Author name: editor

ಪ್ರಾದೇಶಿಕ ವಾರ್ತೆಗಳು

ವಿದ್ಯಾದಾಯಿನಿ ಕಪ್ ವಾಲಿಬಾಲ್ ಪಂದ್ಯಾಟ ಉದ್ಘಾಟನೆ.

ಸುರತ್ಕಲ್ ಹಿಂದೂ ವಿದ್ಯಾದಾಯನಿ ಸಂಘ ಹಾಗೂ ವಿದ್ಯಾದಾಯಿನಿ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ 15 ಹಾಗೂ 18ರ ವಯೋಮಿತಿಯ ಬಾಲಕ, ಬಾಲಕಿಯರ “ವಿದ್ಯಾದಾಯನೀ ಕಪ್ — 2025” ವಾಲಿಬಾಲ್ ಪಂದ್ಯಾಟವನ್ನು ರಾಷ್ಟ್ರೀಯ ಕ್ರೀಡಾಪಟು ಪುಂಡಲೀಕ ಹೊಸಬೆಟ್ಟು ಇವರು ಉದ್ಘಾಟಿಸಿದರು. “ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿಯಿಂದ ಆಡಿ ಕ್ರೀಡೆಯಲ್ಲಿ ಸಾಧನೆ ಮಾಡಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳಿಸಿ ಸಾಧಿಸಿ ತೋರಿಸಿ ಎಂದು ಯುವ ಕ್ರೀಡಾ ಪಟುಗಳಿಗೆ ಸ್ಫೂರ್ತಿಯ ಮಾತುಗಳನ್ನಾಡಿದರು. ನನ್ನ ಕ್ರೀಡಾ ಸಾಧನೆಗೆ “ಹಿಂದೂ ವಿದ್ಯಾದಾಯಿನಿ ಸಂಸ್ಥೆಯೇ ಪ್ರೇರಣಾಶಕ್ತಿ ” ಎಂದು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಹಿಂದೂ ವಿದ್ಯಾದಾಯಿನಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀರಂಗ ಎಚ್, ಜೊತೆ ಕಾರ್ಯದರ್ಶಿ ಎಂ ಜಿ ರಾಮಚಂದ್ರ ರಾವ್, ವಿದ್ಯಾದಾಯಿನಿ ಸ್ಫೋಟ್ಸ್ ಅಕಾಡೆಮಿಯ ಸಂಚಾಲಕ ಸುಬ್ರಹ್ಮಣ್ಯ ಟಿ, ಹಿರಿಯ ವಾಲಿಬಾಲ್ ಕೋಚ್ ಎವರೆಸ್ಟ್ ಪಿಂಟೋ, ಮೃದುಲಾ, ಶಾಲೆಯ ದೈಹಿಕ ಶಿಕ್ಷಕರು, ಕ್ರೀಡಾಪಟುಗಳು, ಕ್ರೀಡಾ ತರಬೇತುದಾರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಶೈಕ್ಷಣಿಕ ಮತ್ತು ಸಾಮಾಜಿಕ ಸಾಧಕ ಜಯರಾಮ ಶೇಕರಿಗೆ ಆರ್ಯಭಟ ಪ್ರಶಸ್ತಿ

ಮಂಗಳೂರು:  ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಹಿರಿಯ ಸಾರಿಗೆ ಉದ್ಯಮಿ ಎ.ಕೆ.ಜಯರಾಮ ಶೇಕ ಅವರು 50ನೇ ವರ್ಷದ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೇ 22ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.ಹಿರಿಯ ಸಾಧಕ ಎ.ಕೆ. :      ಪ್ರಸ್ತುತ 80 ವರ್ಷ ಪ್ರಾಯದವರಾದ ಹಿರಿಯ ಸಮಾಜ ಸೇವಕ ಎ.