ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಕೊಂಕಣಿ ಕ್ಯಾಥೋಲಿಕ್ ಲಾಯರ್ಸ್ ಗಿಲ್ಡ್: ಸೆ. 5 ರಂದು ವಾರ್ಷಿಕ ವಿಶೇಷ ಬಲಿಪೂಜೆ – ರೆಡ್ ಮಾಸ್

ಮಂಗಳೂರು: ಕಾನೂನು ಸಂಬಂಧಿತ ವೃತ್ತಿಗಳಲ್ಲಿ ನಿರತರಾಗಿರುವ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದ ಜನರಿಗಾಗಿ ನಡೆಸುವ ವಾರ್ಷಿಕ ವಿಶೇಷ ಬಲಿ ಪೂಜೆ – ರೆಡ್ ಮಾಸ್ ಮಂಗಳೂರಿನ ಜಪ್ಪು ಸಂತ ಅಂತೋನಿ ಚಾಪೆಲ್ ನಲ್ಲಿ ಸಪ್ಟೆಂಬರ್ 5 ರಂದು ಬೆಳಗ್ಗೆ 10.30 ಕ್ಕೆ ಜರಗಲಿದೆ. ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಬಲಿ ಪೂಜೆಯನ್ನು ನೆರವೇರಿಸಲಿದ್ದಾರೆ.ಬಲಿ ಪೂಜೆಯ ಬಳಿಕ 11.45 ಕ್ಕೆ ಸಂತ ಅಂತೋನಿ ಆಶ್ರಮದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೊಂಕಣಿ ಕ್ಯಾಥೋಲಿಕ್ ಲಾಯರ್ಸ್ ಗಿಲ್ಡ್ ನ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಲಿದೆ. ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಲೇ ಫೈತ್ ಫುಲ್ ಕಮಿಶನ್ ಕಾರ್ಯದರ್ಶಿ ವಂದನೀಯ ಫಾ. ಜೆ.ಬಿ. ಕ್ರಾಸ್ತಾ, ಕೊಂಕಣಿ ಕ್ಯಾಥೋಲಿಕ್ ಲಾಯರ್ಸ್ ಗಿಲ್ಡ್ ನ ಸ್ಥಾಪಕ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಸರಕಾರಿ ವಕೀಲ ಎಂ. ಪಿ. ನೊರೊನ್ಹಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಮಣಿಯಂಪಾರೆ ಚರ್ಚ್ ನಲ್ಲಿ ಮೊಂತಿ ಹಬ್ಬದ ನೊವೇನಾ ಪ್ರಾರ್ಥನೆ ಆರಂಭ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಮಣಿಯಂಪಾರೆ ಸಂತ ಲಾರೆನ್ಸ್ ಚರ್ಚ್ ನಲ್ಲಿ ಸೆಪ್ಟೆಂಬರ್ 8 ರಂದು ನಡೆಯಲಿರುವ ಮೊಂತಿ ಹಬ್ಬದ ಪೂರ್ವ ಭಾವಿಯಾಗಿ 9 ದಿನಗಳ ನೊವೇನಾ ಪ್ರಾರ್ಥನೆ ಆಗಸ್ಟ್ 30 ರಂದು ಆರಂಭಗೊಂಡಿದೆ.ಚರ್ಚಿನ ಧರ್ಮಗುರು ವಂದನೀಯ ಫಾ. ನೆಲ್ಸನ್ ದಲ್ಮೆಡಾ ಅವರ ನೊವೇನಾ ಪ್ರಾರ್ಥನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೇರಿ ಮಾತೆ ಕೇವಲ ಯೇಸು ಕ್ರಿಸ್ತರ ತಾಯಿ ಆಗಿರದೆ ನಮ್ಮೆಲ್ಲರ ತಾಯಿ ಆಗಿದ್ದಾರೆ.ಅವರಿಗೆ ಗೌರವ ನಮನ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಚರ್ಚ್ ಉಪಾಧ್ಯಕ್ಷ ವಿಲ್ಸನ್ ಡಿ ಸೋಜಾ ಉಪಸ್ಥಿತರಿದ್ದರು.ಚರ್ಚಿನ ಮಕ್ಕಳು ಮತ್ತು ಭಕ್ತರು ಮೇರಿ ಮಾತೆಗೆ ಹೂವುಗಳನ್ನು ಅರ್ಪಿಸಿ ಗೌರವ ಸಲ್ಲಿಸಿ ಪ್ರಾರ್ಥಿಸಿದರು.

ಪ್ರಾದೇಶಿಕ ವಾರ್ತೆಗಳು

ಸಂಕಷ್ಟದಲ್ಲಿ ಬೀಡಿ ಉದ್ಯಮ: ಜಿಎಸ್‌ಟಿ ಕಡಿತಕ್ಕೆ ಕೇಂದ್ರ ಸರಕಾರವನ್ನು ಆಗ್ರಹಿಸುವಂತೆ ಸಿಎಂಗೆ ಶಾಸಕ ತನ್ವೀರ್ ಸೇಠ್ ಪತ್ರ

