Author name: editor

ಪ್ರಾದೇಶಿಕ ವಾರ್ತೆಗಳು

ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಿಶ್ವ ಪರಿಸರ ದಿನಾಚರಣೆ

ಬಿಕರ್ನಕಟ್ಟೆ, ಜನವರಿ 7, 2026: ಬಾಲ ಯೇಸುವಿನ ವಾರ್ಷಿಕ ಮಹೋತ್ಸವದ ಸಿದ್ಧತೆಯ ನೋವೆನಾದ ಮೂರನೇ ದಿನದಂದು, ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಿಶ್ವ ಪರಿಸರ ದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ದಿನವನ್ನು ಭಕ್ತಿ ಮತ್ತು ಆಧ್ಯಾತ್ಮಿಕ ಉತ್ಸಾಹದೊಂದಿಗೆ ಆಚರಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಪ್ರಾರ್ಥನೆ ಮತ್ತು ಚಿಂತನೆಯಲ್ಲಿ ಪಾಲ್ಗೊಂಡಿದ್ದರು. “ನಿನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಅನುಸರಿಸು” ಎಂಬುದು ಈ ದಿನದ ಶೀರ್ಷಿಕೆಯಾಗಿದ್ದು, ಭಕ್ತಾದಿಗಳು ಕ್ರಿಸ್ತನನ್ನು ಅನುಸರಿಸುವಲ್ಲಿ ಎದುರಾಗುವ ಸವಾಲುಗಳು ಮತ್ತು ಅಡೆತಡೆಗಳನ್ನು ನಂಬಿಕೆ ಹಾಗೂ ತಾಳ್ಮೆಯಿಂದ ಸ್ವೀಕರಿಸುವ ಸತ್ಯ ಶಿಷ್ಯತ್ವದ ಬಗ್ಗೆ ಪ್ರತಿಬಿಂಬಿಸಲು ಆಹ್ವಾನ ನೀಡಲಾಯಿತು. ಆರೋಗ್ಯಕರ ಪರಿಸರ ಮತ್ತು ಪ್ರಕೃತಿಯ ಸೌಂದರ್ಯವೆಂಬ ದೇವರ ಕೊಡುಗೆಗಾಗಿ ಕೃತಜ್ಞತಾ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು, ಜೊತೆಗೆ ಅದರ ರಕ್ಷಣೆ ಮತ್ತು ಸಂರಕ್ಷಣೆಗಾಗಿ ವಿಶೇಷ ಬಿನ್ನಹಗಳನ್ನು ಅರ್ಪಿಸಲಾಯಿತು.ದಿನದ ಕಾರ್ಯಕ್ರಮಗಳು ಬೆಳಿಗ್ಗೆ 6:00 ಗಂಟೆಗೆ ಉಡುಪಿ ಧರ್ಮಪ್ರಾಂತ್ಯದ ಪತ್ರಿಕೆ ‘ಉಜ್ವಾಡ್’ನ ಸಂಪಾದಕರಾದ ವಂ| ಆಲ್ವಿನ್ ಸಿಕ್ವೇರಾ, ಒಸಿಡಿ ಇವರಿಂದ ಬಲಿಪೂಜೆಯೊಂದಿಗೆ ಪ್ರಾರಂಭವಾಯಿತು. ಬೆಳಿಗ್ಗೆ 7:30ರ ಪ್ರಾರ್ಥನಾ ವಿಧಿಯನ್ನು ರಾಮನಗರ-ಲೋಂಡಾದ ವಂ| ಮೋವಿನ್ ಪಿರೇರಾ ನೆರವೇರಿಸಿದರು. ನಂತರ 9:00 ಗಂಟೆಯ ಬಲಿಪೂಜೆಯನ್ನು ಫಾರ್ಲಾ ಚರ್ಚಿನ ಧರ್ಮಗುರುಗಳಾದ ವಂ| ಅರುಣ್ ಮಾರ್ಕ್ ಅವರು ಅರ್ಪಿಸಿದರು. ಬೆಳಿಗ್ಗೆ 10:30ರ ಪ್ರಮುಖ ಬಲಿಪೂಜೆಯನ್ನು ಮೂಡುಬೆಳ್ಳೆಯ ದಿವ್ಯಧಾಮ್ ಸೆಮಿನರಿಯ ಅಧ್ಯಾತ್ಮ ನಿರ್ದೇಶಕರಾದ ವಂ| ಬೊನಿಫಾಸ್ ಪಿಂಟೊ ಅವರು ನೆರವೇರಿಸಿ, ಆರಾಧನೆ ಮತ್ತು ಪ್ರಾರ್ಥನೆಯನ್ನು ಮುನ್ನಡೆಸಿದರು. ಸಂಜೆ 5:00 ಗಂಟೆಗೆ ಇಂಗ್ಲಿಷ್ ಭಾಷೆಯ ಬಲಿಪೂಜೆಯನ್ನು ಸೈಂಟ್ ಅಲೋಶಿಯಸ್ ಕಾಲೇಜಿನ ರೆಕ್ಟರ್ ವಂ| ಮೆಲ್ವಿನ್ ಪಿಂಟೊ ನೆರವೇರಿಸಿದರು. ಸಂಜೆ 6:00 ಗಂಟೆಯ ಬಲಿಪೂಜೆಯನ್ನು ‘ನಮನ್ ಬಾಳೊಕ್ ಜೆಜು’ ಪತ್ರಿಕೆಯ ಮಾಜಿ ಸಂಪಾದಕರಾದ ವಂ| ಜೋಸಿ ಸಿದ್ದಕಟ್ಟೆ ಅರ್ಪಿಸಿದರು. ದಿನದ ಕೊನೆಯ ಬಲಿಪೂಜೆಯನ್ನು ರಾತ್ರಿ 7:45ಕ್ಕೆ ಕನ್ನಡ ಭಾಷೆಯಲ್ಲಿ ಬೇಲೂರು ಸೈಂಟ್ ಮೈಕಲ್ ಚರ್ಚ್‌ನ ಧರ್ಮಗುರುಗಳಾದ ವಂ| ಪ್ರಸನ್ನ ಕುಮಾರ್, ಒಸಿಡಿ ನೆರವೇರಿಸಿದರು.ಪುಣ್ಯಕ್ಷೇತ್ರದ ಸಾಮಾಜಿಕ ಸೇವೆಯ ಭಾಗವಾಗಿ ಅಂದು ಉಚಿತ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಬಾಲ ಯೇಸುವಿನ ಪುಣ್ಯಕ್ಷೇತ್ರ, ಕಾರ್ಮೆಲ್ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆ ಮತ್ತು ವಿಷನ್ ವರ್ಲ್ಡ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕ ಸ್ಥಳೀಯರು ಉಚಿತ ಕಣ್ಣಿನ ತಪಾಸಣೆಯ ಪ್ರಯೋಜನ ಪಡೆದರು. ದೃಷ್ಟಿ ದೋಷವಿರುವವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು.ದಿನದ ಕೊನೆಯಲ್ಲಿ ಸಂಜೆ 6:00 ಗಂಟೆಯ ಬಲಿಪೂಜೆಯ ನಂತರ ಬಾಲ ಯೇಸುವಿನ ರೋಸರಿ ಪ್ರಾರ್ಥನೆಯನ್ನು ಭಕ್ತಿಯಿಂದ ಸಲ್ಲಿಸಲಾಯಿತು. ಭಕ್ತಾದಿಗಳು ಒಟ್ಟಾಗಿ ಸೇರಿ ರೋಸರಿಯ ರಹಸ್ಯಗಳನ್ನು ಧ್ಯಾನಿಸುತ್ತಾ, ತಮ್ಮ ವೈಯಕ್ತಿಕ ಉದ್ದೇಶಗಳಿಗಾಗಿ ಮತ್ತು ಕುಟುಂಬಗಳ ಕಲ್ಯಾಣಕ್ಕಾಗಿ ಬಾಲ ಯೇಸುವಿನ ಮಧ್ಯಸ್ಥಿಕೆಯನ್ನು ಕೋರಿದರು.ನೋವೆನಾದ ಈ ಮೂರನೇ ದಿನವು ಭಕ್ತಾದಿಗಳ ಮೇಲೆ ಆಳವಾದ ಆಧ್ಯಾತ್ಮಿಕ ಪ್ರಭಾವವನ್ನು ಬೀರಿದೆ. ಜೀವನದ ಸವಾಲುಗಳನ್ನು ನಂಬಿಕೆ ಮತ್ತು ಭರವಸೆಯಿಂದ ಎದುರಿಸಲು ಪ್ರೇರೇಪಿಸುವುದರ ಜೊತೆಗೆ, ದೇವರ ಸೃಷ್ಟಿಯನ್ನು ಕಾಳಜಿಯಿಂದ ನೋಡಿಕೊಳ್ಳುವ ಬದ್ಧತೆಯನ್ನು ಇದು ನವೀಕರಿಸಿದೆ.