ಕೆ. ಜಯರಾಮ ಶೇಕರದ್ದು ಸಾರಿಗೆ ಮತ್ತು ಆಟೋಮೊಬೈಲ್ ಉದ್ಯಮದಲ್ಲಿ ದೊಡ್ಡ ಹೆಸರು. ಬಂಟ್ವಾಳ ತಾಲೂಕಿನ ಅರ್ಕುಳ ಕುಂಪಣ ಮಜಲಿನಲ್ಲಿ ದಿ.ಮಿಜಾರು ಬಾಬು ಶೇಕ ಮತ್ತು ಲಕ್ಷ್ಮಿ ಅವರ ನಾಲ್ಕು ಮಕ್ಕಳಲ್ಲಿ ಮೂರನೆಯವರಾಗಿ ಜನವರಿ 15, 1944 ರಂದು ಅವರು ಜನಿಸಿದರು. ಫರಂಗಿಪೇಟೆಯ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿ ತಮ್ಮ ಸೋದರ ಮಾವ ಎ.ಕೆ. ನಾರಾಯಣ ಶೆಟ್ಟಿಯವರ ಆಶ್ರಯದಲ್ಲಿ ಬೆಳೆದರು. ಹಲವಾರು ಸಂಕಷ್ಟಗಳನ್ನು ಎದುರಿಸಿ 1962 ರಲ್ಲಿ ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ಆರಂಭಿಸಿದರು. ಬಳಿಕ ಕೆಲಕಾಲ ಹೋಟೆಲ್ ವ್ಯವಹಾರವನ್ನು ನಡೆಸಿದರು.ಸಾರಿಗೆ ಉದ್ಯಮಿಯಾಗಿ:       ಆಟೋಮೋಟಿವ್ ಉದ್ಯಮದಲ್ಲಿ ಜಯರಾಮ ಶೇಕರದು ದೀರ್ಘವಾದ ಪ್ರಯಾಣ. 1972 ರಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಸಾಕಷ್ಟು ಅನುಭವ ಗಳಿಸಿದ ನಂತರ, ಅವರು ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಬಯಲಾಟದ ಬಸ್ಸೊಂದನ್ನು ಖರೀದಿಸಿ ‘ಜ್ಯೋತಿ ಮೋಟಾರ್ಸ್’ ಸ್ಥಾಪಿಸಿದರು. ಜಯರಾಮ ಶೇಕರ ನಾಯಕತ್ವದಲ್ಲಿ  ಪ್ರವರ್ಧಮಾನಕ್ಕೆ ಬಂದ  ಕಂಪನಿ ಮುಂದೆ ‘ಮಹೇಶ್ ಮೋಟಾರ್ಸ್’ ಎಂಬ ಹೆಸರಿನ ಪ್ರಮುಖ ಸಾರಿಗೆ ಉದ್ಯಮವಾಗಿ ಬೆಳೆಯಿತು. 1976 ರ ಹೊತ್ತಿಗೆ ಅದು ಹಲವು ಪ್ರವಾಸಿ ಬಸ್ ಸೇವೆಗಳನ್ನು ಆರಂಭಿಸಿತು.1981 ರಲ್ಲಿ  ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಮತ್ತು ಮೇಘಾಲಯ ಸೇರಿದಂತೆ ಎಂಟು ರಾಜ್ಯಗಳನ್ನು ಒಳಗೊಂಡ ಮಹತ್ವಾಕಾಂಕ್ಷೆಯ ಅಖಿಲ ಭಾರತ ಪ್ರವಾಸವನ್ನು  ಆಯೋಜಿಸಿದುದು ಕಂಪನಿಯ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿತು.ಮಹೇಶ್ ಆಟೋ ಸ್ಟೋರ್ಸ್:      ಆಪ್ತ ಸ್ನೇಹಿತ ಮತ್ತು ಹಿತೈಷಿ, ಸೆಂಟ್ರಲ್ ಆಟೋ ಸ್ಟೋರ್ಸ್‌ನ ಮ್ಯಾನೇಜರ್  ಲೂಯಿಸ್ ಫುರ್ಟಾಡೊ ಅವರ ಸಲಹೆಯನ್ನು ಅನುಸರಿಸಿ 1992 ರಲ್ಲಿ ಶೇಕರು ಮಂಗಳೂರಿನ ಮೈದಾನ್ ಮೂರನೇ  ಅಡ್ಡರಸ್ತೆಯಲ್ಲಿ  ‘ಮಹೇಶ್ ಆಟೋ ಸ್ಟೋರ್’ ಎಂಬ ಬಿಡಿಭಾಗಗಳ  ಮಾರಾಟ ಮಳಿಗೆ ಸ್ಥಾಪಿಸುವ ಮೂಲಕ ಹೊಸ ಉದ್ಯಮದಲ್ಲಿ ತೊಡಗಿಸಿಕೊಂಡರು.