ಮೈಸೂರು: ಲಕ್ಷಾಂತರ ಕಾರ್ಮಿಕರ ಜೀವನೋಪಾಯಕ್ಕೆ ಆಧಾರವಾಗಿರುವ ಶತಮಾನಗಳಷ್ಟು ಹಳೆಯ ಬೀಡಿ ಉದ್ಯಮವು ಗಂಭೀರ ಸಂಕಷ್ಟವನ್ನು ಎದುರಿಸುತ್ತಿದೆ. ಆದ್ದರಿಂದ ಬೀಡಿಯ ಮೇಲಿನ ಜಿಎಸ್‌ಟಿ ದರವನ್ನು 28%ರಿಂದ 18%ಕ್ಕೆ ಇಳಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಂತೆ ಮೈಸೂರು ಜಿಲ್ಲೆಯ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.ಇತ್ತೀಚೆಗೆ ಕೇಂದ್ರ ಸರಕಾರವು ಬೀಡಿ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರವನ್ನು 18%ರಿಂದ 28%ಕ್ಕೆ ಹೆಚ್ಚಿಸಿರುವುದು ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಬೀಡಿ ಉದ್ಯಮವು ಕರ್ನಾಟಕ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಈ ಉದ್ಯಮವನ್ನು ಗುಡಿ ಕೈಗಾರಿಕೆ ಎಂದು ವರ್ಗೀಕರಿಸಲಾಗಿದ್ದು, ಇದರ ಸುಮಾರು 90% ಕಾರ್ಮಿಕರು ಮಹಿಳೆಯರೇ ಆಗಿದ್ದಾರೆ ಎಂದು ಮೈಸೂರು ಬೀಡಿ ಮಜ್ದೂರ್ ಸಂಘದ ಅಧ್ಯಕ್ಷರೂ ಆಗಿರುವ ತನ್ವೀರ್ ಸೇಠ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ತಮ್ಮ ತಂದೆ ದಿವಂಗತ ಅಝೀಝ್ ಸೇಠ್ ಅವರ ಸೇವೆಯನ್ನು ನೆನಪಿಸಿಕೊಂಡ ಶಾಸಕ ತನ್ವೀರ್ ಸೇಠ್, “ನನ್ನ ತಂದೆ ದಿವಂಗತ ಅಝೀಝ್ ಸೇಠ್ ಅವರು ಬಡ ಹಾಗೂ ಶೋಷಿತ ಬೀಡಿ ಕಾರ್ಮಿಕರ ಹಕ್ಕುಗಳ ಹೋರಾಟಗಾರರಾಗಿದ್ದು, ತಮ್ಮ ರಾಜಕೀಯ ಜೀವನವನ್ನು ಬೀಡಿ ಕಾರ್ಮಿಕರ ಕಲ್ಯಾಣಕ್ಕಾಗಿ ಅರ್ಪಿಸಿದ್ದರು. ಅವರು 1952ರಲ್ಲಿ ಮೈಸೂರು ಬೀಡಿ ಮಜ್ದೂರ್ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, 2001ರಲ್ಲಿ ಅಗಲುವ ತನಕ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದರು. ಅವರ ಪ್ರಯತ್ನದಿಂದ ಕನಿಷ್ಠ ವೇತನ ಕಾಯ್ದೆಯಡಿಯಲ್ಲಿ ಬೀಡಿ ಕಾರ್ಮಿಕರನ್ನು ನೋಂದಾಯಿಸುವುದು ಮತ್ತು ಜಾರಿಗೆ ತರುವುದು ಸಾಧ್ಯವಾಯಿತು. ಜತೆಗೆ, ಬೀಡಿ ಕಾರ್ಮಿಕರಿಗಾಗಿ ಆರೋಗ್ಯ, ವಸತಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅನೇಕ ಕಲ್ಯಾಣ ಯೋಜನೆಗಳನ್ನು ಯಶಸ್ವಿಯಾಗಿ ತರಲಾಯಿತು. ಮೈಸೂರಿನಲ್ಲಿ ಕೇಂದ್ರ ಬೀಡಿ ಕಾರ್ಮಿಕರ ಆಸ್ಪತ್ರೆ ಸ್ಥಾಪನೆಗೊಂಡಿತು. ದೇಶದಲ್ಲಿ ಈ ರೀತಿಯ ಆಸ್ಪತ್ರೆ ಇದು ಒಂದೇ ಇದೆ” ಎಂದು ತಿಳಿಸಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆಯ ಧೂಮಪಾನ ವಿರೋಧಿ ನೀತಿಗಳ ಪರಿಣಾಮವಾಗಿ ತಂಬಾಕು ಉತ್ಪನ್ನಗಳ ಉತ್ಪಾದನೆ ಹಾಗೂ ತಯಾರಿಕೆ ಸುಮಾರು 50% ಇಳಿದಿದೆ. ಇದರಿಂದ ಪರ್ಯಾಯ ಉದ್ಯೋಗಾವಕಾಶಗಳಿಲ್ಲದ ಬೀಡಿ ಕಾರ್ಮಿಕರ ಜೀವನೋಪಾಯ ತೀವ್ರ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಜಿಎಸ್‌ಟಿ ದರ ಹೆಚ್ಚಳ ಉದ್ಯಮವನ್ನು ಇನ್ನಷ್ಟು ಹಿನ್ನಡೆಯತ್ತ ತಳ್ಳುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.ಅನೇಕ ಬೀಡಿ ಕೈಗಾರಿಕೆಗಳು ಮುಚ್ಚುವ ಹಂತ ತಲುಪಿದ್ದು, ವಿಶೇಷವಾಗಿ ಮಹಿಳಾ ಕಾರ್ಮಿಕರಲ್ಲಿ ನಿರುದ್ಯೋಗದ ಭೀತಿ ಹೆಚ್ಚಾಗಿದೆ. ಬೀಡಿ ಉದ್ಯಮ ಉಳಿಯಲು ಹಾಗೂ ಕಾರ್ಮಿಕರ ಜೀವನೋಪಾಯವನ್ನು ಕಾಪಾಡಲು ಜಿಎಸ್‌ಟಿ ದರವನ್ನು ತಕ್ಷಣ 18% ಗೆ ಇಳಿಸುವುದು ಅಗತ್ಯ ಎಂದು ತನ್ವೀರ್ ಸೇಠ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.ಲಕ್ಷಾಂತರ ಬೀಡಿ ಕಾರ್ಮಿಕರ ಹಿತಕ್ಕಾಗಿ ಈ ಬಗ್ಗೆ ರಾಜ್ಯ ಸರಕಾರವು ಜಿಎಸ್‌ಟಿ ಕೌನ್ಸಿಲ್ ಮೂಲಕ ಈ ವಿಚಾರವನ್ನು ಕೇಂದ್ರ ಸರಕಾರದ ಗಮನಕ್ಕೆ ತಂದು, ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ತನ್ವೀರ್ ಸೇಠ್ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕೆಲರಾಯ್‌ ಸೈಂಟ್‌ ಆ್ಯನ್ಸ್ ಚರ್ಚ್ ನಲ್ಲಿ ‘ಕೊಂಕಣಿ ಸಂಭ್ರಮ್ 25’

