Author name: editor

ಪ್ರಾದೇಶಿಕ ವಾರ್ತೆಗಳು

ಇಸ್ಕಾನ್ ಕುಡುಪು ಕಟ್ಟೆ ವತಿಯಿಂದ ನಶಾ ಮುಕ್ತಿ ಅಭಿಯಾನಕ್ಕೆ ಚಾಲನೆ

ಇಸ್ಕಾನ್ ಕುಡುಪು ಕಟ್ಟೆ: ನಮಗೆ ತಿಳಿದಿರುವಂತೆ, ಅಂತಾರಾಷ್ಟ್ರೀಯ ಕೃಷ್ಣ ಭವನಂರಿತ ಸಂಘ(ಇಸ್ಕಾನ್) ಮಂಗಳೂರಿನ ನಿವಾಸಿಗಳಿಗೆ ಇಪ್ಪತ್ತು ವರ್ಷಕ್ಕಿಂತ ಹೆಚ್ಚು ಕಾಲ ನೈತಿಕತೆ ಮತ್ತು ಸಂಸ್ಕೃತಿಯ ಹಾದಿಯಲ್ಲಿ ಮಾರ್ಗದರ್ಶನ ನೀಡುತ್ತಿದೆ. ಇತ್ತೀಚೆಗೆ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಇಸ್ಕಾನ್ ಯೂತ್ ವಿಂಗ್ ಅನ್ನು ಅವರ ಯುವ ಪ್ರಭಾವದ ಉಪಕ್ರಮಗಳಿಗಾಗಿ ಶ್ಲಾಘಿಸಿದೆ. ಮತ್ತು ವ್ಯಸನ ಮತ್ತು ಮಾದಕ ದ್ರವ್ಯಗಳ ವಿಷಯದ ಕುರಿತು ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡಲು ಎಂಒಯುಗೆ ಸಹಿ ಹಾಕಿದೆ. (https://pib.gov. in/Press ReleasePage.aspx?PRID=1979220). ಇತ್ತೀಚೆಗೆ ಕರ್ನಾಟಕದಲ್ಲಿ 30% ನಶಾ ವ್ಯಸನ ಪ್ರಕರಣಗಳಲ್ಲಿ ಮಂಗಳೂರು ಪ್ರಮುಖ ಪ್ರದೇಶವಾಗಿ ಹೊರಹೊಮ್ಮಿದೆ. ದಕ್ಷಿಣ ಕನ್ನಡ ಪ್ರದೇಶದಲ್ಲಿ ಹೆಚ್ಚಿದ ನಶಾ ದ್ರವ್ಯ ಸೇವನೆಯ ಬಗ್ಗೆ ಗೌರವಾನ್ವಿತ ಸಂಸದ ಶ್ರೀಮನ್ ಕ್ಯಾಪ್ಟನ್ ಬ್ರಜೇಶ್ ಚೌಟಾ ಅವರು ಮಂಗಳೂರಿಗರು ಧ್ವನಿ ಎತ್ತುತ್ತಿರುವುದನ್ನು ನಾವು ಗಮನಿಸಿದ್ದೇವೆ. ವಿದ್ಯಾರ್ಥಿಗಳು ಮತ್ತು ಸಮಾಜಕ್ಕೆ ಸಹಾಯ ಮಾಡುವ ಸಲುವಾಗಿ, ಇಸ್ಕಾನ್ ಕುಡುಪು ಕಟ್ಟೆಯ ಯುವ ಘಟಕವು ಮಂಗಳೂರಿನಲ್ಲಿ ನಶಾ ಮುಕ್ತಿ ಅಭಿಯಾನವನ್ನು ಪ್ರಾರಂಭಿಸಲು ಈ ಉಪಕ್ರಮವನ್ನು ಕೈಗೊಂಡಿದೆ. ನಶಾ ವ್ಯಸನದ ವಿರುದ್ಧ ಜಾಗೃತಿಯನ್ನು ಹೆಚ್ಚಿಸಲು ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ನಾವು ಯೋಜಿಸಿದ್ದೇವೆ. ನಾವು ಉಮಂಗ್ 3.0 : ಮೆಗಾ ಯೂತ್ ಫೆಸ್ಟಿವಲ್ ಅನ್ನು ಸಹ ಆಯೋಜಿಸುತ್ತಿದ್ದೇವೆ. ಇದು ಸಂಗೀತ ಮತ್ತು ಮೋಜಿನೊಂದಿಗೆ ಬುದ್ದಿವಂತಿಕೆಯನ್ನು ಹಂಚಿಕೊಳ್ಳಲು ವೇದಿಕೆಯಾಗಿದೆ. ವಿಶ್ವಪ್ರಸಿದ್ದ ಶ್ರೀಮನ್‌ ಅಮೋಫ್ ಲೀಲಾ ದಾಸ್ (ಉಪಾಧ್ಯಕ್ಷರು, ಇಸ್ಕಾನ್ ದೆಹಲಿ- ಪ್ರಸಿದ್ಧ ಯುವ ನಾಯಕ, ಪ್ರೇರಕ ಭಾಷಣಕಾರ, ಸಾಮಾಜಿಕ ಮಾಧ್ಯಮ ವ್ಯಕ್ತಿತ್ವ) ಅವರು ಈ ಕಾರ್ಯಕ್ರಮವನ್ನು ಅಲಂಕರಿಸಲಿದ್ದಾರೆ ಮತ್ತು ಇವರಿಂದ ಮಾರ್ಗದರ್ಶನದ ಜೊತೆಗೆ ಪ್ರವಚನ ನಡೆಯಲಿದೆ. ಜಾಗತಿಕವಾಗಿ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯ ಮೂಲವಾಗಿರುವುದರಿಂದ, ಅವರು IIT ಗಳು ಮತ್ತು IIM ಗಳು ಮತ್ತು ಬೃಹತ್ MNC ಗಳಲ್ಲಿ ಅತಿಥಿ ಭಾಷಣಕಾರರಾಗಿದ್ದಾರೆ ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ 100 ಮಿಲಿಯನ್ + ವೀಕ್ಷಣೆಗಳನ್ನು ಹೊಂದಿದ್ದಾರೆ. ಎಚ್.ಜಿ. ಪ್ರೇಮಾ ಭಕ್ತಿ ದಾಸ್ (ಕಾರ್ಯದರ್ಶಿ, ಇಸ್ಕಾನ್ ಕುಡುಪು ಕಟ್ಟೆ, ಮಂಗಳೂರು). ಎಚ್.ಜಿ. ದೇವಧರ್ಮ ದಾಸ್ (ಸದಸ್ಯ, ಯುವ ಘಟಕ) ಜೊತೆಗೆ ಭಾರತದಾದ್ಯಂತ 1200 ಕ್ಕೂ ಹೆಚ್ಚು ಯುವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ನಮಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮತ್ತೆ ಪ್ರಸಿದ್ಧ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ. ಮಂಗಳೂರಿನ ಎಲ್ಲಾ ನಿವಾಸಿಗಳು ಇಸ್ಕಾನ್ ಕುಡುಪು ಕಟ್ಟೆಯನ್ನು ಸಂಪರ್ಕಿಸಿ ನೋಂದಾಯಿಸಬಹುದು.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ (ಸ್ವಾಯತ್ತ) ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ‘ದೇಶದ ಸಂಸ್ಕೃತಿಯಲ್ಲಿ ಸಂವಿಧಾನದ ಬೇರು’