ಕಳೆದ ದಶಕದಲ್ಲಿ ಮಂಗಳೂರಿನ ಮೂಲಸೌಕರ್ಯ ಕ್ಷೇತ್ರದ ಬೆಳವಣಿಗೆಯ ನಡುವೆ ಮಹೇಶ್ ಮೋಟಾರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಸ್ಥಳಗಳಿಗೆ ಸಿದ್ಧ-ಮಿಶ್ರ ಕಾಂಕ್ರೀಟ್ ಅನ್ನು ಸಮರ್ಥವಾಗಿ ಸಾಗಿಸಲು ಹೆವಿ-ಡ್ಯೂಟಿ ಕಾಂಕ್ರೀಟ್ ಮಿಕ್ಸರ್ ಟ್ರಕ್‌ಗಳನ್ನು ಪರಿಚಯಿಸುವ ಮೂಲಕ ಮತ್ತಷ್ಟು ಕಟ್ಟಡ ನಿರ್ಮಾಣ ಕ್ಷೇತ್ರವನ್ನು ವೈವಿಧ್ಯಗೊಳಿಸಲು  ಅವಕಾಶವನ್ನು ಒದಗಿಸಿತು.       ಎ.ಕೆ.ಜಯರಾಮರು 1998 ರಿಂದ ನಾಲ್ಕು ಅವಧಿಗೆ ದಕ್ಷಿಣ ಕನ್ನಡ ಬಸ್ ಮಾಲಿಕರ ಸಂಘದ ಅಧ್ಯಕ್ಷರಾಗಿ ಮತ್ತು ಮೂರು ವರ್ಷಗಳ ಕಾಲ ಕರ್ನಾಟಕ ಬಸ್ ಮಾಲಿಕರ ಒಕ್ಕೂಟದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ  ‘ದಕ್ಷಿಣ ಕನ್ನಡ ಒಪ್ಪಂದ ವಾಹನ ಮಾಲಕರ ಸಂಘದ’ ಅಧ್ಯಕ್ಷರಾಗಿ ಖಾಸಗಿ ಬಸ್ ನಿರ್ವಾಹಕರ ಅಗತ್ಯತೆಗಳನ್ನು ಸಮರ್ಥಿಸಲು ದಣಿವರಿಯದ ಕೆಲಸ ಮಾಡುತ್ತಿದ್ದಾರೆ.           1971 ರಲ್ಲಿ ಶ್ರೀಮತಿ ಪದ್ಮಾವತಿಯವರನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ ಶೇಕರು ಇಬ್ಬರು ಹೆಣ್ಣುಮಕ್ಕಳು ಮತ್ತು ಮೂವರು ಗಂಡು ಮಕ್ಕಳನ್ನು ಪಡೆದಿದ್ದಾರೆ. ನಿರಂತರ ಕಾರ್ಯ ಚಟುವಟಿಕೆಗಳ ನಡುವೆಯೂ ತಮ್ಮ ಕುಟುಂಬ, ವ್ಯಾಪಾರ ಮತ್ತು ವಿವಿಧ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ಚಲನಚಿತ್ರ ನಿರ್ಮಾಣ:      ತಮ್ಮ ಉದ್ಯಮದೊಂದಿಗೆ ಕಲೆ, ಸಂಸ್ಕೃತಿ ಮತ್ತು ಶಿಕ್ಷಣದ ಮೇಲೆ ಶೇಕರಿಗೆ ಅಪಾರ ಅಭಿಮಾನ. 1979ರಲ್ಲಿ ಪಿ.ಲಂಕೇಶ್ ಅವರ ‘ಎಲ್ಲಿಂದಲೋ ಬಂದವರು’ ಕನ್ನಡ ಚಲನಚಿತ್ರ ನಿರ್ಮಾಣದ ಪಾಲುದಾರರಾಗಿ ಚಿತ್ರ ರಂಗದಲ್ಲಿಯೂ ಅವರ ಸೇವೆ ಸಂದಿದೆ. ಹಿಂದಿ ಚಿತ್ರರಂಗದ ಸ್ಟಂಟ್ ಮಾಸ್ಟರ್ ರಾಮ್ ಶೆಟ್ಟಿ ಅವರ ‘ಬಂಗಾರ್ದ ಕುರಲ್’ ತುಳು ಚಲನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಯಕ್ಷಗಾನ ಮತ್ತು ಶಿಕ್ಷಣ ಸೇವೆ:     ಭಾರತೀಯ ಲಲಿತ ಕಲೆಗಳ ಮಹಾಪೋಷಕರಾಗಿ ಜಯರಾಮ ಶೇಕರು ಹಲವು ಕಲಾವಿದರಿಗೆ ಮತ್ತು ಸಂಘ ಸಂಸ್ಥೆಗಳಿಗೆ ನೆರವಾಗಿದ್ದಾರೆ‌. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ವರ್ಷಂಪ್ರತಿ ಆಯೋಜಿಸುವ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ದಲ್ಲಿ 1913 ರಿಂದ ನಿರಂತರ ತಮ್ಮ ಮಾವ ಹಿರಿಯ ಯಕ್ಷಗಾನ ಅರ್ಥಧಾರಿ ದಿ.ಎ.ಕೆ. ನಾರಾಯಣ ಶೆಟ್ಟರ ಸಂಸ್ಮರಣ ತಾಳಮದ್ದಳೆಯನ್ನು ನಡೆಸುತ್ತಿದ್ದಾರೆ.        ಶಿಕ್ಷಣದ ಮೇಲಿನ ಆಳವಾದ ಬದ್ಧತೆಯಿಂದ ಅವರು ತಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ತಾನು ಕಲಿತ ಫರಂಗಿಪೇಟೆ ಶ್ರೀ ರಾಮ ಹೈಯರ್ ಪ್ರೈಮರಿ ಸ್ಕೂಲಿಗಾಗಿ ಮೀಸಲಿಟ್ಟಿದ್ದಾರೆ. ಶಾಲೆಯ ಟ್ರಸ್ಟಿ, ಕಾರ್ಯದರ್ಶಿ ಮತ್ತು ಶತಮಾನೋತ್ಸವ ಆಚರಣೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿ ‘ಜಯಪದ್ಮ’ ಎಂಬ ನೂತನ ಸಭಾಂಗಣವನ್ನು ಕಟ್ಟಿಸಿಕೊಟ್ಟಿದ್ದಾರೆ.ಶಾಲಾ ಮಕ್ಕಳ ಮೇಲಿನ ವಾತ್ಸಲ್ಯ ಎಳೆಯ ಮಕ್ಕಳು ಅವರಲ್ಲಿ ಪ್ರೀತಿಯ ಅಜ್ಜನನ್ನು ಕಾಣುವಂತೆ ಮಾಡಿದೆ. ಸಂಘ ಸಂಸ್ಥೆಗಳಲ್ಲಿ:    ಜಯರಾಮ ಶೇಕರು 1972ರಲ್ಲಿ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ಸದಸ್ಯರಾಗಿ ರಾಜಕೀಯ ರಂಗದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 2019 ರಲ್ಲಿ ಫರಂಗಿಪೇಟೆಯ ರೋಟರಿ ಕ್ಲಬ್‌ ಅಧ್ಯಕ್ಷರಾಗಿ   ವಿವಿಧ ಸಮಾಜೋಪಯೋಗಿ ಕೆಲಸಗಳ ನೇತೃತ್ವ ವಹಿಸಿದ್ದರು. ಪರಿಸರದ ಹಲವು ದೇವಾಲಯಗಳ ಅಭಿವೃದ್ಧಿ ಮತ್ತು ನವೀಕರಣಕ್ಕೆ ಉದಾರ ಕೊಡುಗೆ ನೀಡಿದ್ದಾರೆ. ಅಲ್ಲದೆ ಅಲ್ಲಿನ ಧಾರ್ಮಿಕ – ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಪ್ರಶಸ್ತಿ – ಪುರಸ್ಕಾರ:      ಎ.ಕೆ.ಜಯರಾಮ ಶೇಕರಿಗೆ 75ವರ್ಷ ತುಂಬಿದ ಸಂದರ್ಭದಲ್ಲಿ ಅವರ ಕುಟುಂಬ ವರ್ಗ ಮತ್ತು ಬಂಧು ಮಿತ್ರರು ಅವರನ್ನು ಸಪತ್ನಿಕರಾಗಿ ಗೌರವಿಸಿ ಸಾರ್ವಜನಿಕ ಸಮ್ಮಾನ ನೀಡಿದ್ದಾರೆ. ಕಲಾ ಕ್ಷೇತ್ರಕ್ಕೆ ನೀಡಿದ ಸೇವೆಗಾಗಿ 2019 ರಲ್ಲಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಅವರಿಗೆ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಿ ಗೌರವಿಸಿದೆ. ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯಿಂದ ಹಿರಿಯ ರೊಟೇರಿಯನ್ ಎಂದು ಗೌರವಿಸಲ್ಪಟ್ಟಿದ್ದಾರೆ.ಆಟೋಮೊಬೈಲ್ ಉದ್ಯಮಕ್ಕೆ ನೀಡಿದ ಅನನ್ಯ ಕೊಡುಗೆಯನ್ನು ಗುರುತಿಸಿ ದ.ಕ. ಆಟೋಮೊಬೈಲ್ ಮತ್ತು ಟೈಯರ್ ಡೀಲರ್ಸ್ ಅಸೋಸಿಯೇಷನ್ (ರಿ.) ಸೆಪ್ಟೆಂಬರ್ 22, 2024 ರಂದು ಅವರನ್ನು ‘ಜೀವಮಾನ ಪ್ರಶಸ್ತಿ’ ಯೊಂದಿಗೆ ಸನ್ಮಾನಿಸಿದೆ.  ಹೀಗೆ ಇನ್ನೂ ಹಲವಾರು ಸಂಸ್ಥೆಗಳಿಂದ ಶೇಕರು ಗೌರವ ಸಮ್ಮಾನಗಳನ್ನು ಪಡೆದಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮಂಗಳೂರು: ಫಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ 11 ಮಕ್ಕಳಿಗೆ ಪ್ರಥಮ ಪರಮ ಪವಿತ್ರ ಪ್ರಸಾದ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಪ್ರಥಮ ಪರಮ ಪವಿತ್ರ ಪ್ರಸಾದ ಸಮಾರಂಭ ಭಾನುವಾರ ನಡೆಯಿತು.ಎಲ್ ರೊಯ್ ನೊರೊನ್ಹಾ, ವೀರಾ ರೇಚಲ್ ಡಿ ಸೋಜಾ, ಸ್ವಿಜಲ್ ಸಿಯಾ ಫೆರ್ನಾಂಡಿಸ್, ಅರ್ನಾಲ್ಡ್ ಜೋಸ್ಪಾ ಡಿ ಸಿಲ್ವಾ, ಕೆವಿನ್ ಡಿ ಸೋಜಾ, ರೊಸ್ವಿನ್ ಡಿ ಸೋಜಾ, ಈವಾ ಮೈರಾ ಡಿ ಮೆಲ್ಲೊ, ಜಿಯಾ ನಿಶಿತಾ ವೇಗಸ್, ನತಾಲಿಯಾ ಸಾರಾ ಕ್ರಾಸ್ತಾ, ನಿವಿಲ್ ನೀಲ್ ಡಿ ಸೋಜಾ, ಜೆಸೆಲ್ ವಿಯಾ ಕ್ರಾಸ್ತಾ ಎಂಬ 11 ಜನ ಮಕ್ಕಳು ಪ್ರಥಮವಾಗಿ ಪರಮ ಪವಿತ್ರ ಪ್ರಸಾದ ಸ್ವೀಕರಿಸಿದರು.ಚರ್ಚಿನ ಪ್ರಧಾನ ಧರ್ಮ ಗುರು ಫಾ. ಆಲ್ಬನ್ ಡಿ ಸೋಜಾ ಮತ್ತು ಬೆಳ್ಳೂರಿನ ಫಾ. ಸಿರಿಲ್ ವಾಲ್ಡರ್ ಅವರ ಉಪಸ್ಥಿತಿಯಲ್ಲಿ ಸಂಭ್ರಮದ ಬಲಿ ಪೂಜೆ ನಡೆಯಿತು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಕ್ರೈಸ್ತ ಶಿಕ್ಷಣ ಸಂಚಾಲಕಿ ಲಿಝೀ ಫೆರ್ನಾಂಡಿಸ್,ಶಿಕ್ಷಕಿ ರೆನಿಟಾ ಟೆಲ್ಲಿಸ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಕಾಸರಗೋಡು ಪತ್ರಕರ್ತರ ಸಂಘದ ದತ್ತಿನಿಧಿ ಪ್ರಶಸ್ತಿ ಪ್ರದಾನ. ತನಿಖಾ ಪತ್ರಿಕೋದ್ಯಮಕ್ಕಾಗಿ ಇಕ್ಬಾಲ್ ಕುತ್ತಾರ್ ಪ್ರಶಸ್ತಿ ಸ್ವೀಕಾರ