ಮಂಗಳೂರು: ಮಂಗಳೂರಿನ ಕೆಲರಾಯ್‌ ಸೈಂಟ್‌ ಆ್ಯನ್ಸ್ ಚರ್ಚ್ ನಲ್ಲಿ ‘ಕೊಂಕಣಿ ಸಂಭ್ರಮ್ 25’ ಕಾರ್ಯಕ್ರಮ ಆಗಸ್ಟ್ 31 ರಂದು ಭಾನುವಾರ ನಡೆಯಿತು.ಕೆಲರಾಯ್‌ ಚರ್ಚ್ ನ ಧರ್ಮಗುರು ವಂದನೀಯ ಫಾ. ಸಿಲ್ವೆಸ್ಟರ್ ಡಿ’ಕೋಸ್ತಾ ಅವರು ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಕೊಂಕಣಿ ಭಾಷೆಯನ್ನು ಮನೆಯಲ್ಲಿ ಮಾತನಾಡುವ ಮೂಲಕ ಉಳಿಸಿ ಬೆಳೆಸ ಬೇಕು. ಮುಂದಿನ ಪೀಳಿಗೆಗೆ ಹಸ್ತಾಂತರಿಸ ಬೇಕು ಎಂದು ಕರೆ ನೀಡಿದರು.ಕೊಂಕಣಿ ಸಾಹಿತಿ ಹಾಗೂ ಶಿಕ್ಷಕ ಫ್ರಾನ್ಸಿಸ್‌ ಡಿ’ಕುನ್ಹಾ, ಫೋರ್‌ ವಿಂಡ್ಸ್‌ ನಿರ್ದೇಶಕ ಎಲಿಯಾಸ್ ಫೆರ್ನಾಂಡಿಸ್‌, ಕೆಲರಾಯ್‌ ಚರ್ಚ್ ನ ವಾಸ್ತವ್ಯ ಧರ್ಮಗುರು ವಂದನೀಯ ಫಾ. ರೋಶನ್ ಫೆರ್ನಾಂಡಿಸ್, ಚರ್ಚ್ ಉಪಾಧ್ಯಕ್ಷ ಸಂತೋಷ್‌ ಡಿ’ಕೋಸ್ತಾ, ಕಾರ್ಯದರ್ಶಿ ಸೆಲಿನ್ ಡಿ’ಮೆಲ್ಲೊ, ಫಾತಿಮಾ ಕಾನ್ವೆಂಟಿನ ಸುಪೀರಿಯರ್ ಭಗಿನಿ ಐರಿನ್‌ ರೊಡ್ರಿಗಸ್, ಆರೋಗ್ಯ ಮಾತಾ ಕಾನ್ವೆಂಟಿನ ಸುಪೀರಿಯರ್‌ ಭಗಿನಿ ಝೀಜಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸುಮಾರು 40 ಮಕ್ಕಳಿಂದ ಕೊಂಕಣಿಯ ವಿವಿಧ ಸಮುದಾಯಗಳ ವಸ್ತ್ರ ಧಾರಣೆ ಪ್ರದರ್ಶನ, 10 ಕುಟುಂಬಗಳಿಂದ ಕೊಂಕಣಿ ಪುಸ್ತಕ ಪ್ರದರ್ಶನ, ನಾಲ್ಕು ತಂಡಗಳಿಂದ ಕೊಂಕಣಿ ಸಮುದಾಯಗಳ ಜನರು ಮನೆಯಲ್ಲಿ ಬಳಸುವ ಹಳೆಯ ಸಾಧನಗಳ ಪ್ರದರ್ಶನ, 14 ತಂಡಗಳಿಂದ ಕೊಂಕಣಿ ಗೀತೆಗಳ ಗಾಯನ, 9 ತಂಡಗಳಿಂದ ಕೊಂಕಣಿ ನೃತ್ಯ ಪ್ರದರ್ಶನ ನಡೆಯಿತು. ಕೊನೆಯಲ್ಲಿ ಸಾಂಪ್ರದಾಯಿಕ ಭೋಜನದ ವ್ಯವಸ್ಥೆ ಇತ್ತು.

