪ್ರಕಟವಾಗಿ ಮುಂದಿನ ಪೀಳಿಗೆಗೆ ಅವರು ಬದುಕಿದ ಶೈಲಿ ತಿಳಿಯಬೇಕೆಂದು ಈ ಸಂಧರ್ಭದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ರಂಜನ್ ಬೆಳ್ಳರ್ಪಾಡಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ದಿಲ್ ರಾಜ್ ಆಳ್ವಾ,ಉಪಸ್ಥಿತರಿದ್ದರು. ಸಂತೋಷ ಆಳ್ವಾ ಕಾರ್ಯಕ್ರಮ ನಿರ್ವಹಿಸಿದರು.ಸಾಮಾಜಿಕ ಉದ್ಯಮಶೀಲತೆ ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಯೆನೆಪೋಯಾ ವಿಶ್ವವಿದ್ಯಾಲಯದ ಪ್ರೊ. ಚಾನ್ಸಲರ್ ಶ್ರೀ ಮೊಹಮ್ಮದ್ ಫರ್ಹಾದ್,ಮತ್ತು ಗಣೇಶ್ ಕಾರ್ಣಿಕ್,ಮಾತನಾಡಿದರು. ಸಂವಹನಕಾರರಾಗಿ ರಂಜನ್ ಬೆಳ್ಳರ್ಪಾಡಿ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ರಾಜೇಶ್ ಶೆಟ್ಟಿ ದೋಟ ಅವರಿಗೆ ಕೆಯುಡಬ್ಲ್ಯುಜೆ ಪ್ರಶಸ್ತಿ

ಮಂಗಳೂರು: ಬೆಂಗಳೂರಿನಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ )2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದ್ದು, ಶೋಷಿತ ಸಮುದಾಯದ ಕುರಿತ ಅತ್ಯುತ್ತಮ ವರದಿಗೆ ನೀಡಲಾಗುವ ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿಗೆ ವಿಜಯವಾಣಿ ದಿನಪತ್ರಿಕೆಯ ಮಂಗಳೂರು ಬ್ಯೂರೋ ಮುಖ್ಯ ಉಪ ಸಂಪಾದಕ ರಾಜೇಶ್ ಶೆಟ್ಟಿ ದೋಟ ಭಾಜನರಾಗಿದ್ದಾರೆ.ಬೀದರ್‌ನಲ್ಲಿ ಏಪ್ರಿಲ್ 11 ಮತ್ತು 12ರಂದು ನಡೆಯಲಿರುವ 40ನೇ ರಾಜ್ಯಮಟ್ಟದ ಪತ್ರಕರ್ತರ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.ಬಂಟ್ವಾಳ ತಾಲೂಕಿನ ವಾಮದಪದವು ನಿವಾಸಿಯಾಗಿರುವ ರಾಜೇಶ್ ಶೆಟ್ಟಿ ದೋಟ ಅವರು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ 2024ನೇ ಸಾಲಿನ ಪ್ರತಿಷ್ಠಿತ ಪ.ಗೋ(ಪದ್ಯಾಣ ಗೋಪಾಲಕೃಷ್ಣ) ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ‘ಮುಗದಾರಗೆ’ ಎಂಬ ಕವನ ಸಂಕಲನಕ್ಕೆ 2022ನೇ ಸಾಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಅವರಿಗೆ ಸಂದಿದೆ.