ಮಂಗಳೂರು: ಕನ್ನಡ ಪತ್ರಿಕೋದ್ಯಮಕ್ಕೆ ಸಲ್ಲಿಸುವ ಶ್ರೇಷ್ಠ ಸೇವೆಗಾಗಿ ಕರ್ನಾಟಕ, ಕೇರಳ ಹಾಗೂ ಮುಂಬೈಯ ಪತ್ರಕರ್ತರಿಗೆ ಕಾಸರಗೋಡು ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘ ನೀಡಲ್ಪಡುವ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವು ನಿನ್ನೆ ಕಾಸರಗೋಡಿನಲ್ಲಿ ನಡೆದಿದ್ದು, ತನಿಖಾ ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಕಾಲ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಮಂಗಳೂರಿನ ಪತ್ರಕರ್ತ ಇಕ್ಬಾಲ್ ಕುತ್ತಾರ್ ಈ ಪ್ರಶಸ್ತಿಗೆ ಭಾಜನರಾಗಿ ಸದ್ರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.ಮೂರು ರಾಜ್ಯಗಳ ಅರ್ಹ 21 ಪತ್ರಕರ್ತರು ಸದ್ರಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಪೈಕಿ ‘ಎನ್ಕೌಂಟರ್’ ಪತ್ರಿಕೆಯ ಸಂಪಾದಕರಾದ ಇಕ್ಬಾಲ್ ಕುತ್ತಾರ್ ರಾಜ್ಯದಲ್ಲಿ ತನಿಖಾ ವರದಿಗಾರಿಕೆಗೆ ಕಳೆದ 3 ದಶಕಗಳ ಕಾಲ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಎಡನೀರು ಮಠದ ಶ್ರೀಗಳಾದ ಸಚ್ಚಿದಾನಂದ ಭಾರತಿ ಶ್ರೀಪಾದಂಗಳ್ ಅವರ ಆಶೀರ್ವಚನದೊಂದಿಗೆ ಪ್ರಾರಂಭಗೊಂಡ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಸಚಿವರಾದ ಶ್ರೀ ಎನ್. ಚೆಲುವರಾಯ ಸ್ವಾಮಿ ಪ್ರಶಸ್ತಿ ಪ್ರದಾನಿಸಿದ್ದು, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕೆ. ಕೆ. ಶೆಟ್ಟಿ, ಸೋಮಣ್ಣ ಬೇವಿನ ಮರದ, ಟಿ. ಎಂ. ಶಹೀದ್, ಕನ್ಯಾನ ಸದಾಶಿವ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.ಕಾಸರಗೋಡು ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಯ್ಕಾಪು ಪ್ರಸ್ತಾವನೆ ಮಾಡಿದ ಕಾರ್ಯಕ್ರಮವನ್ನು ರಫೀಕ್ ಮಾಸ್ಟರ್ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ವಕೀಲರ ಸಂಘ ಬಂಟ್ವಾಳ: ನೂತನ ಅಧ್ಯಕ್ಷರಾಗಿ ರಿಚರ್ಡ್ ಕೋಸ್ತಾ ಎಂ. ಮರು ಆಯ್ಕೆ. ಪ್ರತಿಸ್ಪರ್ಧಿ ರಾಜೇಶ್ ಬೊಳ್ಳುಕಲ್ಲು ಪರಾಭವ.