ಪ್ರಾದೇಶಿಕ ವಾರ್ತೆಗಳು

ಕೊರಗಜ್ಜ ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ: ದೈವದ ಬಗ್ಗೆ ರೀಲ್ಸ್ ಅಲ್ಲ -ಸುಧೀರ್ ಅತ್ತಾವರ್

ಮಂಗಳೂರು: ಹೊಸವರ್ಷದ ಶುಭಾರಂಭದಂದು ‘ಸಾಂಗ್ಸ್ ಪ್ರೀಮಿಯರ್’ ಎನ್ನುವ ವರ್ಣರಂಜಿತ ಕಾರ್ಯಕ್ರಮದಲ್ಲಿ ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ “ಕೊರಗಜ್ಜ” ಚಿತ್ರದ ಎಲ್ಲಾ ಹಾಡುಗಳನ್ನು ನಮ್ಮ ಚಿತ್ರತಂಡ ಸುಮಾರು ಮುನ್ನೂರಕ್ಕೂ ಹೆಚ್ಚು ಆಡಿಯೋ ಪ್ಲಾಟ್ ಫಾರ್ಮ್ ಗಳಲ್ಲಿ ಝೀ ಮ್ಯೂಜಿಕ್ ಮುಖೇನ ಹರಿಯಬಿಟ್ಟಿತ್ತು. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಹಾಲಿಡೇ ಇನ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾವು ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆಯನ್ನು ಘೋಷಿಸಿದ್ದೆವೆಯೇ ಹೊರತು, ತ್ರಿವಿಕ್ರಮ ಸಪಲ್ಯ ನಿರ್ಮಾಣ ದಲ್ಲಿರುವ “ಕೊರಗಜ್ಜ” ಚಿತ್ರದ ದೈವದ ಬಗ್ಗೆ ರೀಲ್ಸ್ ಮಾಡಿ ಎಂದು ಹೇಳಿಲ್ಲ. ನಮ್ಮ ಮಾತನ್ನು ಕರ್ನಾಟಕದ ಕೆಲ ಭಾಗಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಿನಿಮಾದ ನಿರ್ದೇಶಕ ಸುಧೀರ್ ಅತ್ತಾವರ ತಿಳಿಸಿದ್ದಾರೆ.ರೀಲ್ಸ್ ಎಂದರೆ ವೀಡಿಯೋ ತುಣುಕುಗಳು. ಈಗಾಗಲೇ ದೈವಗಳ ಬಗ್ಗೆ ಮತ್ತು ದೈವದ ಆರಾಧನಾ ಕ್ರಮಗಳಾದ ಕೋಲ, ನೇಮ, ತಂಬಿಲ, ಅಗೆಲು…ಹೀಗೆ ದೈವದ ವಿಚಾರವಾಗಿ ಸಹಸ್ರಾರು ರೀಲ್ಸ್ ಗಳು ಸೋಷಿಯಲ್ ಮೇಡಿಯಾಗಳಲ್ಲಿ ಹರಿದಾಡುತ್ತಿದೆ. ಹಾಗಿರುವಾಗ ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ ಏರ್ಪಡಿಸಿದರೆ ತಪ್ಪೇನು? ಈದಾಗ್ಯೂ ಅಶ್ಲೀಲ, ಅಸಂಬದ್ದ ಮತ್ತು ಅಪಹಾಸ್ಯ ಮಾಡುವ ರೀತಿಯ ರೀಲ್ಸ್ ಗಳ ವಿರುದ್ಧ ಕಾನೂನು ಕ್ರಮ ಎದುರಿಸಬೇಕಾದೀತು ಎನ್ನುವ ಎಚ್ಚರಿಕೆಯನ್ನು ನಾವೀಗಾಗಲೇ ಕೊಟ್ಟಿದ್ದೇವೆ ಎಂದು ಸುಧೀರ್ ಅತ್ತಾವರ ತಿಳಿಸಿದ್ದಾರೆ. ನಾವು ಕಳಸ ದಲ್ಲಿ ಶೂಟಿಂಗ್ ಮಾಡಿದಾಗ, ದೈವ ನರ್ತಕರೇ ಲಾಂಗು- ಮಚ್ಚು ತಂದು ಬೆದರಿಸಿ, ಶೂಟಿಂಗ್ ನಿಲ್ಲಿಸಿ, ಇಲ್ಲದ ರಗಳೆ ಮಾಡಿ ಲಕ್ಷಾಂತರ ರುಪಾಯಿ ನಷ್ಟ ಮಾಡಿದ್ದರು. ಪ್ರತೀ ಬಾರಿ “ಕತ್ತಲೆ” ಯ ಹೆಸರನ್ನು ಹೇಳಿ ಬೆದರಿಸುತ್ತಿದ್ದರು.ಮೂರು ಭಾರಿ ರೌಡಿಗಳ ಧಾಳಿ ಆದಾಗೆಲ್ಲ ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿಯ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.ಈಗ ನಮ್ಮ ಹಾಡನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಡುಗಳಿಗೆ ರೀಲ್ಸ್ ಮಾಡುವ ಸ್ಪರ್ಧೆಗೆ ಆಕ್ಷೇಪಣೆ ಒಡ್ಡುತ್ತಿದ್ದಾರೆ. ನಮ್ಮ ಸಿನಿಮಾಗೆ ಪ್ರತೀ ಹಂತದಲ್ಲೂ ತೊಂದರೆ ಕೊಡುವುದು, ಆಕ್ಷೇಪಣೆ ಮಾಡುವುದು, ವಿರೋಧಿಸುವುದು ಹೀಗೆ ನಡೆಯುತ್ತಲೇ ಬಂದಿದೆ.ಆದರೆ ಕೊರಗಜ್ಜ ದೈವಾಶಿರ್ವಾದದಿಂದಲೇ ಇಂತಹ ಹಲವಾರು ಅಗ್ನಿ ಪರೀಕ್ಷೆಗಳನ್ನು ಧಾಟಿ ಈಗ ಚಿತ್ರ ಬಿಡುಗಡೆ ಮಾಡುವ ಹಂತಕ್ಕೆ ಬಂದಿದ್ದೇವೆ ಎಂದು ಸುಧೀರ್ ತಿಳಿಸಿದ್ದಾರೆ.