ಪ್ರಾದೇಶಿಕ ವಾರ್ತೆಗಳು

ಆರ್.ರಾಮಕೃಷ್ಣ ಅವರಿಗೆ ‘ಗರುಡನಗಿರಿ ನಾಗರಾಜ್’ ಪ್ರಶಸ್ತಿ

ಮಂಗಳೂರು, ಎ.2- ಬೆಂಗಳೂರಿನಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂ ಜೆ )2024 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದ್ದು ಮಂಗಳೂರಿನ ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಮಂಗಳೂರು ಇದರ ಬ್ಯೂರೋ ಚೀಫ್ ಆರ್. ರಾಮಕೃಷ್ಣ ಅವರು ಕೆಯುಡಬ್ಲ್ಯೂಜೆ ಇದರ 2024 ನೇ ಸಾಲಿನ ‘ಗರುಡನಗಿರಿ ನಾಗರಾಜ್’ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಬೀದರ್‌ನಲ್ಲಿ ಏಪ್ರಿಲ್ 11 ಮತ್ತು 12 ರಂದು ನಡೆಯಲಿರುವ 40ನೇ ರಾಜ್ಯಮಟ್ಟದ ಪತ್ರಕರ್ತರ ಸಮಾವೇಶದಲ್ಲಿ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಆರ್. ರಾಮಕೃಷ್ಣ ಅವರು 2020ರ ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನೂ ಈಗಾಗಲೇ ಪಡೆದಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

“ರಂಗಮಂಟಪ “ದಲ್ಲಿ ಕಲೆಯ ವಿಸ್ಮಯ ಜಗತ್ತು: ಜನಪದ ವಿದ್ವಾಂಸ ಡಾ.ಕೆ.ಚಿನ್ನಪ್ಪ ಗೌಡ ಅಭಿಪ್ರಾಯ

ಮಂಗಳೂರು: ಪತ್ರಕರ್ತೆ ಕೋಡಿಬೆಟ್ಟು ರಾಜಲಕ್ಷ್ಮಿ ಬರೆದಿರುವ ಪ್ರಸಿದ್ಧ ನೃತ್ಯ ಕಲಾವಿದರ ಸಂದರ್ಶನಗಳ `ಲಲಿತ ಮಂಟಪ’ ಕೃತಿ ಬಿಡುಗಡೆ ಸಮಾರಂಭ ನಗರದ ಸಪ್ನ ಬುಕ್ ಹೌಸ್‌ನಲ್ಲಿ ಬುಧವಾರ ನಡೆಯಿತು.ಕೃತಿ ಬಿಡುಗಡೆಗೊಳಿಸಿದ ಜನಪದ ವಿದ್ವಾಂಸ ಡಾ.ಕೆ.ಚಿನ್ನಪ್ಪ ಗೌಡ ಮಾತನಾಡಿ ” ದೇಶದ ಪ್ರಮುಖ ನೃತ್ಯ ಕಲಾವಿದರ ಸಂದರ್ಶನ ಲೇಖನಗಳು ಲಲಿತ ಮಂಟಪದಲ್ಲಿ ಸುಂದರವಾಗಿ ಮೂಡಿ ಬಂದಿದೆ. ಪ್ರತಿಯೊಬ್ಬರ ಕಲಾವಿದರ ಬದುಕು ಕೂಡಾ ಅದ್ಭುತ. ಅವರ ಬದುಕು ಮತ್ತು ಕಲಾ ಪ್ರಕಾರವನ್ನು ರಾಜಲಕ್ಷ್ಮಿ ಅವರು ಮನೋಜ್ಞವಾಗಿ ತೆರೆದಿಟ್ಟಿದ್ದಾರೆ. ಕಲೆಯ ವಿಸ್ಮಯ ಜಗತ್ತು ತೆರೆದುಕೊಂಡಿದೆ. ಲಲಿತ ಮಂಟಪದಲ್ಲಿ ನಾಟ್ಯ ಪರಂಪರೆ, ಕಲಾವಿದರ ತ್ಯಾಗ, ಸವಾಲುಗಳ ಸಮಗ್ರ ಮಾಹಿತಿ ಇದೆ ಎಂದರು.ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿದ್ದರು. ಕೃತಿಕರ್ತೆ ರಾಜಲಕ್ಷ್ಮಿ ಕೋಡಿಬೆಟ್ಟು ಸ್ವಾಗತಿಸಿದರು. ಲೇಖಕಿ ದೇವಿಕಾ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.*ವಿನೂತನ ರಂಗ ಪ್ರಯೋಗರಂಗ ಮಂಟಪ ಕೃತಿ ಆಧರಿಸಿದ ವಿನೂತನ ರಂಗ ಪ್ರಯೋಗ ಗೆಜ್ಜೆ ಬರೆದ ಅಕ್ಷರವನ್ನು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಪ್ರಸ್ತುತಪಡಿಸಿದರು. ಪವಿತ್ರಾ ಮಯ್ಯ ಹಾಡುಗಾರಿಕೆಯಲ್ಲಿ ಹಾಗೂ ರಾಕೇಶ್ ಹೊಸಬೆಟ್ಟು ಮೃದಂಗ ಮತ್ತು ತಬ್ಲಾದಲ್ಲಿ ಸಹಕರಿಸಿದರು.