ಪ್ರಾದೇಶಿಕ ವಾರ್ತೆಗಳು

ಹಿರಿಯ ಪತ್ರಿಕಾ ವಿತರಕ ರಮೇಶ್ ಯಾದವ್ ಅವರಿಗೆ ಸನ್ಮಾನ

ಮಂಗಳೂರು, ಪತ್ರಿಕಾ ವಿತರಕರ ದಿನದ ಅಂಗವಾಗಿ ಹಿರಿಯ ಪತ್ರಿಕಾ ವಿತರಕರಾಗಿರುವ ಅತ್ತಾವರದ ರಮೇಶ್ ಯಾದವ್ ಅವರನ್ನು ಕಂಕನಾಡಿ ರೇಣುಕಾರಾಜ್ ನ್ಯೂಸ್ ಏಜನ್ಸಿ ಅವರ ವತಿಯಿಂದ ಸನ್ಮಾನಿಸಲಾಯಿತು.ಕಳೆದ 62 ವರ್ಷಗಳಿಂದ ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತಿದ್ದು, ಎಲ್ಲಾ ಪತ್ರಿಕೆ ಮಾಲೀಕರು ನೀಡಿದ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದರು.ಮಹಾರಾಷ್ಟ್ರಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಶುಭ ಹಾರೈಸಿದರು. ಪತ್ರಿಕಾ ವಿತರಕರೇ ಪತ್ರಿಕೆಯ ಜೀವಾಳವಾಗಿದ್ದಾರೆ. ಅತೀ ಶೀಘ್ರವೇ ರಮೇಶ್ ಯಾದವ್ ಅವರಿಗೆ ದ್ವಿಚಕ್ರ ವಾಹನ ಕೊಡಿಸುವುದಾಗಿ ಭರವಸೆ ನೀಡಿದರು.ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರ ಶ್ರೀನಿವಾಸ್ ನಾಯಕ್ ಇಂದಾಜೆ, ರೇಣುಕಾರಾಜ್ ನ್ಯೂಸ್ ಏಜನ್ಸಿ ಮಾಲೀಕ ನಾಗರಾಜ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ (ರಿ.) ಇದರ ಅಧ್ಯಕ್ಷರಾಗಿ ಅಝೀಝ್ ಪರ್ತಿಪಾಡಿ ಅವಿರೋಧ ಆಯ್ಕೆ

ಮಂಗಳೂರಿನ ಹಂಪನ್ ಕಟ್ಟೆಯಲ್ಲಿರುವ “ಮಿಲಾಗ್ರಿಸ್ ಸೆನೆಟ್ ಹಾಲ್” ಸಭಾಂಗಣದಲ್ಲಿ ದ.ಕ. ಬಸ್ಸು ಮಾಲಕರ ಸಂಘದ ವಾರ್ಷಿಕ ಮಹಾಸಭೆಯು ನಡೆಯಿತು. ಈ ಸಭೆಯಲ್ಲಿ ದ. ಕ. ಬಸ್ಸು ಮಾಲಕರ ಸಂಘದ ಅಧ್ಯಕ್ಷರಾಗಿ ಅಝೀಝ್ ಪರ್ತಿಪಾಡಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇವರು ಸತತ ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ದ. ಕ. ಬಸ್ಸು ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ, ಅಧ್ಯಕ್ಷರಾಗಿಯೂ ಹಾಗೂ ಪೂರ್ವ ವಲಯ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಬಿ.ದಾಮೋದರ ನಿಸರ್ಗ ಸಂಸ್ಮರಣೆ – ಪುನರೂರು ಅವರಿಗೆ ಪ್ರಶಸ್ತಿ. ತುಳು ಭಾಷೆ – ಸಂಸ್ಕೃತಿಯ ನೈಜ ಹೋರಾಟಗಾರ ನಿಸರ್ಗ: ಭಾಸ್ಕರ ರೈ ಕುಕ್ಕುವಳ್ಳಿ