(ಜಯಾನಂದ ಪೆರಾಜೆ ಬಂಟ್ವಾಳ)ವಕೀಲರ ಸಂಘ (ರಿ), ಬಂಟ್ವಾಳ ಇದರ 2025-27ನೇ ಸಾಲಿನ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ಶನಿವಾರ ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸಿ ರಿಚರ್ಡ್ ಕೋಸ್ತಾ ಎಂ. ಸ್ಪರ್ಧೆ ಮಾಡಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಎರಡನೇ ಬಾರಿಗೆ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ದಯಾನಂದ ರೈ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ನರೇಂದ್ರನಾಥ ಭಂಢಾರಿ, ಜೊತೆ ಕಾರ್ಯದರ್ಶಿಯಾಗಿ ಅಕ್ಷತಾ ಶೆಟ್ಟಿ, ಕೋಶಾಧಿಕಾರಿಯಾಗಿ ಜೆಸಿಂತಾ ಕ್ರಾಸ್ತಾ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಅಧ್ಯಕ್ಷರ ಚನಾವಣೆಗಾಗಿ 244 ಅರ್ಹ ಮತದಾರರ ಪಟ್ಟಿಯಲ್ಲಿ 222 ಮತಗಳು ಚಲಾವಣೆ ಯಾಗಿದ್ದು ರಿಚರ್ಡ್ ಕೋಸ್ತಾ ಎಂ. ರವರು 123 ಮತಗಳನ್ನು ಪಡೆದು ಜಯ ಗಳಿಸಿರುತ್ತಾರೆ.ಪ್ರತಿಸ್ಪರ್ಧಿಯಾಗಿ ಪೈಪೋಟಿ ನೀಡಿದ ರಾಜೇಶ್ ಬೊಳ್ಳುಕಲ್ಲು 95 ಮತಗಳನ್ನು ಪಡೆಯಲು ಸಮರ್ಥರಾದರು. ವಕೀಲರಾದ ಎಚ್. ಸತೀಶ್ ರಾವ್ ರವರು ಮುಖ್ಯ ಚುನಾವಣಾಧಿಕಾರಿಯಾಗಿದ್ದರು ಕೆ. ವಿ. ಭಟ್ ಮತ್ತು ಎಂ. ವಿ. ಭಟ್ ಉಪ ಚುನಾವಣಾಧಿಕಾರಿಗಳಾಗಿ ಸೀನಿಯರ್ ಕಮಿಟಿ ಸದಸ್ಯರಾದ ಎಂ. ಈಶ್ವರ ಉಪಾಧ್ಯಾಯರ ಮೇಲುಸ್ತುವಾರಿಯಲ್ಲಿ ಮತದಾನ ಪ್ರಕ್ರಿಯೆ ನಡೆದಿರುತ್ತದೆ.

ಪ್ರಾದೇಶಿಕ ವಾರ್ತೆಗಳು

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

ಈ ವಷ೯ದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿಮೂಡಬಿದ್ರೆ ಎಕ್ಸಲೆಂಟ್ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾಥಿ೯ ಅನೀಷ್ ಮುಹಮ್ಮದ್ ಹುಸೈನ್ ಅವರು 572 ಅಂಕ ಗಳಿಸಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.ಇವರು ಆಕು೯ಳ ನಡುಗುಡ್ಡೆ ನಿವಾಸಿ ಅಬ್ದುಲ್ ರಹಿಮಾನ್ ಮತ್ತು ಆಯಿಷಾ ಅವರ ಪುತ್ರ.