ಪ್ರಾದೇಶಿಕ ವಾರ್ತೆಗಳು

ದ.ಕ.ಜಿಲ್ಲಾ ರೆಡ್‌ಕ್ರಾಸ್ ಚೇರ್ಮನ್ ಆಗಿ ಸಿಎ ಶಾಂತಾರಾಮ ಶೆಟ್ಟಿ ಪುನರಾಯ್ಕೆ

ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ೨೦೨೬-೨೯ನೇ ಸಾಲಿನ ಚೇರ್ಮನ್ ಆಗಿ ಸಿಎ ಶಾಂತಾರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ.ವೈಸ್ ಚೇರ್ಮನ್ ಆಗಿ ಡಾ. ಬಿ.ಸಚ್ಚಿದಾನಂದ ರೈ, ಖಜಾಂಜಿಯಾಗಿ ಗುರುದತ್ ನಾಯಕ್ ಆಯ್ಕೆಯಾಗಿದ್ದಾರೆ.ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ದರ್ಶನ್.ಎಚ್.ವಿ. ಅವರು ಆಡಳಿತ ಮಂಡಳಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು.ನೂತನವಾಗಿ ಚುನಾಯಿತರಾದ ಸಿಎ ಶಾಂತಾರಾಮ ಶೆಟ್ಟಿ, ಡಾ. ಬಿ.ಸಚ್ಚಿದಾನಂದ ರೈ, ಗುರುದತ್ ನಾಯಕ್, ಡಾ.ಸತೀಶ್ ರಾವ್, ಯತೀಶ್ ಬೈಕಂಪಾಡಿ, ಪುಷ್ಪರಾಜ್ ಜೈನ್,ಡಾ.ಸುಮನ.ಬಿ., ಪಿ.ಬಿ.ಹರೀಶ್ ರೈ ,ಸಚೇತ್ ಸುವರ್ಣ ಮತ್ತು ರಾಘವೇಂದ್ರ ರಾವ್ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಚೇರ್ಮನ್ ಹಾಗೂ ವಿವಿಧ ಉಪಸಮಿತಿಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.ಸಿಎ ಶಾಂತಾರಾಮ ಶೆಟ್ಟಿ ಅವರು ಸತತ ೪ನೇ ಅವಧಿಗೆ ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಚೇರ್ಮನ್ ಆಗಿ ಆಯ್ಕೆಯಾಗಿದ್ದು, ಪ್ರಸ್ತುತ ಅವರು ನವ ದೆಹಲಿಯ ರೆಡ್‌ಕ್ರಾಸ್ ಸಂಸ್ಥೆಯ ರಾಷ್ಟ್ರೀಯ ನಿರ್ವಹಣಾ ಮಂಡಳಿ ಸದಸ್ಯರಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ತೆಲುಗು ಕಲಾ ಸಮಿತಿಯಿಂದ ಯುಗಾದಿ ಆಚರಣೆ

ಮಂಗಳೂರು,ಮಾ.23;ಮಂಗಳೂರಿನ ತೆಲುಗು ಕಲಾ ಸಮಿತಿಯು ಲಯನ್ಸ್ ಕ್ಲಬ್, ಸುರತ್ಕಲ್‌ನಲ್ಲಿ “ಶ್ರೀ ಪರಾಭವ ನಾಮ ಸಂವತ್ಸರ ಉಗಾದಿ”ಯನ್ನು ಅದ್ದೂರಿಯಾಗಿ ಆಚರಿಸಲಾಯಿತುಬಳಿಕ ನೆಡೆದ ವಾರ್ಷಿಕ ಮಹಾ ಸಭೆಯಲ್ಲಿ 2026-28 ಕ್ಕೆ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು ನಳಿನಿ ಚೆರುಕೂರಿ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ನಾಗವರಪು ಶ್ರೀನಿವಾಸ ರಾವ್ ಪ್ರಧಾನ ಕಾರ್ಯದರ್ಶಿಯಾಗಿ, ನಾದೆಳ್ಳ ವೆಂಕಟ ಫಣಿ, ರಾವೂರಿ ನಾಗಫಣಿ ಕುಮಾರ್ ಅವರನ್ನು ಉಪಾಧ್ಯಕ್ಷರಾಗಿ ಮುಂದುವರಿಸಲಾಯಿತು. ಶ್ರೀ ಕುಮಾರ್ ರಾವ್ ಅಮರ ಅವರನ್ನು ಖಜಾಂಚಿಯಾಗಿ ಮತ್ತು ಚಂದ್ರಶೇಖರ್ ಅವರನ್ನು ಜಂಟಿ ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು. ಪ್ರಭು ನಾಯ್ಡು ಮತ್ತು ರಾಮಕೃಷ್ಣ ಅವರನ್ನು ಜಂಟಿ ಕಾರ್ಯದರ್ಶಿಗಳಾಗಿ ಆಯ್ಕೆ ಮಾಡಲಾಯಿತು.ಹಿಂದಿನ ಅಧ್ಯಕ್ಷ ಪ್ರೊ. ಕರ್ರಾ ರಾಮಚಂದ್ರರ್ ಮತ್ತು ನಿರ್ಗಮಿತ ಕಾರ್ಯದರ್ಶಿ ಇನುಮಲ ಶ್ರೀನಿವಾಸ ರಾವ್ ಅವರನ್ನು ಸನ್ಮಾನಿಸಲಾಯಿತು.ಗೌರವ ಅಧ್ಯಕ್ಷ ಶ್ರೀ ನಾದೆಳ್ಳ ಸಾಂಬಶಿವ ರಾವ್ ಮತ್ತು ಸಂಸ್ಥಾಪಕ ಅಧ್ಯಕ್ಷ ಡಾ. ಜಿ.ಆರ್. ಕೃಷ್ಣ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಮಂಗಳೂರು ಮತ್ತು ಸುತ್ತಮುತ್ತಲಿನ 200 ಕ್ಕೂ ಹೆಚ್ಚು ತೆಲುಗು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸಮಾರಂಭದಲ್ಲಿ ಸದಸ್ಯರು ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಅಗತ್ಯ-ಮಮತಾ ಗಟ್ಟಿ. *ಮಹಿಳಾ ಉದ್ಯಮಿಗಳಿಂದ ವಸ್ತು ಪ್ರದರ್ಶನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು,ಮಾ.26;ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಅಗತ್ಯ,ಜಿಲ್ಲೆಯ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ನಿರ್ವಹಣೆಯನ್ನು ಕಷ್ಟಪಟ್ಟು ಎಚ್ಚರಿಕೆ ಯಿಂದ ಮಾಡುತ್ತಾ ಬಂದಿದ್ದಾರೆ ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದ್ದಾರೆ.