ಮಂಗಳೂರು: ‘ತುಳುನಾಡು, ನುಡಿ ಮತ್ತು ಸಂಪ್ರದಾಯಗಳ ರಕ್ಷಣೆಗಾಗಿ ಪಣತೊಟ್ಟು ಹೋರಾಡಿದ ಅನೇಕ ವ್ಯಕ್ತಿಗಳು ಮತ್ತು ಸಂಘಟನೆಗಳು ನಮ್ಮಲ್ಲಿವೆ. ತುಳು ಚಳುವಳಿಯ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ ಹಿರಿಯರೆಲ್ಲ ಗತಿಸಿ ಹೋಗಿದ್ದಾರೆ. ಯಾವುದಕ್ಕೂ ಒಂದು ತಾರ್ಕಿಕ ಅಂತ್ಯ ಈ ವರೆಗೆ ಲಭಿಸಿಲ್ಲವಾದರೂ ತುಳು ಭಾಷೆ ಮತ್ತು ಸಂಸ್ಕೃತಿಯ ಪ್ರಸರಣಕ್ಕೆ ಪ್ರಾಮಾಣಿಕವಾಗಿ ದುಡಿದವರು ಸದಾ ಸ್ಮರಣೀಯರು. ಅಂಥವರಲ್ಲಿ ಮೂರು ದಶಕಗಳಷ್ಟು ಕಾಲ ಕುಡ್ಲ ತುಳುಕೂಟದ ಚುಕ್ಕಾಣಿ ಹಿಡಿದು ಹಲವಂಗಗಳಲ್ಲಿ ಕೆಲಸ ಮಾಡಿದ ದಾಮೋದರ ನಿಸರ್ಗರು ತುಳು ಭಾಷೆ ಮತ್ತು ಸಂಸ್ಕೃತಿಯ ನೈಜ ಹೋರಾಟಗಾರರು’ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಬಿ.ದಾಮೋದರ ನಿಸರ್ಗ ಸಂಸ್ಮರಣ ಸಮಿತಿ ವತಿಯಿಂದ ಅಗೊಸ್ತು 31ರಂದು ಭಾನುವಾರ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಜರಗಿದದ್ವಿತೀಯ ಸಂಸ್ಮರಣ ಸಮಾರಂಭದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು. ‘ಸುದೀರ್ಘಕಾಲ ಗೋಕರ್ಣನಾಥ ಬ್ಯಾಂಕ್ ಅಧ್ಯಕ್ಷರಾಗಿ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಮತ್ತು ಕಂಕನಾಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಮೊಕ್ತೇಸರರಾಗಿ, ಬೋಳೂರು ದೋಗ್ರ ಪೂಜಾರಿ ಯಕ್ಷಗಾನ ಪ್ರಶಸ್ತಿಯ ಸಂಸ್ಥಾಪಕರಾಗಿ ದಾಮೋದರ ನಿಸರ್ಗರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಗಣನೀಯ’ ಎಂದವರು ಸ್ಮರಿಸಿದರು. ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ಅರುಣ್ ಕುಮಾರ್ ಐತಾಳ್ ಸಂಸ್ಮರಣಾ ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.ಪ್ರಶಸ್ತಿ ಪ್ರದಾನ:ಸಮಾರಂಭದಲ್ಲಿ ದಿ.ನಿಸರ್ಗ ಅವರ ಪತ್ನಿ ಹೇಮಾ ದಾಮೋದರ ನಿಸರ್ಗ ಮತ್ತು ಮಕ್ಕಳು ಸ್ಥಾಪಿಸಿದ ಎರಡನೇ ವರ್ಷದ ‘ಬಿ.ದಾಮೋದರ ನಿಸರ್ಗ ಪ್ರಶಸ್ತಿ’ಯನ್ನು ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಕರ್ಮಯೋಗಿ ಡಾ.ಹರಿಕೃಷ್ಣ ಪುನರೂರು ಅವರಿಗೆ ಪ್ರದಾನ ಮಾಡಲಾಯಿತು. ಊರ್ಮಿಳಾ ರಮೇಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪುನರೂರು ಅವರು ‘ಪ್ರತ್ಯೇಕ ತುಳುರಾಜ್ಯ ಸ್ಥಾಪನೆ ಆಗುವಲ್ಲಿ ವರೆಗೆ ತುಳು ಭಾಷೆಗೆ ನ್ಯಾಯ ದೊರೆಯುವ ಸಾಧ್ಯತೆ ಕಡಿಮೆ. ಅದಕ್ಕಾಗಿ ಸಂಘಟಿತ ಪ್ರಯತ್ನ ಅಗತ್ಯ’ ಎಂದರು.’ ತುಳುಕೂಟ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಹರಿಕಥಾ ಪರಿಷತ್ ಅಧ್ಯಕ್ಷ ನ್ಯಾಯವಾದಿ ಮಹಾಬಲ ಶೆಟ್ಟಿ ಕೂಡ್ಲು , ಲೇಖಕ ಡಾ.ವಸಂತ ಕುಮಾರ್ ಪೆರ್ಲ ಅತಿಥಿಗಳಾಗಿದ್ದರು.ಮಂಗಳೂರು ತುಳುಕುಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವಿ ಅಲೆವೂರಾಯ ವರ್ಕಾಡಿ ಕಾರ್ಯಕ್ರಮ ನಿರೂಪಿಸಿ, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಡಾ. ವಿನ್ಯಾಸ್ ನಿಸರ್ಗ ಪ್ರಶಸ್ತಿ ಪತ್ರ ವಾಚಿಸಿದರು. ನಾಗೇಶ್ ದೇವಾಡಿಗ ಕದ್ರಿ ಪ್ರಾರ್ಥಿಸಿದರು. ಸಂಸ್ಮರಣಾ ಸಮಿತಿ ಪ್ರಮುಖರಾದ ಡಾ.ವಿನಯ್ ಜತ್ತನ್ನ, ತ್ರಿದೇವ್ ನಿಸರ್ಗ ಮತ್ತು ಡಾ.ಮೇಘ ತ್ರಿದೇವ್ ನಿಸರ್ಗ ಅತಿಥಿಗಳನ್ನು ಗೌರವಿಸಿದರು. ನಾರಾಯಣ ಬಿ.ಡಿ. ವಂದಿಸಿದರು.ತುಳು ಯಕ್ಷಗಾನ:ಕಾರ್ಯಕ್ರಮದ ಅಂಗವಾಗಿ ಸರಯೂ ಯಕ್ಷ ಬಳಗ ಕೋಡಿಕಲ್ ಅವರಿಂದ ‘ಕೋಟಿ ಚೆನ್ನಯೆರ್’ ತುಳು ಯಕ್ಷಗಾನ ಬಯಲಾಟ ಜರಗಿತು. ಹವ್ಯಾಸಿಗಳೊಂದಿಗೆ ವೃತ್ತಿಪರ ಕಲಾವಿದರೂ ಹಿಮ್ಮೇಳ – ಮುಮ್ಮೇಳಗಳಲ್ಲಿ ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಬರವಣಿಗೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿ-ಮೆಹಂದಳೆ