ವಿದ್ಯಾಗಿರಿ (ಮೂಡುಬಿದಿರೆ): ನಮ್ಮ ಸಂವಿಧಾನದ ಮೂಲತತ್ವಗಳ ಬೇರು ದೇಶದ ಇತಿಹಾಸ, ನಾಗರಿಕತೆ, ಸಂಸ್ಕೃತಿಯಲ್ಲಿದೆ. ನಮ್ಮದು ಅಪ್ಪಟ ದೇಶೀಯ, ಅಸಮಾನತೆ ನಿರ್ಮೂಲನೆಯ ಪರಿವರ್ತನಾಶೀಲ ಸಂವಿಧಾನ ಎಂದು ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕಾನೂನು ಪೀಠದ ಪ್ರಾಧ್ಯಾಪಕ ಡಾ. ಪಿ. ಪುನೀತ್ ಹೇಳಿದರು.ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಮಾನವಿಕ ವಿಭಾಗಗಳು ಹಮ್ಮಿಕೊಂಡ `ರಾಷ್ಟ್ರೀಯ ಸಂವಿಧಾನ ದಿನ’ ಆಚರಣೆಯಲ್ಲಿ ಅವರು ಮಾತನಾಡಿದರು. ಸಂವಿಧಾನ ಕುರಿತು ಅದರ ರಚನೆ ಸಂದರ್ಭದಲ್ಲಿಯೇ ಆರೋಪಗಳು ಬಂದಿದ್ದವು. ಆದರೆ, ಅದಕ್ಕೆ ರಚನಾ ಸಮಿತಿ ವಿಸ್ತೃತವಾಗಿ ಉತ್ತರಿಸಿತ್ತು ಎಂದರು.ಇತರರ ತಪ್ಪಿನಿಂದ ನೀವು ತಿದ್ದಿಕೊಳ್ಳಿ ಎಂದು ಚಾಣಕ್ಯ ಹೇಳಿದ್ದರು. ಜ್ಞಾನ ಎಲ್ಲೆಡೆಯಿಂದ ಬರಲಿ ಎಂದು ಋಗ್ವೇದ ಹೇಳಿದೆ. ಇದನ್ನು ಉಲ್ಲೇಖಿಸಿದ ಅಂಬೇಡ್ಕರ್, ಯಾವುದೇ ಉನ್ನತ ಮೌಲ್ಯಗಳನ್ನು ಅನುಕರಿಸುವುದು ಅಥವಾ ಅನುಸರಿಸುವುದು ತಪ್ಪಲ್ಲ ಎಂದು ಹೇಳಿದ್ದರು ಎಂದರು.ಸಂವಿಧಾನ ರಚನಾ ಸಮಿತಿಯಲ್ಲಿ ನಡೆದ ಚರ್ಚೆಯು ದೇಶದಲ್ಲಿ ನಡೆದ ಅತ್ಯುತ್ತಮ ಚರ್ಚೆ ಎಂದು ವಿವರಿಸಿದರು. ಸಂವಿಧಾನಗಳ ಸರಾಸರಿ ಜೀವಿತಾವಧಿ 17 ವರ್ಷವಾಗಿದೆ. ಆದರೆ, 76ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಭಾರತದ ಸಂವಿಧಾನ ಜಗತ್ತಿನ ಅತಿದೊಡ್ಡ ಮಾತ್ರವಲ್ಲ ಅತ್ಯುತ್ತಮ ಸಂವಿಧಾನ. 106 ತಿದ್ದುಪಡಿ ಆಗಿದ್ದರೂ ಸ್ಥಿರವಾಗಿದೆ ಎಂದರು.ಥಾಮಸ್ ಗಿನ್ಸ್ ಬರ್ಗ್ ನಡೆಸಿದ ಅಧ್ಯಯನದ ಪ್ರಕಾರ ಸಂವಿಧಾನದ ಸರಾಸರಿ ಜೀವಿತಾವಧಿ 17 ವರ್ಷ. ವಿಶ್ವದ 798 ಸಂವಿಧಾನ ವ್ಯವಸ್ಥೆಯನ್ನು ಅವರು ಅಧ್ಯಯನ ನಡೆಸಿದ್ದು, ಈ ಪೈಕಿ 192 ಮಾತ್ರ ಇನ್ನೂ ಅನುಷ್ಠಾನದಲ್ಲಿವೆ ಎಂದರು. ಈ ಪೈಕಿ ಜಗತ್ತಿನ ಶೇಕಡಾ 50 ಸಂವಿಧಾನಗಳು ಈಗಿಲ್ಲ. ಕೆಲವು ವರ್ಷಾಚರಣೆಯನ್ನೂ ಮಾಡಿಲ್ಲ. ಆದರೆ ಸಂವಿಧಾನ ರಚಿಸುವಾಗ ಅಮರ ಎಂಬ ಚಿಂತನೆ ಸಹಜ ಎಂದರು.ಸಂವಿಧಾನ 50 ವರ್ಷ ಬದುಕಿದರೆ, ಅದರ ಭವಿಷ್ಯ ಉತ್ತಮವಾಗಿರುತ್ತದೆ. ಅದು ಸ್ಪಟಿಕೀಕರಣಗೊಂಡು ಸದೃಢವಾಗುತ್ತದೆ ಎಂದರು. ನವೆಂಬರ್ 26 ದಿನವನ್ನು ಸಂವಿಧಾನದ ಅನುಷ್ಠಾನ ದಿನ ಎಂದು ಆಚರಿಸಲಾಗುತ್ತದೆ. ಆದರೆ, ಆ ದಿನವನ್ನು ಮೊದಲೇ ಕಾನೂನು ದಿನ ಎಂದು ಆಚರಿಸಲಾಗುತ್ತಿತ್ತು ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಮ್ಮ ಆಲೋಚನಾ ಕ್ರಮ ಬದಲಾಗಬೇಕಾಗಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗವನ್ನು ಸಮಾನಂತರವಾಗಿ ಕಾಣಬೇಕು ಎಂದರು.ಪ್ರಸ್ತುತ ಸಮಾಜದಲ್ಲಿ ಔದ್ಯೋಗಿಕ ಕೊರತೆಗಿಂತ ಹೆಚ್ಚಾಗಿ, ಬೇಡಿಕೆ ಅನುಗುಣವಾಗಿ ವಿಷಯ ಆಯ್ಕೆಯ ಸಮತೋಲನ ಆಗುತ್ತಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.