ಅವರು ಮಹಿಳಾ ದಿನಾಚರಣೆಯ ಅಂಗವಾಗಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಕಛೇರಿ ಸಭಾಂಗಣ ಗುರುವಾರ ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತುಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಮಂಗಳೂರುಇದರ ಸಂಯುಕ್ತ ಆಶ್ರಯ ದಲ್ಲಿಮಹಿಳಾ ದಿನಾಚರಣೆ ಮತ್ತುಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ, ಮಹಿಳಾ ಸಾಧಕರಿಯರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.ಮಹಿಳೆ ಕುಟುಂಬದಲ್ಲಿ ವಿವಿಧ ರೀತಿಯಲ್ಲಿ ಕುಟುಂಬದ ಸಮಾಜದ ಶಕ್ತಿಯಾಗಿದ್ದಾರೆ. ಸರಕಾರದ ಗ್ಯಾರಂಟಿ ಯೋಜನೆಯ ಮೂಲಕ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತಿದೆ ಇದರಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಯಾಗುತ್ತದೆ ಎಂದರು.ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಪೊಲೀಸ್ ಸಹಾಯಕ ಆಯಕ್ತೆ ನಜ್ಮಾ ಫಾರೂಕಿ ಮಾತನಾಡುತ್ತಾ ತೊಟ್ಟಿಲು ತೂಗುವ ಕೈ ಜಗತ್ತು ಆಳುತ್ತವೆ ಎನ್ನುವ ಮಾತಿನಂತೆ ಮಹಿಳೆಯರು ದೇಶದಲ್ಲಿ ಸಾಧನೆ ಮಾಡಿದ್ದಾರೆ.ಆದರೆ ಇನ್ನೂ ಸಾಕಷ್ಟು ಹಿಂದುಳಿದ ಪ್ರದೇಶದಲ್ಲಿ ಮಹಿಳೆಯರು ಸ್ಥಾನ ಮಾನ ಪಡೆಯಲು ಕಷ್ಟ ಪಡುತ್ತಿದ್ದಾರೆ.ಈ ಪರಿಸ್ಥಿತಿ ಬದಲಾಗ ಬೇಕಾ ಗಿದೆ. ಪೊಲೀಸ್ ಇಲಾಖೆ ಮಹಿಳೆಯರ ರಕ್ಷಣೆಗೆ ಗುಲಾಬಿ ಹೊಯ್ಸಳ ಪೊಲೀಸ್ ತಂಡ ಇದೆ.ಮಹಿಳಾ ಸುರಕ್ಷತೆ ಪೊಲೀಸರ ಜೊತೆ ಸಾಮೂಹಿಕ ಜವಾಬ್ದಾರಿ ವಹಿಸಬೇಕಾಗಿದೆ ಎಂದರು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿಜಯಲಕ್ಷ್ಮಿ ರಾಯಕೋಡ್ ಮಾತನಾಡುತ್ತಾ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಮಹಿಳಾ ದಿನಾಚರಣೆ ನಡೆಯುತ್ತಿದೆ.ಮಹಿಳಾ ಸಶಕ್ತತೆಗೆ ಪುರುಷ -ಮಹಿಳೆ ಪರಸ್ಪರ ಸಮಾನವಾಗಿ ,ಪೂರಕವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.ಸಮಾರಂಭದಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್ ಎ,ದಕ್ಷಿಣ ಕನ್ನಡ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ(ರಿ)ದ ಅಧ್ಯಕ್ಷೆ ಶಕುಂತಳ ಸಹಾಯಕ ಪೊಲೀಸ್ ಆಯುಕ್ತರಾದ ( ಸಂಚಾರ ಉಪವಿಭಾಗ, ಮಂಗಳೂರು) ನಜ್ಮಾ ಫಾರೂಕಿ ಸಾಧಕರಿಗೆ ಸನ್ಮಾನ ಮಾಡಿದ್ದಾರೆ.