ಕರ್ನಾಟಕದ ಒಟ್ಟು ವ್ಯಾಪ್ತಿಯಲ್ಲಿ ವರ್ಷಕ್ಕೆ ಸುಮಾರು ಆರು ಸಾವಿರ ಸಾಹಿತ್ಯ ಕೃತಿಗಳು ಪ್ರಕಟವಾಗುತ್ತಿದ್ದರೂ ಇವುಗಳಲ್ಲಿ ಓದುಗರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುವಂತವುಗಳು ಕೇವಲ ಹತ್ತಾರು ಮಾತ್ರ, ಇಂತಹ ಸಂದರ್ಭದಲ್ಲಿ ಬರಹಗಾರರು ಗುಣ ಮಟ್ಟದ ಬರವಣಿಗೆ ಬಗ್ಗೆ ಹೆಚ್ಚು ಅದ್ಯತೆ ನೀಡಬೇಕಾಗಿ ಸಾಹಿತಿ ಸಂತೋಷಕುಮಾರ ಮೆಹಂದಳೆ ಅಭಿಪ್ರಾಯಪಟ್ಟರು. ಕಲ್ಲಚ್ಚು ಪ್ರಕಾಶನದ ಬೆಳ್ಳಿ ಹಬ್ಬ ರಜತ ರಂಗು ಪ್ರಯುಕ್ತ 16 ನೇ ಆವೃತ್ತಿಯ 2025ರ ಕಲ್ಲಚ್ಚು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಸೂಕ್ತ ಆನುಭವ ಮತ್ತು ಓದಿನ ಹಿನ್ನೆಲೆಯಿಲ್ಲದೆ, ಕೇವಲ ಗ್ರಂಥಾಲಯ ಸರಬರಾಜಿನ ಉದ್ದೇಶದಿಂದ ಮಾತ್ರ ಕೃತಿ ರಚನೆ ಉತ್ತಮವಲ್ಲ ಎಂದು ಅವರು ಸಂಧರ್ಭದಲ್ಲಿ ಹೇಳಿದರು. ವಿವಿಧ ಕ್ಷೇತ್ರಗಳ ಕರ್ನಾಟಕದ ಪಂಚ ಸಾಧಕರಾದ ಡಾ ಎಸ್ ಎಮ್ ಶಿವಪ್ರಕಾಶ್, ಡಾ ಪ್ರಕಾಶ ಕೇಶವ ನಾಡಿಗ್, ಜಬೀವುಲ್ಲಾ ಎಂ ಅಸದ್, ರೆಮೊನಾ ಎವೆಟ್ ಪೆರೇರಾ ಮತ್ತು ಗೋಕಾವಿ ಗೆಳೆಯರ ಬಳಗದ ಪರವಾಗಿ ಜಯಾನಂದ ಮಾದರ ಅವರಿಗೆ ಡಾ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಿದರು. ರಘು ಇಡ್ಕಿದು ಅಭಿನಂದನ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಕಲ್ಲಚ್ಚು ಪ್ರಕಾಶನ ಹೊರ ತಂದಿರುವ ಹಿರಿಯ ಲೇಖಕ ಕಡ್ಕೆ ರಾಮ ಅವಭೃತ ಅವರ ಪರ್ಯಟನಾನುಭವ ಕೃತಿ ಬಿಡುಗಡೆ ನಡೆಯಿತು. ಡಾ ಮೀನಾಕ್ಷಿ ರಾಮಚಂದ್ರ, ಡಾ ಶ್ರೀಧರ್ ಅವಭೃತ ಮತ್ತಿತರರು ಉಪಸ್ಥಿತರಿದ್ದರು. ಪ್ರಕಾಶನದ ವ್ಯವಸ್ಥಾಪಕ ಮುಖ್ಯಸ್ಥ ಸಾಹಿತಿ ಮಹೇಶ ಆರ್ ನಾಯಕ್ ಸ್ವಾಗತಿಸಿದರು. ಎನ್ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಯೂನಿಟಿ ಆಸ್ಪತ್ರೆಗೆ ಹೃದಯ ಹಾಗೂ ನ್ಯೂರೋವೆಸ್ಕುಲಾರ್ ಆರೈಕೆಗಾಗಿ ಅತೀ ನವೀನ ಫಿಲಿಪ್ಸ್ ಅಜುರಿಯನ್ ಕ್ಯಾಥ್ಲ್ಯಾಬ್ ಪರಿಚಯ