ಶೈಕ್ಷಣಿಕ ವ್ಯವಸ್ಥೆಯಲ್ಲಿ ಜ್ಞಾನ ತುಂಬಿದ ಡಬ್ಬಗಳು ತೆರೆದುಕೊಳ್ಳಬೇಕು. ಸೀಮಿತ ದೃಷ್ಟಿಕೋನ ಬಿಟ್ಟು, ಅಂತರಶಿಸ್ತೀಯ ಅಧ್ಯಯನ ನಡೆಸಬೇಕು ಎಂದರು. ದೇಶದ ಬಹುತ್ವ ಬಹುಮುಖ್ಯ. ನಮ್ಮೆಲ್ಲರನ್ನು ಒಂದು ಮಾಡಿರುವುದು ದೇಶದ ಸಂವಿಧಾನ. ಸೀಮಿತ ಸಿದ್ಧಾಂತಗಳಿAದ ಹೊರಬನ್ನಿ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಮಾನವೀಯತೆಯ ಅತ್ಯುತ್ತಮ ಮೌಲ್ಯಗಳನ್ನು ಹೊಂದಿದ ಸಂವಿಧಾನ ನಮ್ಮದು. ದಾಸ್ಯ, ಶೋಷಣೆ ಮುಕ್ತ ಸಮಾಜ ನೀಡಿದೆ ಎಂದರು. ಅಂದು, ಸತಿ ಪದ್ಧತಿ ಪರವಾಗಿಯೂ ಹೋರಾಡಿದ ಜನ ನಮ್ಮ ದೇಶದಲ್ಲಿ ಇದ್ದರು. ಆದರೆ, ಜನರ ಇಚ್ಛೆಯೇ ಜನರನ್ನು ಆಳಬೇಕು ಎಂದರು. ಗಿಡ ನೆಟ್ಟು ಬೆಳೆಸಿದವರಿಗೆ ಫಲ ದೊರೆಯಬೇಕು. ವೈಚಾರಿಕತೆ ಇದ್ದ ಸಮಾಜ ಮಾತ್ರ ಜನರನ್ನು ಬದುಕಲು ಬಿಡುತ್ತದೆ. ಇಲ್ಲದಿದ್ದರೆ ಅವಸಾನ ಸಹಜ ಎಂದರು.ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಡಿ, ಕುಲಸಚಿವ (ಶೈಕ್ಷಣಿಕ) ಡಾ.ಟಿ.ಕೆ.ರವೀಂದ್ರನ್ ಇದ್ದರು. ವಿದ್ಯಾರ್ಥಿನಿ ಅನುಷಾ ಮತ್ತು ಶ್ರೀವಲ್ಲಿ ಕಾರ್ಯಕ್ರಮ ನಿರೂಪಿಸಿದರು. ದಿಶಾ ಸ್ವಾಗತಿಸಿದರು. ರಕ್ಷಾ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.ತೇಜಸ್ವಿನಿ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಕನ್ನಡ ಶಾಲೆ ಸಶಕ್ತವಾದರೆ ಮಾತ್ರ ಕನ್ನಡದ ಸಂರಕ್ಷಣೆ-ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ

ಮಂಗಳೂರು : ಕನ್ನಡ ಭಾಷೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸುವುದು ಅತೀ ಅಗತ್ಯ. ರಾಜ್ಯದಲ್ಲಿ ಕನಿಷ್ಠ ಹಿರಿಯ ಪ್ರಾಥಮಿಕ ಹಂತದವರೆಗೆ ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಇತರ ಯಾವುದೇ ಭಾಷೆಗಳಿಗೆ ಕಡಿಮೆ ಇಲ್ಲದೆ ಸಶಕ್ತಗೊಳಿಸುವ ಕಾರ್ಯವಾಗಬೇಕು ಎಂದು ವಿಶ್ರಾಂತ ಕುಲಪತಿ , ಕರ್ನಾಟಕ ಜಾನಪದ ಅಕಾಡೆಮಿಪ್ರಶಸ್ತಿ ಪುರಸ್ಕೃತ ಡಾ.ಕೆ.ಚಿನ್ನಪ್ಪ ಗೌಡ ಹೇಳಿದರು.ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಬುಧವಾರ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕನ್ನಡ ಭಾಷೆಯನ್ನು ಕಾನೂನಿನ ಮೂಲಕ ಉಳಿಸುವುದು ಸಾಧ್ಯವಿಲ್ಲ. ಬದಲಾಗಿ ಕನ್ನಡ ಮಾಧ್ಯಮ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳಿಗಿಂತ ಗುಣಮಟ್ಟದಲ್ಲಿ ಕೊರತೆ ಆಗದಂತೆ ಗಮನ ಹರಿಸಬೇಕು. ಕನ್ನಡ ಶಾಲೆಯ ಮಕ್ಕಳು ಅವಕಾಶದಲ್ಲಿ ಹಿಂದುಳಿಯದಂತೆ, ಉದ್ಯೋಗದ ಕೊರತೆಯಾಗದಂತೆ ಆಡಳಿತ ವ್ಯವಸ್ಥೆ ನಿಗಾ ವಹಿಸಬೇಕು ಎಂದರು.ಕನ್ನಡ ಸಾಹಿತ್ಯ ಸಮ್ಮೇಳನಗಳ ಸ್ವರೂಪದಲ್ಲಿ ಬದಲಾವಣೆಯಾಗಬೇಕು. ಸಮ್ಮೇಳನ ಕೇವಲ ಜಾತ್ರೆ, ಉತ್ಸವಕ್ಕೆ ಸೀಮಿತವಾಗಬಾರದು.ಈಗ ಸಮ್ಮೇಳನಕ್ಕಾಗಿ ವ್ಯಯವಾಗುತ್ತಿರುವ ಕೋಟ್ಯಾಂತರ ಹಣವನ್ನು ಆದಷ್ಟು ಮಿತಗೊಳಿಸಬೇಕು. ಆ ಮೊತ್ತವನ್ನುಜಿಲ್ಲೆಯ ಅಥವಾ ತಾಲೂಕುಗಳ ಕನ್ನಡ ಶಾಲೆಗಳ ಬಲವರ್ಧನಗೆ ಬಳಸಬೇಕು. . ಶಿಕ್ಷಕರು ಅಥವಾ ಕಟ್ಟಡವೇ ಇಲ್ಲದ ಶಾಲೆಗಳಿಗೆ ವಿದ್ಯಾರ್ಥಿಗಳ ನಿರೀಕ್ಷೆ ಸಾಧ್ಯವಾಗದು. ಹಾಗಾಗಿ ಕನ್ನಡ ಶಾಲೆಗಳ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಒತ್ತು ಅಗತ್ಯ ಎಂದು ಅವರು ಹೇಳಿದರು.ಭೂತ ಕಟ್ಟುತ್ತಿದ್ದ ಪಕ್ರು ಪರವ ಅವರನ್ನು ಬಾಲ್ಯದಲ್ಲಿ ವಿಸ್ಮಯದಿಂದ ನೀಡುತ್ತಿದ್ದೆ. ಭೂತಾರಾಧನೆಯ ಬಗ್ಗೆ ಆಸಕ್ತಿ ಬೆಳೆಯಲು ಇದು ಕಾರಣವಾಯಿತು ಎಂದು ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡ ಅವರು ಯಾವುದೇ ಭಾಷೆ ಬೆಳೆಯಬೇಕಾದರೆ, ಆ ಭಾಷೆಯ ಹಿರಿಮೆ, ಸಂಸ್ಕೃತಿ, ಇತಿಹಾಸದ ಕೃತಿಗಳು ಅಂತಾರಾಷ್ಟ್ರೀಯ ಮಟ್ಟದ ಭಾಷೆಗೆ ಅನುವಾದಗೊಳ್ಳುವುದು ಅಗತ್ಯ. ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಪ್ರೊ. ಸುರೇಂದ್ರ ರಾವ್ ಅವರ ಜತೆಗೂಡಿ ತುಳುವಿನ ಭೂತಾರಾಧನೆಯ ಆಕಾರ- ಪ್ರಾಕಾರಗಳನ್ನು ಪರಿಚಯಿಸುವ 7 ಸಂಪುಟಗಳನ್ನು ರಚಿಸಿದ್ದೇನೆ. ಅನುವಾದ ಕೃತಿಗಳೂ ಸ್ವತಂತ್ರ ಕೃತಿಯಷ್ಟೇ ಮಹತ್ವವನ್ನು ಹೊಂದಿದ್ದು, ಮೂಲ ಲೇಖಕರ ಪ್ರತಿಭೆಯೂ ಅನುವಾದಕಾರರಲ್ಲಿ ಇರುತ್ತದೆ ಎಂದು ಅಭಿಪ್ರಾಯ ಪಟ್ಟರು.ಹಿರಿಯ ಛಾಯಾಗ್ರಾಹಕ ಚಂದ್ರಹಾಸ ಕೋಟೆಕಾರ್ ಕಾರ್ಯಕ್ರಮ ಉದ್ಘಾಟಿಸಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.ಪ್ರೆಸ್‌ಕ್ಲಬ್ ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.*ಫಿನ್‌ಲ್ಯಾಂಡ್ ದೇಶದ ಜನಸಂಖ್ಯೆ ಸುಮಾರು 50 ಲಕ್ಷ. ಕಾಸರಗೋಡು, ದ.ಕ., ಉಡುಪಿ ಸೇರಿ ತುಳು ಮಾತನಾಡುವವರು 50 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ತುಳುವಿಗೆ ಸಂಖ್ಯೆ, ಸಾಹಿತ್ಯ, ಸಾಂಸ್ಕೃತಿಕ ಬೆಂಬಲ ಇದೆ.ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿಸಲು ಯಾವುದೇ ತೊಡಕಿಲ್ಲ. ಬೇರೆಯವರೂ ಕೇಳುತ್ತಾರೆ ಎನ್ನುವ ತರ್ಕ ಸರಿಯಲ್ಲ. ಆದರೆ ಈ ಬಗ್ಗೆ ಸಮರ್ಥಿಸುವ ಹಾಗೂ ಶಾಸನ ಸಭೆಯಲ್ಲಿ ಪ್ರಬಲವಾಗಿ ವಿಷಯ ಮಂಡಿಸುವ ಜನಪ್ರತಿನಿಧಿಗಳು ಬೇಕು-ಡಾ. ಚಿನ್ನಪ್ಪ ಗೌಡ

ಪ್ರಾದೇಶಿಕ ವಾರ್ತೆಗಳು

ಯಕ್ಷಾಂಗಣದಿಂದ ಎ.ಕೆ.ನಾರಾಯಣ ಶೆಟ್ಟಿ, ಮಹಾಬಲ ಶೆಟ್ಟಿ ಸಂಸ್ಮರಣೆ – ವಕ್ವಾಡಿ ಸಮ್ಮಾನ. ಯಕ್ಷಗಾನ ಮತ್ತು ನಾಟಕ ನಮ್ಮ ಸಂಸ್ಕೃತಿಯ ಉಸಿರು: ಶ್ರೀ ಮಹಾಬಲೇಶ್ವರ ಸ್ವಾಮೀಜಿ

ಮಂಗಳೂರು: ‘ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನ ಮತ್ತು ನಾಟಕಗಳು ಜನ ಜೀವನದಲ್ಲಿ ಹಾಸುಹೊಕ್ಕಾಗಿವೆ. ಇವೆರಡೂ ನಮ್ಮ ಸಂಸ್ಕೃತಿಯ ಉಸಿರು. ಮಠ – ಮಂದಿರ ಮತ್ತು ಸಂಘ ಸಂಸ್ಥೆಗಳು ಅವುಗಳಿಗೆ ಇನ್ನಷ್ಟೂ ಪೋಷಣೆ ನೀಡುವ ಅಗತ್ಯವಿದೆ’ ಎಂದು ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹೇಳಿದ್ದಾರೆ. ಯಕ್ಷಾಂಗಣ ಮಂಗಳೂರು ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024’ 12ನೇ ವರ್ಷದ ನುಡಿ ಹಬ್ಬದಲ್ಲಿ ನ.16ರಂದು ಕೀರ್ತಿ ಶೇಷ ಅರ್ಥಧಾರಿಗಳಾದ ದಿ.ಎ.ಕೆ.ನಾರಾಯಣ ಶೆಟ್ಟಿ ಫರಂಗಿಪೇಟೆ ಮತ್ತು ಎ.ಕೆ.ಮಹಾಬಲ ಶೆಟ್ಟಿ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿ ಅವರು ಆಶೀರ್ವಚನ ನೀಡಿದರು. ‘ಯಕ್ಷಗಾನ ಆಟ ಕೂಟಗಳಲ್ಲಿ ಮೆರೆದ ಹಿಂದಿನ ಕಲಾವಿದರು ಬದುಕಿರುವಾಗ ಮಾಡಿದ ಸಾಧನೆಗಳನ್ನು ನೆನಪಿಟ್ಟು, ಮುಂದಿನ ತಲೆಮಾರಿಗೆ ತಿಳಿಯಪಡಿಸುವುದು ಹಿರಿಯರ ಜವಾಬ್ದಾರಿ. ಯಕ್ಷಾಂಗಣದಂತಹ ಸಂಸ್ಥೆಗಳು ಅದಕ್ಕೆ ಅವಕಾಶ ಮಾಡಿಕೊಡುತ್ತಿರುವುದು ಶ್ರೇಷ್ಠ ಕಾರ್ಯ’ ಎಂದವರು ನುಡಿದರು. ಮಹೇಶ್ ಮೋಟಾರ್ಸ್ ಮಾಲಕ, ಉದ್ಯಮಿ ಎ.ಕೆ. ಜಯರಾಮ ಶೇಖ ಅವರು ಸಂಸ್ಮರಣಾ ನುಡಿಗಳನ್ನಾಡಿ ‘ಸಂಬಂಧದಲ್ಲಿ ಮಾವನಾಗಿ ತನ್ನ ಬದುಕನ್ನು ರೂಪಿಸಿದ ಎ.ಕೆ.ನಾರಾಯಣ ಶೆಟ್ಟರು ದಿ.ಎಫ್.ಎಚ್.ಒಡೆಯರ್ ಅವರ ಮಾರ್ಗದರ್ಶನದಲ್ಲಿ ತಾಳಮದ್ದಳೆ ಅರ್ಥಧಾರಿಯಾಗಿ ಅರ್ಕುಳ ಪರಿಸರದಲ್ಲಿ ಜನಪ್ರಿಯರಾಗಿದ್ದರು. ನಿಕಟ ಬಂಧು ಎ.ಕೆ.ಮಹಾಬಲ ಶೆಟ್ಟರೊಂದಿಗೆ ಸೇರಿ ಫರಂಗಿಪೇಟೆಯಲ್ಲಿ ಯಕ್ಷಗಾನ ಸಂಘವನ್ನು ಕಟ್ಟಿ ಬೆಳೆಸಿದ್ದರು’ ಎಂದರು. ವಕ್ವಾಡಿ ಶೇಖರ ಶೆಟ್ಟಿ ಸಮ್ಮಾನ:ಸಮಾರಂಭದಲ್ಲಿ ಯಕ್ಷಾಂಗಣದ ಹಿರಿಯ ಸದಸ್ಯ, ವಿಜಯಾ ಬ್ಯಾಂಕಿನ ನಿವೃತ್ತ ಪ್ರಬಂಧಕ ವಕ್ವಾಡಿ ಶೇಖರ ಶೆಟ್ಟಿ ಅವರನ್ನು ಸಪತ್ನಿಕರಾಗಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ಯಕ್ಷಗಾನ ಕಲಾಸಕ್ತಿ ಮತ್ತು ಕ್ರಿಯಾಶೀಲ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಶೇಖರ ಶೆಟ್ಟರ ಧರ್ಮಪತ್ನಿ ವಸಂತಿ ಎಸ್. ಶೆಟ್ಟಿ ಜೊತೆಗಿದ್ದರು.ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ರೋಟರಿ ಜಿಲ್ಲಾ ಮಾಜಿ ಗವರ್ನರ್ ಪ್ರಕಾಶ ಕಾರಂತ, ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯಶೀಲ ಅಡ್ಯಂತಾಯ ಮುಖ್ಯ ಅತಿಥಿಗಳಾಗಿದ್ದರು. ದಿ.ಎ.ಕೆ. ನಾರಾಯಣ ಶೆಟ್ಟರ ಧರ್ಮ ಪತ್ನಿ ಕಾವೇರಿ,ಅಳಿಯ ವಿಠಲ ರೈ, ಮಕ್ಕಳಾದ ಶ್ರೀನಾಥ ಶೆಟ್ಟಿ ಮತ್ತು ದಾಕ್ಷಾಯಿಣಿ ಉಪಸ್ಥಿತರಿದ್ದರು. ಯಕ್ಷಾಂಗಣದ ಪದಾಧಿಕಾರಿಗಳಾದ ಪಣಿಯೂರು ಕರುಣಾಕರ ಶೆಟ್ಟಿ, ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ, ಸುಮಾ ಪ್ರಸಾದ್ ವೇದಿಕೆಯಲ್ಲಿದ್ದರು.ಯಕ್ಷಾಂಗಣ ಮಂಗಳೂರು ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ ಸ್ವಾಗತಿಸಿದರು. ಸಂಚಾಲಕ ರವೀಂದ್ರರೈ ಕಲ್ಲಿಮಾರು ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು. ‘ಸುದರ್ಶನೋಪಾಖ್ಯಾನ’ ತಾಳಮದ್ದಳೆ:ಯಕ್ಷಗಾನ ತಾಳಮದ್ದಳೆ ಸಪ್ತಾಹದ ಆರನೇ ದಿನ ಶ್ರೀ ಚಾಮುಂಡೇಶ್ವರಿ ಯಕ್ಷಕೂಟ ಕಣಿಯೂರು ಕನ್ಯಾನ ಇವರಿಂದ ‘ಸುದರ್ಶನೋಪಾಖ್ಯಾನ’ ತಾಳಮದ್ದಳೆ ಜರಗಿತು. ಶ್ರೀ ಮಹಾಬಲೇಶ್ವರ ಸ್ವಾಮೀಜಿ ಕಣಿಯೂರು, ಶ್ಯಾಮ ಭಟ್ ಪಕಳಕುಂಜ, ಗುಂಡ್ಯಡ್ಕ ಈಶ್ವರ ಭಟ್, ರಾಜಗೋಪಾಲ್ ಕನ್ಯಾನ ಅರ್ಥಧಾರಿ ಗಳಾಗಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಸೂರ್ಯನಾರಾಯಣ ಭಟ್ ಕಣಿಯೂರು ಹಾಗೂ ಚಂಡೆ-ಮದ್ದಳೆಗಳಲ್ಲಿ ರಾಮ ಭಟ್ ಕುದುರೆಕೂಡ್ಲು, ಜಿಡ್ಡು ಶ್ರೀಕೃಷ್ಣ ಭಟ್, ಕುಮಾರ ಅದ್ವೈತ್ ಕನ್ಯಾನ ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಡಾ ಕುಲಾಲ್ ಗೆ ಮಂಗಳೂರು ಐಎಂಎ ಯ ರಾಜ್ಯೋತ್ಸವ ಜೀವಮಾನದ ಸಾಧನಾ ಪುರಸ್ಕಾರ

ವೈದ್ಯಕೀಯ ಸೇವೆಯ ಜೊತೆಗೆ ನಾಡು ನುಡಿ ನೆಲ ಜಲ ಪರಿಸರ ಪ್ರಕೃತಿಯ ಉಳಿವಿಗಾಗಿ ಸಾಹಿತ್ಯ ಸಂಘಟನೆ ಹಾಗೂ ಜನಜಾಗೃತಿಯ ಮೂಲಕ ಮಾಡಿದ ಜೀವಮಾನದ ಸಾಧನೆಗೆ ಮಂಗಳೂರು ವೈದ್ಯಕೀಯಸಂಘ( ಐಎಂಎ) ದ ವತಿಯಿಂದ ಚೊಚ್ಚಲ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ದಕ ಮತ್ತು ಉಡುಪಿ ಜಿಲ್ಲೆಯ ಗಣ್ಯರಾದ ಡಾ. ಶಾಂತರಾಮ್ ಶೆಟ್ಟಿ, ನಾಡೋಜ ಜಿ ಶಂಕರ್, ಬಹುಭಾಷಾ ಚಿತ್ರನಟ ಸುಮನ್ ತಲ್ವಾರ್, ನಿಟ್ಟೆ ವಿವಿಯ ಡಾ ಸತೀಶ್ ಭಂಡಾರಿ, ಆಕಾಶವಾಣಿಯ ವಸಂತ್ ಪೆರ್ಲ, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಹಾಗೂ ಹಾಲಿ ಅಧ್ಯಕ್ಷರುಗಳಾದ ಪ್ರದೀಪ ಕುಮಾರ್ ಕಲ್ಕೂರ ಮತ್ತು ಡಾ ಶ್ರೀನಾಥ್ ಉಜಿರೆ ಸಹಿತ ಐಎಂಎ ಮಂಗಳೂರು ಶಾಖೆಯ ಹಿರಿ ಕಿರಿಯ ಮತ್ತು ಮಹಿಳಾ ನಾಯಕ ನಾಯಕಿಯರ ಉಪಸ್ಥಿತಿಯಲ್ಲಿ ಜೀವಮಾನದ ಸಾಧನೆಗಾಗಿ ನೀಡಿ ಗೌರವಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ (ಸ್ವಾಯತ್ತ) ಕಾಲೇಜಿನಲ್ಲಿ ಸಿನಿಮಾ ರಸಗ್ರಹಣ ಕಾರ್ಯಾಗಾರ. ಬದುಕಿನ ಭಾಗವಾದ ದೃಶ್ಯ-ಶ್ರವ್ಯ ಮಾಧ್ಯಮ: ಜಾಧವ್