ಅತಿಥಿಗಳಾಗಿ ರೊ. ಪ್ರೊ. ಡಾ| ಚಿನ್ನಗಿರಿ ಗೌಡ,( ಅಸಿಸ್ಟೆಂಟ್ ಗವರ್ನರ್ ವಲಯ-2 ರೋಟರಿ ಜಿಲ್ಲೆ 3181)ರಜನಿ ಭಟ್, (ಅಸಿಸ್ಟೆಂಟ್ ಗವರ್ನರ್, ವಲಯ-3 ರೋಟರಿ ಜಿಲ್ಲೆ 3181)ಶ್ರೀಮತಿ ಚಂದ್ರಿಕಾ ಎಸ್. ನಾಯಕ್, (ಅಭಿವೃದ್ಧಿ ನಿರೀಕ್ಷಕರು, ಮಹಿಳಾ ಅಭಿವೃದ್ಧಿ ನಿಗಮ,)ಸತೀಶ್ ಮೊಬೆನ್, (ಜಿಲ್ಲಾ ಸಂಪನ್ಮೂಲ ವ್ಯಕ್ತಿ, ಪಿ.ಎಂ.ಎಫ್.ಎ.ಇ. ಯೋಜನೆ, ದ.ಕ. ಜಿಲ್ಲೆ, ಮಂಗಳೂರು )ಪುಷ್ಪರಾಜ್ ಬಿ.ಎನ್.(ಅಧ್ಯಕ್ಷರು, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ))ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.ಸಮಾರಂಭದಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಘಟಕದ ಅಧ್ಯಕ್ಷ ಭಾಸ್ಕರ ರೈ ಕಟ್ಟ ಸ್ವಾಗತಿಸಿದರು.ಭಾಗವಹಿಸಲಿದ್ದಾರೆ.ಮಾಜಿ ರೋಟರಿ ಅಸಿಸ್ಟೆಂಟ್ ಗವರ್ನರ್ ರಾಜಗೋಪಾಲ ರೈ,ಮಾಜಿ ಅಧ್ಯಕ್ಷ ಸಂತೋಷ್ ಶೇಟ್,ರಾಜೇಶ್ ಶೆಟ್ಟಿ, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ರೋಟರಿ ಪದಾಧಿಕಾರಿಗಳಾದ ಜಾಕ್ಸನ್ ಸಲ್ದಾನ,ಶೆಲ್ಡನ್ ಕ್ರಾಸ್ತಾ,ಡೆರಿಲ್ ಡಿ ಸೋಜ,ಪ್ರಮೀಳ ಶೆಟ್ಟಿ ಉಪಸ್ಥಿತರಿದ್ದರು.ಸಮಾರಂಭದಲ್ಲಿ ಮಹಿಳಾ ಸಾಧಕರಾದ ಜ್ಯೋತಿ ಕೆ. ಉಳೆಪ್ಪಾಡಿ, ದೇವಿಕಾ ಪುರುಷೋತ್ತಮ್, ಪೂರ್ಣಿಮಾ ರೈ, ಪ್ರಮೀಳಾ ರಾವ್,ಜಯಶ್ರೀ ರಟ್ಟಿಹಳ್ಳಿ, ವಿಭಾ ಎಸ್. ನಾಯಕ್,ಡಾ| ರಶ್ಮಿ ಕೆ.ಸುಜಾತ (ಅಂಗನವಾಡಿ ಶಿಕ್ಷಕಿ, ಅಶೋಕ್‌ನಗರ) ಶ್ರದ್ಧಾ ಕೇಶವ ರಾಮಕುಂಜ,ಪೊಟ್ಟಮ್ಮ ಮಂಗ ಳೂರು,ಲಕ್ಷ್ಮೀ ಗಾಣಿಗ,ದೀಕ್ಷಿತಾ ಟಿ.ಎಸ್ ಇವರನ್ನು ಸನ್ಮಾನಿಸ ಲಾಯಿತು.ಪ್ರಮೀಳಾ ಹೆಗ್ಡೆ ಮತ್ತು ಗೀತಾ ಬಿ ರೈ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ ಚರ್ಚ್: ಬೀಳ್ಕೊಡುಗೆ ಸಮಾರಂಭ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಡಿಯಾಕೋನ್ ಆಗಿದ್ದ ರೋವಿನ್ ಲೋಪೆಜ್ ಅವರನ್ನು ಬೀಳ್ಕೊಡಲಾಯಿತು.