ಉಡುಪಿ ಜಿಲ್ಲಾ ಸರ್ಜನ್ ರವರ ಬದಲಾವಣೆ: ಸರಕಾರದ ಅನುಮಾನಾಸ್ಪದ ಕ್ರಮವನ್ನು ಪ್ರಶ್ನಿಸಿ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು
ಉಡುಪಿ: ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯದ ಕಾಂಗ್ರೆಸ್ ಸರಕಾರ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ರವರನ್ನು ಬದಲಾವಣೆ ಮಾಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆಂದು ಪತ್ರಕರ್ತ, ಸಾಮಾಜಿಕ ಕಾರ್ಯಕರ್ತರಾಗಿರುವ ಶ್ರೀರಾಮ ದಿವಾಣ ಉಡುಪಿಯವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.ಚುನಾವಣೆ ಘೋಷಣೆಯಾಗುವ ಕೆಲವೇ ಕೆಲವು ದಿನ ಮೊದಲು ರಾಜ್ಯ ಸರಕಾರ ಮಾಡಿರುವ ಈ ಬದಲಾವಣೆ ಸೂಕ್ತವಾದುದಲ್ಲ. ರಾಜ್ಯ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಈ ಬದಲಾವಣೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಶ್ರೀರಾಮ ದಿವಾಣರು ದೂರಿನಲ್ಲಿ ಒತ್ತಾಯಿಸಿದ್ದಾರೆ.ನಿನ್ನೆ ಮೊನ್ನೆಯವರೆಗೂ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಸರ್ಜನ್ ಆಗಿದ್ದವರು ಡಾ. ವೀಣಾ ಕುಮಾರಿ. ಇವರು ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದವರು. ಜನಪರ ಕಾಳಜಿಯ ಜನಸೇವಕರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಯಾವುದೇ ರೀತಿಯ ಭ್ರಷ್ಟಾಚಾರಕ್ಕೂ ಅವಕಾಶ ನೀಡದೆ ಕರ್ತವ್ಯ ಪಾಲಿಸುತ್ತಿದ್ದ ಡಾ. ವೀಣಾ ಕುಮಾರಿ ಅವರನ್ನು ಬದಲಾಯಿಸಿರುವ ಸರಕಾರದ ಕ್ರಮ ಅಸ್ವೀಕಾರಾರ್ಹ ಮತ್ತು ಶಂಕಾಸ್ಪದ ನಿರ್ಧಾರವಾಗಿದೆಂದು ದಿವಾಣ ಅವರು ದೂರಿದ್ದಾರೆ.ಸೇವಾ ಹಿರಿತನದಲ್ಲೂ ಡಾ. ವೀಣಾಕುಮಾರಿ ಸೀನಿಯರ್ ಆಗಿದ್ದು, ಇದೀಗ ನಿಯುಕ್ತಿಗೊಂಡ ಡಾ. ಅಶೋಕ್ ಜೂನಿಯರ್ ಆಗಿದ್ದಾರೆ. ಎಂಡಿ ಆಗಿರುವ ಡಾ. ವೀಣಾ ಪರಿಶಿಷ್ಟ ಜಾತಿಯವರಾಗಿದ್ದು, ಇವರ ಬದಲಾವಣೆ ಮಹಿಳೆಯರಿಗೆ ಮತ್ತು ದಲಿತ ಸಮುದಾಯಕ್ಕೆ ಕಾಂಗ್ರೆಸ್ ಸರಕಾರ ಮಾಡಿದ ಅನ್ಯಾಯವಾಗಿದೆಂದು ದಿವಾಣ ಅವರು ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.ಡಾ. ಅಶೋಕ್ ವಿರುದ್ಧ ಹಲವು ದೂರುಗಳಿವೆ. ಸಿಬ್ಬಂದಿಗಳಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಅಮಾನತುಗೊಂಡವರೂ ಆಗಿದ್ದಾರೆ. ಪ್ರಕರಣಗಳ ತನಿಖೆ ಮುಕ್ತಾಯಗೊಳ್ಳುವ ಮೊದಲೇ ಜಿಲ್ಲಾ ಸರ್ಜನ್ ಆಗಿ ನಿಯುಕ್ತಿ ಮಾಡಿರುವುದು ಸರಿಯಾದ ಕ್ರಮವಲ್ಲ. ಮೂರು ತಿಂಗಳ ಹಿಂದೆಯಷ್ಟೇ ಹೆಬ್ರಿಗೆ ವರ್ಗಾವಣೆಯಾಗಿದ್ದ ಡಾ. ಅಶೋಕ್ ರನ್ನು ಇದೀಗ ಇಷ್ಟು ಅವಸರವಾಗಿ ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಆಗಿ ನಿಯುಕ್ತಿಗೊಳಿದ್ದು ಖಂಡನೀಯವಾಗಿದೆಂದು ದಿವಾಣ ಅವರು ದೂರಿನಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.ಚುನಾಣಾ ಆಯೋಗ ಈ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸುವ ಮೂಲಕ ರಾಜ್ಯ ಸರಕಾರ ಮಾಡಿದ ನೇಮಕವನ್ನು ಹಿಂತೆಗೆದುಕೊಂಡು ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಮಾಡಬೇಕಾಗಿದೆ ಎಂಬುದು ರಾಜ್ಯ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಮುಂದೆ ತನ್ನ ಒತ್ತಾಯವಾಗಿದೆಂದು ದಿವಾಣ ಅವರು ದೂರಿನಲ್ಲಿ ಹೇಳಿದ್ದಾರೆ.