ಮಂಗಳೂರು, ಸೆಪ್ಟೆಂಬರ್ 1: ಹೈಲ್ಯಾಂಡ್, ಫಳ್ನಿರ್ ರಸ್ತೆಯಲ್ಲಿರುವ ಯೂನಿಟಿ ಆಸ್ಪತ್ರೆ, ಹೃದಯ ಹಾಗೂ ನರವ್ಯವಸ್ಥಾ ಚಿಕಿತ್ಸೆಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಫಿಲಿಪ್ಸ್ ಅಜುರಿಯನ್ ಕ್ಯಾಥ್ಲ್ಯಾಬ್ – ಆವೃತ್ತಿ 3.0 ಅನ್ನು ಲೋಕಾರ್ಪಣೆಗೊಳಿಸಿದೆ.ಈ ಅತ್ಯಾಧುನಿಕ ಸೀಲಿಂಗ್-ಮೌಂಟೆಡ್ ಕ್ಯಾಥ್ಲ್ಯಾಬ್ ಕರಾವಳಿ ಕರ್ನಾಟಕದಲ್ಲಿ ಪ್ರಪ್ರಥಮವಾಗಿದ್ದು ಹೃದಯ, ನರವ್ಯವಸ್ಥೆ ಹಾಗೂ ಇಂಟರ್ವೆನ್ಶನಲ್ ರೇಡಿಯಾಲಜಿ ಚಿಕಿತ್ಸೆಗಳಿಗಾಗಿ ಜಾಗತಿಕ ಮಟ್ಟದ ನಿಖರತೆ ಹಾಗೂ ನವೀನತೆಯನ್ನು ಒದಗಿಸುತ್ತದೆ. ಇದು ರೋಗಿಗಳಿಗೆ ಉತ್ತಮ ಚಿಕಿತ್ಸಾ ಫಲಿತಾಂಶಗಳನ್ನು ನೀಡಲು, ಪ್ರಕ್ರಿಯೆಯ ಸಮಯವನ್ನು ಕಡಿಮೆ ಮಾಡಲು ಹಾಗೂ ಸುರಕ್ಷತೆ ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಫಿಲಿಪ್ಸ್ ಅಜುರಿಯನ್ ವ್ಯವಸ್ಥೆ ಕಡಿಮೆ ಆಕ್ರಮಣಕಾರಿಯಾದ ಚಿಕಿತ್ಸೆಗಳಲ್ಲಿ ಒಂದು ಮಹತ್ತರವಾದ ಮೆಟ್ಟಿಲಾಗಿದೆ. ಮುಖ್ಯ ಲಕ್ಷಣಗಳು ಮತ್ತು ಲಾಭಗಳು:*ಆಧುನಿಕ ಚಿತ್ರಣ ಶಕ್ತಿ ಮತ್ತು ನಿಖರತೆ: ಸಂಕುಲ ಹೃದಯ ಹಾಗೂ ನರವ್ಯವಸ್ಥಾ ಚಿಕಿತ್ಸೆಗಳ ಸಮಯದಲ್ಲಿ ಅತ್ಯುತ್ತಮ ಚಿತ್ರ ಗುಣಮಟ್ಟವನ್ನು ಒದಗಿಸಿ, ನಿಖರತೆ ಹೆಚ್ಚಿಸುತ್ತದೆ.*ರೇಡಿಯೇಶನ್ ಸುರಕ್ಷತೆ: ಪಾರಂಪರಿಕ ಕ್ಯಾಥ್ಲ್ಯಾಬ್ಗಳಿಗಿಂತ ಸುಮಾರು 30% ವಿಕಿರಣ ಹಾಗೂ ಕಾಂಟ್ರಾಸ್ಟ್ ಮಾಧ್ಯಮ ಬಳಕೆಯನ್ನು ಕಡಿಮೆ ಮಾಡುತ್ತದೆ—ಇದರಿಂದ ರೋಗಿಗಳ ಹಾಗೂ ವೈದ್ಯರ ಸುರಕ್ಷತೆ ಹೆಚ್ಚಾಗುತ್ತದೆ.*ಡೈನಾಮಿಕ್ ಕೊರೊನರಿ ರೋಡ್ಮ್ಯಾಪ್ (DCR): ನಿಖರವಾದ ನೈಜ ಸಮಯದ ದೃಶ್ಯ ಮಾರ್ಗದರ್ಶನ ಒದಗಿಸಿ, ಸ್ಟೆಂಟ್ ಅನ್ನು ವೇಗವಾಗಿ ಹಾಗೂ ನಿಖರವಾಗಿ ಸ್ಥಾಪಿಸಲು ಸಹಾಯ ಮಾಡುತ್ತದೆ; ಇದರಿಂದ ಚಿಕಿತ್ಸಾ ಸಮಯ ಕಡಿಮೆಯಾಗುತ್ತದೆ.*ಜಾಗತಿಕ ಕೊರೊನರಿ ಮಾರ್ಗದರ್ಶಕ ಸಾಧನಗಳು : ಸ್ಟೆಂಟ್ ಬೂಸ್ಟ್ ಲೈವ್ ಮತ್ತು ಡಿಸಿಆರ್ ಲೈವ್ ಗೈಡನ್ಸ್ ಒಳಗೊಂಡಿದ್ದು, ಪ್ರಕ್ರಿಯೆಗಳನ್ನು ಇನ್ನಷ್ಟು ಸುರಕ್ಷಿತ ಮತ್ತು ನಿಖರವಾಗಿಸುತ್ತದೆ.*ಭವಿಷ್ಯೋತ್ಪನ್ನ ಮೂಲಸೌಕರ್ಯ: ಸೀಲಿಂಗ್-ಮೌಂಟೆಡ್ ವಿನ್ಯಾಸವು ಹೆಚ್ಚು ಸುಗಮ ಮತ್ತು ಬದಲಾಯಿಸಬಹುದಾದ ಕೆಲಸದ ಸ್ಥಳವನ್ನು ಒದಗಿಸುತ್ತದೆ, ಇದು ಹೃದಯವೈದ್ಯಕೀಯ, ನರವೈದ್ಯಕೀಯ ಮತ್ತು ರೇಡಿಯಾಲಜಿ ಕ್ಷೇತ್ರದ ಸಂಕೀರ್ಣ ಚಿಕಿತ್ಸೆಗಳಿಗೆ ಸೂಕ್ತವಾಗಿದೆ.ಫಿಲಿಪ್ಸ್ ಅಜುರಿಯನ್ 3.0 ಪರಿಚಯದೊಂದಿಗೆ, ಯೂನಿಟಿ ಆಸ್ಪತ್ರೆ ಮಂಗಳೂರು ಮತ್ತು ಸುತ್ತಲಿನ ಜನತೆಗೆ ಜಾಗತಿಕ ಮಟ್ಟದ ಆರೋಗ್ಯ ಸೇವೆ ಒದಗಿಸುವ ತನ್ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದೆ.