ಕಳೆದ ಆರು ತಿಂಗಳುಗಳಿಂದ ಪಾಲ್ದನೆ ಚರ್ಚ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಚರ್ಚ್ ಧರ್ಮಗುರುಗಳಾದ ವಂದನೀಯ ಫಾ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರೊಂದಿಗೆ ಸಹಕರಿಸುತ್ತಿದ್ದು, ಮುಂದಿನ ತಿಂಗಳ 29 ರಂದು ಕಪುಚಿನ್ ಧರ್ಮಗುರುಗಳಾಗಿ ಗುರು ದೀಕ್ಷೆಯನ್ನು ಹೊನ್ನಾವರ ಚರ್ಚ್ ನಲ್ಲಿ ಸ್ವೀಕರಿಸಲಿದ್ದಾರೆ.ವಿದಾಯ ಸಮಾರಂಭದಲ್ಲಿ ಚರ್ಚ್ ಧರ್ಮಗುರು ವಂದನೀಯ ಫಾ . ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ ಶುಭ ಹಾರೈಸಿದರು.ಚರ್ಚ್ ನ ಜನರಿಂದ ದೊರೆತ ಸಹಕಾರದ ಬಗ್ಗೆ ಡಿಯಾಕೋನ್ ರೋವಿನ್ ಲೋಪೆಜ್ ಅವರು ಕೃತಜ್ಞತಾ ಭಾವನೆಯೊಂದಿಗೆ ಮಾತನಾಡಿದರು.ಈ ಸಂದರ್ಭದಲ್ಲಿ ಚರ್ಚ್ ನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ರೋಶನ್ ಮೊಂತೇರೊ ಪುಷ್ಪಾರ್ಚನೆಗೈದರು. ಸರ್ವ ಆಯೋಗಗಳ ಸಂಚಾಲಕ ವಿಲಿಯಂ ಲೋಬೊ ಉಪಸ್ಥಿತರಿದ್ದರು.ಮಾಜಿ ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಮಾ.25 ರಂದು ಲಲಿತ ಮಂಟಪ ಕೃತಿ ಬಿಡುಗಡೆ

ಮಂಗಳೂರು: ಹಿರಿಯ ಲೇಖಕಿ, ಪತ್ರಕರ್ತೆ ಕೋಡಿಬೆಟ್ಟು ರಾಜಲಕ್ಷ್ಮಿಅವರು ಬರೆದ ಅಹರ್ನಿಶಿ ಪ್ರಕಾಶನ ಹೊರತಂದಿರುವ ‘ಲಲಿತ ಮಂಟಪ’ ಕೃತಿ ಬಿಡುಗಡೆ ಹಾಗೂ ಅದರ ವಿನೂತನ ರಂಗಪ್ರಯೋಗ ಕಾರ್ಯಕ್ರಮ ಮಾ.೨೫ರಂದು ಸಂಜೆ ೫ಕ್ಕೆ ನಗರದ ಹಂಪನಕಟ್ಟೆಯ ಸಪ್ನ ಬುಕ್ ಹೌಸ್‌ನಲ್ಲಿ ನಡೆಯಲಿದೆ.ಜಾನಪದ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಕೆ. ಚಿನ್ನಪ್ಪ ಗೌಡ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರಿಂದ ನೂತನ ಕೃತಿ ಆಧರಿಸಿದ ವಿನೂತನ ರಂಗಪ್ರಯೋಗ ‘ಗೆಜ್ಜೆ ಬರೆದ ಅಕ್ಷರ’ ಪ್ರಸ್ತುತಿಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

Scroll to Top