ವಿದ್ಯಾಗಿರಿ (ಮೂಡುಬಿದಿರೆ): ಗಾಳಿ, ನೀರು, ಅಗ್ನಿಯಷ್ಟೇ ‘ದೃಶ್ಯ-ಶ್ರವ್ಯ ಮಾಧ್ಯಮ’ವೂ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ನಿವೃತ್ತ ಸಹ ಪ್ರಾಧ್ಯಾಪಕ ಜಯವಂತ ಜಾಧವ್ ಹೇಳಿದರು.ಆಳ್ವಾಸ್ (ಸ್ವಾಯತ್ತ) ಕಾಲೇಜಿ ದೃಶ್ಯ-ಶ್ರವ್ಯ ಸಭಾಂಗಣದಲ್ಲಿ ಸೋಮವಾರ ಇಂಗ್ಲಿಷ್ ಸ್ನಾತಕೋತ್ತರ ವಿಭಾಗ, ಕನ್ನಡ ಪದವಿ ವಿಭಾಗ, ಆಳ್ವಾಸ್ ಸಿನಿಮಾ ಸಮಾಜ ಹಾಗೂ ಹೆಗ್ಗೋಡು ನೀನಾಸಂ ಪ್ರತಿಷ್ಠಾನದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ‘ಸಿನಿಮಾ ರಸಗ್ರಹಣ-ಎರಡು ದಿನಗಳ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.ನಳದಲ್ಲಿ ಮನೆ ಮನೆಗೆ ನೀರು ಬರುವಂತೆ, ದೃಶ್ಯ- ಶ್ರವ್ಯ ಮಾಧ್ಯಮ ಬರಲಿದೆ ಎಂದು ಕೆಲವು ದಶಕಗಳ ಹಿಂದೆ ತಜ್ಞರು ಭವಿಷ್ಯ ನುಡಿದಿದ್ದರು. ಆದರೆ, ಇಂದು ಸಂವಹನದ ಜೊತೆ ದೃಶ್ಯ-ಶ್ರವ್ಯ ಮಾಧ್ಯಮದ ರೂಪಕದಂತಿರುವ ‘ಮೊಬೈಲ್’ ನಮ್ಮ ಅಂಗೈಯನ್ನು ಆವರಿಸಿದೆ. ಅದರಿಂದ ಅಗಲುವಿಕೆ ಅಸಾಧ್ಯ ಅನಿಸಿದೆ ಎಂದು ಮಾರ್ಮಿಕವಾಗಿ ವಿವರಿಸಿದರು.ಡಿಜಿಟಲೈಸೇಷನ್ ಮತ್ತು ಮಿನಿಯೇಚರೈಸೇಶನ್ ಎಂಬ ಜಾಗತಿಕ ಪ್ರಕ್ರಿಯೆಯು ಇಂದು ಮೊಬೈಲ್‌ನಲ್ಲಿ ದೊಡ್ಡ ಗ್ರಂಥಾಲಯವನ್ನು, ಜಗತ್ತಿನ ಸಂಪರ್ಕವನ್ನು ನಿಮ್ಮದಾಗಿಸಿದೆ. ಮಾತಿನ ಭಾಷೆಗಿಂತ ವಿಭಿನ್ನವಾಗಿ ಸಿನಿಮಾ ಭಾಷೆ ಸಂವಹನ ಮಾಡುತ್ತಿದೆ ಎಂದರು.ಸಿನಿಮಾದ ಮಹತ್ವವನ್ನು ಹಲವು ದಶಕಗಳ ಹಿಂದೆಯೇ ಮನಗಂಡಿದ್ದ ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತ ಹಾಗೂ ಹೆಗ್ಗೋಡಿನ ಕೆ.ವಿ. ಸುಬ್ಬಣ್ಣ ಅವರು, ‘ಶಿಕ್ಷಣದಲ್ಲಿ ಸಿನಿಮಾ’ದ ಅವಶ್ಯಕತೆಯನ್ನು ಪ್ರತಿಪಾದಿಸಿದ್ದರು. ಅಂದಿನ ಸರ್ಕಾರಕ್ಕೆ ಸಲಹೆಯನ್ನೂ ನೀಡಿದ್ದರು ಎಂದರು.‘ಪುಣೆ ಫಿಲಂ ಸಂಸ್ಥೆಯಲ್ಲಿ ಶಿಬಿರ ಮುಗಿಸಿ ಬಂದ ಕೆ.ವಿ. ಸುಬ್ಬಣ್ಣ ಅವರು ಹೆಗ್ಗೋಡಿನಲ್ಲಿ ಸಿನಿಮಾ ಅಧ್ಯಯನದ ಅವಶ್ಯಕತೆಯನ್ನು ಶಿಬಿರ ಮಾದರಿಯಲ್ಲಿ ಪಸರಿಸಿದರು. ಅವರ ಕೊಡುಗೆ ಅಪಾರ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ‘ಸಿನಿಮಾ ಸಮಾಜದ ಪ್ರತಿಬಿಂಬ. ಕೆಲವೊಮ್ಮೆ ಸಮಾಜವೂ ಸಿನಿಮಾದ ಪ್ರತಿಬಿಂಬ ಆಗಬಹುದು. ಆದರೆ, ಸಿನಿಮಾದ ಉದ್ದೇಶ ಕೇವಲ ಹಣ ಮತ್ತು ಮಾರುಕಟ್ಟೆ ಮಾತ್ರವಲ್ಲ, ಸಮಾಜ ನಿರ್ಮಾಣದ ಸದುದ್ದೇಶವನ್ನೂ ಹೊಂದಿದೆ’ ಎಂದರು.ಕಲೆ ಕೇವಲ ಕಲೆಗಾಗಿಯೇ ಅಥವಾ ಯಾವುದಾದರೂ ಉದ್ದೇಶಕ್ಕಾಗಿಯೇ ಎಂಬ ಜಿಜ್ಞಾಸೆ ಬಹಳ ಹಳೆಯದು. ಸಾಮಾಜಿಕ ಬದ್ಧತೆ ಇದ್ದಾಗ ಕಲೆಗೆ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಬಹು ಪ್ರಭಾವ ಬೀರುವ ಮಾಧ್ಯಮ ಸಿನಿಮಾ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಯೋಜಕ, ಕಾಲೇಜಿನ ಕುಲಸಚಿವ (ಅಕಾಡೆಮಿಕ್ಸ್) ಡಾ.ಟಿ.ಕೆ. ರವೀಂದ್ರನ್, ಸಿನಿಮಾ ನೋಡುವುದೂ ಒಂದು ಕಲೆ. ಸಮಾಜಕ್ಕೆ ಸಿನಿಮಾದ ಅವಶ್ಯಕತೆ, ರಸಗ್ರಹಣ ವಿಚಾರಗಳ ಬಗ್ಗೆ ಹೆಗ್ಗೋಡು ನೀನಾಸಂ ಕೊಡುಗೆ ಅನನ್ಯ’ ಎಂದು ಬಣ್ಣಿಸಿದರು.ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪದವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಯೋಗೀಶ್ ಕೈರೋಡಿ, ಆಳ್ವಾಸ್ ಫಿಲಂ ಸೊಸೈಟಿ ಸಂಯೋಜಕ ಹರ್ಷವರ್ಧನ ಪಿ.ಆರ್, ಇಂಗ್ಲಿಷ್ ವಿಭಾಗದ ಜ್ಯೂಲಿಯಾನ ಇದ್ದರು. ಪವಿತ್ರ ತೇಜ್ ನಿರೂಪಿಸಿದರು, ಏಂಜಲ್ ಶೈನಾ ಸ್ವಾಗತಿಸಿ, ಜೀವಿತ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಬಸ್ ನಿಲ್ದಾಣದ ಗೋಡೆಯು ಸಾರ್ವಜನಿಕರಿಗೆ ಸಂದೇಶ ಫಲಕವಾಗಿ ಮಾರ್ಪಟ್ಟಿದೆ

ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ, ಎನ್‌ಎಸ್‌ಎಸ್ ಸ್ವಯಂಸೇವಕರು, ಕಲಾವಿದರು ಮತ್ತು ಬಸ್ ನಿಲ್ದಾಣದ ಮಾಲೀಕರು ಬಸ್ ನಿಲ್ದಾಣದ ಗೋಡೆಯನ್ನು ‘ರಕ್ತ ಮತ್ತು ಅಂಗಾಂಗ ದಾನ’ ಕುರಿತು ಜಾಗೃತಿ ಫಲಕವನ್ನಾಗಿ ಪರಿವರ್ತಿಸಿದರು.‘ಸಾರ್ವಜನಿಕ ಸ್ಥಳಗಳಲ್ಲಿ ವಾಲ್ ಪೇಂಟಿಂಗ್ ಮಾಡುವುದರಿಂದ ಸಮಾಜಕ್ಕೆ ಗಣನೀಯವಾಗಿ ಉಪಯೋಗವಾಗಬಹುದು’ ಎಂಬ ಚಿಂತನೆಯ ನಂತರ ರಕ್ತ ಮತ್ತು ಅಂಗದಾನದ ಜೀವ ಉಳಿಸುವ ಮಹತ್ವವನ್ನು ಸಾರುವ ಸಂದೇಶಗಳೊಂದಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಜಿ ಪಿ ಎಸ್ ಅಥಾವುಲ್ಲಾ ಪರ್ತಿಪಾಡಿ ಒಡೆತನದ ಮಂಜನಾಡಿಯ ಖಾಸಗಿ ಬಸ್ ನಿಲ್ದಾಣದ ಗೋಡೆಯು ಸಾರ್ವಜನಿಕರಿಗೆ ಸಂದೇಶ ಫಲಕವಾಗಿ ಮಾರ್ಪಟ್ಟಿದೆ. “ಸಾರ್ವಜನಿಕ ಸ್ಥಳಗಳ ಗೋಡೆಗಳ ಮೇಲಿನ ವರ್ಣಚಿತ್ರಗಳನ್ನು ಯಾವುದೇ ಜಾಗೃತಿ ಕಾರ್ಯಕ್ರಮಗಳ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ” ಎಂದು ಯೆನೆಪೊಯ ಫಾರ್ಮಸಿ ಕಾಲೇಜಿನ NSS ಕಾರ್ಯಕ್ರಮ ಅಧಿಕಾರಿ ಶ್ರೀ. ಶ್ರೀ ಮೊಹಮ್ಮದ್ ಆಸಿಫ್ ಇಕ್ಬಾಲ್, ಸದಸ್ಯರಾದ ಶ್ರೀಮತಿ ಪ್ರಜಿತಾ ಬಿಜು, ಡಾ. ಟ್ರೀಸಾ ಪಿ ವರ್ಗೀಸ್ ಮತ್ತು ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಅಬ್ದುಲ್ ಬಶೀರ್ ಅವರು ಪ್ರಸ್ತಾಪಿಸಿದರು. ಶನಿವಾರ 16.11.2024 ರಂದು ಯೆನೆಪೊಯ ಫಾರ್ಮಸಿ ಕಾಲೇಜಿನ NSS ಸ್ವಯಂಸೇವಕರೊಂದಿಗೆ ಮಂಜನಾಡಿಯ ಕಲಾವಿದರು ಸೇರಿಕೊಂಡು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಸಂದೇಶಗಳನ್ನು ಗೋಡೆಯ ಮೇಲೆ ಚಿತ್ರಿಸಿದರು. ಜಾಗೃತಿ ಮೂಡಿಸುವುದಲ್ಲದೆ ಸಮುದಾಯ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವ ಈ ಚಟುವಟಿಕೆಯನ್ನು ಪೂರ್ಣಗೊಳಿಸಲು ಅನುಮತಿ ಮತ್ತು ಬೆಂಬಲ ನೀಡಿದ ಬಸ್ ನಿಲ್ದಾಣದ ಮಾಲೀಕರು, ಕಾಲೇಜು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ತಂಡದ ಸದಸ್ಯರು ಕೃತಜ್ಞರಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಅಂತರ್ ಕಾಲೇಜು ಬೆಸ್ಟ್ ಫಿಸಿಕ್: ಆಳ್ವಾಸ್ ಕಾಲೇಜ್‌ಗೆ ಸಮಗ್ರ ಪ್ರಶಸ್ತಿ. ಆಳ್ವಾಸ್‌ನ ಕಿಶನ್‌ಗೆ ‘ಮಿಸ್ಟರ್ ಮಂಗಳೂರು ಯುನಿರ್ವಸಿಟಿ’ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ತಂಡವು ಕುಂದಾಪುರದ ಭಂಡಾಕರ‍್ಸ್ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾಲಯ ಆಶ್ರಯದಲ್ಲಿ ಜರುಗಿದ ಮಂಗಳೂರು ವಿ.ವಿ. ಅಂತರ್ ಕಾಲೇಜು ಬಾಡಿ ಬಿಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆಯಿತು. ಆಳ್ವಾಸ್ ಕಾಲೇಜಿನ ಕಿಶಾನ್ ಶೆಟ್ಟಿ ಮಿ. ಯೂನಿವರ್ಸಿಟಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು. ದ್ವಿತೀಯ ತಂಡ ಪ್ರಶಸ್ತಿ ಎಸ್.ಡಿ.ಎಮ್ ಬಿ ಬಿ ಎಮ್ ಮಂಗಳೂರು, ತೃತೀಯ ತಂಡ ಪ್ರಶಸ್ತಿ ಸೆಕ್ರೇಡ್ ಹಾರ್ಟ್ ಕಾಲೇಜು ಮಡಂತ್ಯಾರು ಪಡೆಯಿತು. 15ನೇ ಬಾರಿ ಸಮಗ್ರ ಪ್ರಶಸ್ತಿಯನ್ನು ಪಡೆಯುತ್ತಾ ಬಂದಿರುವ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರವರು ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಚಾರುವಸಂತ ರಂಗಪಯಣ, ನಾಟಕ ಕೃತಿ ಉದ್ಘಾಟನೆ ಕಾವ್ಯವನ್ನು ರಂಗರೂಪಕ್ಕೆ ತರುವುದು ಸಾಹಸ: ರೈ