ಪ್ರಾದೇಶಿಕ ವಾರ್ತೆಗಳು

ಮಾತಾ ಅಮೃತಾನಂದಮಯಿ ಮಠ, ಮಂಗಳೂರು: ಅಮೃತ ಕುಟುಂಬ ಹಾಗೂ ಅಮೃತ ಶ್ರೀ ಸ್ವಸಹಾಯ ಗುಂಪುಗಳ ಸಮಾವೇಶ “ಅಮೃತ ಶಕ್ತಿ ಸಂಗಮ”

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮಾತಾ ಅಮೃತಾನಂದಮಯಿ ಭಕ್ತರ ಅಮೃತ ಕುಟುಂಬ ಮತ್ತು ಸ್ವಸಹಾಯ ಗುಂಪುಗಳಾದ ಅಮೃತ ಶ್ರೀ ಸದಸ್ಯರುಗಳ ಸಮಾವೇಶ ” ಅಮೃತ ಶಕ್ತಿ ಸಂಗಮ” ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ‌ ಭಾನುವಾರ ನೆರವೇರಿತು. ಕರಾವಳಿ ಜಿಲ್ಲೆಗಳಲ್ಲಿ ಸೇವಾ ನಿರತರಾದ ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿದ್ದರು. ಭಕ್ತಿಪ್ರದ ಸಾಂಸ್ಕೃತಿಕ ಕಾರ್ಯಕ್ರಮ ಅಮ್ಮನ ಜೀವನ ಚರಿತ್ರೆಯನ್ನಾಧರಿಸಿದ ಹರಿಕಥೆಯೊಂದಿಗೆ ಆರಂಭವಾಯಿತು.ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣರವರು ದೀಪ ಬೆಳಗಿಸಿ ಚಾಲನೆ ನೀಡಿದರು.ಶ್ರೀ ಗಣೇಶ್ ಎರ್ಮಾಳ್ ಮುಂಬಯಿ ಇವರು ಹರಿನಾಮ ಸಂಕೀರ್ತನೆಯೊಂದಿಗೆ ಅಮ್ಮನ ಅವತರಣದ ಮಹಾತ್ಮೆಗಳನ್ನು ಹಾಡಿಕೊಂಡಾಡಿದರು.ಅಮ್ಮನ ಭಕ್ತರು ಕಳೆದ 25 ವರ್ಷಗಳಲ್ಲಿ ಅಮ್ಮನ ಸಂಪರ್ಕ ಪಡೆದು ಅನುಭವಿಸಿದ ಅವಿಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು.ವಿವಿಧ ಅಮೃತ ಕುಟುಂಬದ ಸದಸ್ಯರಾದ ಮಾಲತಿ ಪುಂಡಲೀಕ ಬಂಗೇರ ಬೀಜಾಡಿ,, ಶುಭ ಭಂಡಾರ್ಕಾರ್ ಪೆರ್ಡೂರು,ರವಿರಾಜ್ ಶೆಟ್ಟಿ ಕಡಬ,ನಳಿನಿ ಶೇಖರ್ ಕಡೇಕಾರ್,ವತ್ಸಲ ಪೂಜಾರಿ ಮಂಗಳೂರು,ಜಯಂತಿ ಕುಂದಾಪುರ ,ವೇದ ಶಿವರಾಮ್ ಏನೆಕಲ್ ರವರು ಅಮೃತ ಕುಟುಂಬ ಹಾಗೂ ಸ್ವಸಹಾಯ ಗುಂಪುಗಳ ಸೇವಾ ಸಾಧನೆ ಹಾಗೂ ಅಮ್ಮನ ಅನುಗ್ರಹದಿಂದ ಪ್ರತ್ಯಕ್ಷವಾಗಿ ಅನುಭವಿಸಿದ ರೋಮಾಂಚಕಾರಿ ಅನುಭವಗಳನ್ನು ಹಂಚಿಕೊಂಡರು.ಅಮೃತ ಕುಟುಂಬ ಮತ್ತು ಅಮೃತ ಶ್ರೀ ಅಧ್ಯಕ್ಷರಾದ ಶ್ರೀ ಕೃಷ್ಣ ಶೆಟ್ಟಿಯವರು ಮಾತನಾಡಿ ಅಮೃತ ಶಕ್ತಿ ಸಂಗಮದ ಉದ್ದೇಶ ಮತ್ತು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಆಶೀರ್ವಚನವಿತ್ತು ನುಡಿದ ಸ್ವಾಮಿನಿ ಮಂಗಳಾಮೃತ ಪ್ರಾಣರವರು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಇಲ್ಲಿನ ಸೇವಾಮನೋಭಾವದ ಭಕ್ತರ ಬಗ್ಗೆ ಒಲವು ಹೊಂದಿದ್ದು ಇಲ್ಲಿನ ಭಕ್ತರು ಕೂಡಾ ಅಮ್ಮನ ಆಗಮನಕ್ಕೆ ಕಾತರದಿಂದ ಕಾಯುತ್ತಿದ್ದಾರೆ ಎಂದರು.ಅಮೃತ ಶ್ರೀ ಸ್ವಸಹಾಯ ಗುಂಪುಗಳು ತಮ್ಮ ಕಾರ್ಯ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವಂತೆ ಕರೆಯಿತ್ತರು.ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮಿನ್ ಮತ್ತು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಅಮೃತ ಕುಟುಂಬದ ಹಿರಿಯ ಸದಸ್ಯರಾದ ಭೋಜರಾಜ್ ಕರ್ಕೇರ ದಂಪತಿಗಳು ಶ್ರೀ ಗುರುಪಾದುಕಾ ಪೂಜೆ ಮಾಡಿದರು, ಭಜನಾ ಕಾರ್ಯಕ್ರಮದ ನಂತರ ಪ್ರಸಾದ ವಿತರಣೆ ಮಾಡಲಾಯಿತು.

Scroll to Top