ಕರಾವಳಿ ಸುದ್ದಿ

ಎಸ್.ಎಸ್.ಎಲ್.ಸಿ ಫಲಿತಾಂಶ, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ. ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಸಭಾಧ್ಯಕ್ಷ ಯು ಟಿ ಖಾದರ್

ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಹಾರೈಸಿದ್ದಾರೆ.ಅಲ್ಲದೆ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದಕ್ಕೆ ಸಂತಸ ವ್ಯಕ್ತಪಡಿಸುತ್ತಾ,ಇದಕ್ಕಾಗಿ ಶ್ರಮಿಸಿದ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ,ಶಿಕ್ಷಕ-ಶಿಕ್ಷಕಿಯರಿಗೆ,ಪೋಷಕರಿಗೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಭಾಧ್ಯಕ್ಷ ಯು.ಟಿ.ಖಾದರ್ ಅಭಿನಂದನೆ ಸಲ್ಲಿಸಿದ್ದಾರೆ.ಬಹಳ ವಿಶೇಷವಾಗಿ ಅವರ ಮಂಗಳೂರು ಕ್ಷೇತ್ರ ವ್ಯಾಪ್ತಿಯ ನರಿಂಗಾನ ಗ್ರಾಮದ ಪುಂಡಕೈ ನಿವಾಸಿ ಶ್ರೀಮತಿ ಸರಸ್ವತಿ ಹಾಗೂ ಚಂದ್ರಶೇಖರ್ ದಂಪತಿಗಳ ಪುತ್ರಿ ಕುಮಾರಿ ಅಪೇಕ್ಷಾ ರಾಜ್ಯದಲ್ಲಿಯೇ ಹತ್ತನೇ ರ‍್ಯಾಂಕ್ ಗಳಿಸಿದ್ದಕ್ಕೆ ವಿಶೇಷ ಅಭಿನಂದನೆ ಸಲ್ಲಿಸುತ್ತಾ,ಕುಮಾರಿ ಅಪೇಕ್ಷಾ ರ ಭವಿಷ್ಯ ಉಜ್ವಲವಾಗಲಿ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಹಾರೈಸಿದ್ದಾರೆ.ಈ ಪರೀಕ್ಷೆಯಲ್ಲಿ ತೇರ್ಗಡೆಯಾಗದ ವಿದ್ಯಾರ್ಥಿಗಳು ಆತಂಕ, ಹತಾಶೆಗೆ ಒಳಗಾಗುವುದು ಬೇಡ, ನಿಮ್ಮೆದುರು ಮತ್ತೆ ಪರೀಕ್ಷೆ ಬರೆಯುವ ಅವಕಾಶಗಳಿವೆ. ಮರಳಿ ಪ್ರಯತ್ನಿಸಿದರೆ ಯಶಸ್ಸು ಖಂಡಿತಾ ಸಿಗಲಿದೆ ಎಂದು ಯು.ಟಿ.ಖಾದರ್ ತಿಳಿಸಿದರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಬಜ್ಪೆ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ, ದುಷ್ಕರ್ಮಿಗಳ ಪತ್ತೆ ಹಚ್ಚಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬೇಕಾದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ ಸಭಾಧ್ಯಕ್ಷ ಯು.ಟಿ.ಖಾದರ್

ಮಂಗಳೂರು – ಬಜ್ಪೆ ಕಿನ್ನಿಪದವು ಪ್ರದೇಶದಲ್ಲಿ ಸುಹಾಸ್ ಶೆಟ್ಟಿ ಎಂಬವರ ಕೊಲೆ ನಡೆದಿದ್ದು ,ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಿ,ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಾಡಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಭಾಧ್ಯಕ್ಷ ಯು.ಟಿ ಖಾದರ್ ಸೂಚನೆ ನೀಡಿದ್ದಾರೆ.ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಇಲಾಖೆಯೊಂದಿಗೂ ಚರ್ಚೆ ನಡೆಸಿದ ಯು.ಟಿ ಖಾದರ್ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು ಬೇಕಾದ ಸೂಕ್ತ ಕ್ರಮ ಕೈಗೊಳ್ಳಲು ಸರಕಾರಕ್ಕೆ ಸೂಚನೆ ನೀಡಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ವಾರ್ತಾ ಇಲಾಖೆ ವಿಶ್ವನಾಥ ಜೋಗಿ ನಿವೃತ್ತಿ. ಬೀಳ್ಕೊಡುಗೆ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಂಗಳೂರು ಇಲ್ಲಿ ಕಳೆದ 25 ವರ್ಷಗಳಿಂದ ಸಿಬ್ಬಂದಿಯಾಗಿದ್ದ ವಿಶ್ವನಾಥ ಜೋಗಿಯವರು ಎಪ್ರಿಲ್ 30ರಂದು ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಅವರಿಗೆ ವಾರ್ತಾ ಇಲಾಖೆ ಮಂಗಳೂರಿನ ಕಚೇರಿಯಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಷಾ ಅವರ ನೇತೃತ್ವದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೇಪಾಡಿ, ಪತ್ರಕರ್ತರು ಮತ್ತು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Scroll to Top