ಮೂಡುಬಿದಿರೆ: ‘ಬರಹ ಅಥವಾ ಕಾವ್ಯವನ್ನು ರಂಗರೂಪಕ್ಕೆ ತರುವುದು ಒಂದು ಸಾಹಸ. ‘ಚಾರುವಸಂತ’ದ ಮೂಲಕ ಹಂಪನಾ ಅವರ ಕನಸು ಈಡೇರಿದೆ’ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಹೇಳಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಗರದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡ ರಂಗ ಮಾಂತ್ರಿಕ ಜೀವನ್‌ರಾಂ ಸುಳ್ಯ ನಿರ್ದೇಶನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ವಿದ್ಯಾರ್ಥಿಗಳು ಅಭಿನಯಿಸಿದ, ಹಂಪನಾ ವಿರಚಿತ ದೇಸೀ ಮಹಾ ಕಾವ್ಯದ ರಂಗರೂಪ ‘ಚಾರು ವಸಂತ’ ನಾಟಕದ ಪ್ರದರ್ಶನ, ರಂಗಪಯಣ ಉದ್ಘಾಟನೆ ಮತ್ತು ನಾಟಕ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ಬರಹದಿಂದ ರಂಗರೂಪಕ್ಕೆ ಕತೆಯನ್ನು ತರುವ ಅನುಭವಗಳನ್ನು ಹಂಚಿಕೊAಡ ವಿವೇಕ ರೈ, ‘ಕಾವ್ಯ ಭಾಷೆಯನ್ನು ಹೆಚ್ಚಾಗಿ ರಂಗರೂಪಕ್ಕೆ ಬಳಸಲಾಗಿದೆ’ ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಮಾತನಾಡಿ, ‘ಚಾರುವಸಂತ’ ನಾಟಕಕ್ಕೆ ಜೈನ ಸಿದ್ಧಾಂತ ಮೂಲವಾಗಿದ್ದು, ಜೈನ ಕಾಶಿಯಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.ಮೂಡುಬಿದಿರೆಯಲ್ಲಿ ನಡೆದಿದ್ದ ೭೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಹಂಪನಾ ಅವರು ನೀಡಿದ ಸಹಕಾರ ಅವಿಸ್ಮರಣೀಯ ಎಂದರು.ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಾಣುವ ಕನಸುಗಳನ್ನು ನನಸು ಮಾಡಲು ದೀರ್ಘವಾದ ಅಭ್ಯಾಸ ಮತ್ತು ಧೈರ್ಯ ಅಗತ್ಯ ಎಂದರು.‘ಚಾರುವಸಂತ’ವನ್ನು ರಂಗರೂಪಕ್ಕೆ ತಂದ ರಂಗಕರ್ಮಿ ಡಾ.ನಾ ದಾಮೋದರ ಶೆಟ್ಟಿ ಮಾತನಾಡಿ, ಕನ್ನಡ ಕಲಿಯಲು ಮತ್ತು ಉಳಿಸಲು ಆಳ್ವಾಸ್ ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದರು.ಈ ನಾಟಕವೂ ಕನ್ನಡ ಕಲಿಕೆಗೆ ಮತ್ತು ನೈತಿಕ ಮೌಲ್ಯಗಳನ್ನು ಕಲಿಯಲು ಅನುವು ಮಾಡಿಕೊಡುತ್ತದೆ ಎಂದರು.‘ಚಾರುವಸAತ’ ನಾಟಕ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯದ ವಿವಿಧೆಡೆ ತಂಡದ ರಂಗಪಯಣ ನಡೆಯಲಿದೆ. ನಾಟಕದ ನಿರ್ದೇಶಕ, ರಂಗ ಮಾಂತ್ರಿಕ ಜೀವನ್‌ರಾಂ ಸುಳ್ಯ ಇದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆಳ್ವಾಸ್ ಚಾಂಪಿಯನ್ಸ್

ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಮಂಗಳೂರಿನ ಲಕ್ಷಿö್ಮÃ ಮೆಮೋರಿಯಲ್ ಫಿಸಿಯೋಥೆರಪಿ ಕಾಲೇಜು ಸಹಯೋಗದಲ್ಲಿ ನವೆಂಬರ್ 21 ಮತ್ತು 22ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಅಂತರ ಕಾಲೇಜು ವೇಯ್ಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಮತ್ತು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಆಳ್ವಾಸ್ ಹೋಮೀಯೋಪಥಿ ಕಾಲೇಜಿನ ವಿದ್ಯಾರ್ಥಿಗಳು ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸಮಗ್ರ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ.ಶಶಾಂಕ್ ನಾಗರಾಜ್ ದೊಡ್ಡಮನಿ (55 ಕೆಜಿ ವಿಭಾಗ), ಈರಯ್ಯ ಬಸಯ್ಯ ಹಿರೇಮಠ್ (61 ಕೆಜಿ ವಿಭಾಗ), ಪವನ್ ಎಸ್ ದೊಡ್ರಲ್ (102 ಕೆಜಿ ವಿಭಾಗ) ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಸಪಕಲೆ ಸುನಿಲ್ ಅಶೋಕ್ (109ಕೆಜಿ ವಿಭಾಗ) ಬೆಳ್ಳಿ ಹಾಗೂ ಮಹಾನಭಾವ ಹರ್ಷಲ್ (61ಕೆಜಿ ವಿಭಾಗ) ಕಂಚಿನ ಪದಕ ಪಡೆದಿದ್ದಾರೆ.

Scroll to Top