ತುಳುನಾಡಿನ ಕೆಲಭಾಗಗಳಲ್ಲಿ ಕೊರಗಜ್ಜ ಮತ್ತು ಇನ್ನಿತರ ದೈವಗಳ ಕೋಲದ ಸಮಯದಲ್ಲಿ, ದೈವದ ಪಾತ್ರ ಮಾಡುವ ವ್ಯಕ್ತಿಯ ಬಾಯಿಯಿಂದಲೇ ಅವಾಚ್ಯ, ಅಶ್ಲೀಲ ಪದಗಳನ್ನು ಹೇಳಿಸುವುದು ವಾಡಿಕೆ ಇದೆ. ಸಭ್ಯರ, ಸಣ್ಣ ಮಕ್ಕಳ ಮುಂದೆಯೇ ಕೋಲ ಸೇವೆಯ ಸಮಯದಲ್ಲಿ ಕೇಳಲು ಹೇಸಿಗೆ ಎನಿಸುವ ಅಶ್ಲೀಲ ಪದಗಳನ್ನು ವಾಡಿಕೆ ಅಥವ ಪಾರಂಪರಿಕೆ ಎನ್ನುವ ಕಾರಣದಿಂದ ಹೇಳುತ್ತಾ ಬಂದಿದ್ದಾರೆ. ಅಂತಹ ಪದ್ಧತಿಗಳ ಅಶ್ಲೀಲತೆಯನ್ನು, ಸಂಸ್ಕ್ರತಿಯ ನೆಪದಲ್ಲಿ ಕೀಳು ಪದಗಳನ್ನು ಕೋಲಸೇವೆಯ ವೇಳೆ ದೈವದ ಹೆಸರಿನಲ್ಲಿ ಹೇಳುವುದನ್ನು ನಾಗರಿಕ ಸಮಾಜ ಒಪ್ಪಬೇಕೇ ಎಂದವರು ಪ್ರಶ್ನಿಸಿದ್ದಾರೆ.ಪರಂಪರೆಯ ಹೆಸರಿನಲ್ಲಿ‌ ದೈವಗಳಿಗೆ ಅವಹೇಳನಕಾರಿ ಅಥವ ಆಶ್ಲೀಲ ಪದ ಪ್ರಯೋಗಗಳ ಮುಖೇನ ಕೋಲಸೇವೆಯ ಕೈಂಕರ್ಯ ನಡೆಸುವುದು ಒಳ್ಳೆ ಸಂಸ್ಕ್ರತಿಯೇ?ಕೆಲಭಾಗಗಳ ಕೋಲದ ಸಮಯದಲ್ಲಿ ದೈವದ ವೇಷ ಹಾಕಿಕೊಂಡವರು ಜಾತಿಯ ಆಧಾರದಲ್ಲಿ‌ ಗೌರವ ಕೊಡುವಂತಹ ಪರಿಪಾಠ ನಾಗರಿಕ ಸಮಾಜ ಒಪ್ಪುವಂತಹ ಆಚರಣೆಯೇ?ಇದೆಲ್ಲ ಹಿಂದಿನಿಂದ ನಡೆದುಕೊಂಡು ಬಂದಿರುವ ಆಚರಣೆ ಎಂಬ ಸಮಜಾಯಿಸಬಹುದು. ಸತಿ ಸಹಗಮನ ಪದ್ದತಿ, ವಿಧವೆಗೆ ತಲೆ ಬೋಳಿಸಿ ಒಳಗೆ ಕೂರಿಸುವಂತ ದರಿದ್ರ ಪದ್ದತಿಗಳೂ ನಮ್ಮ ಸಮಾಜದಲ್ಲಿ ಇತ್ತು ತಾನೆ? ಅದೆಲ್ಲವನ್ನು ಕಿತ್ತೊಗೆದಾಗಿದೆ. ಹಾಗಿರುವಾಗ ಜಾತಿಪದ್ದತಿಯನ್ನು ಯಾಕೆ ಕೋಲದ ಸಮಯದಲ್ಲಿ ಅನುಸರಿಸಬೇಕು? ದೈವದ ಎದುರು ಎಲ್ಲಾ ಜಾತಿಯೂ ಒಂದೇ. ಮೇಲ್ಜಾತಿ ಕೀಳು ಜಾತಿ ಎನ್ನುವುದು ದೈವದ ಪರಿಕಲ್ಪನೆಯಂತೂ ಅಲ್ಲ. ದೈವವು ನಂಬುವ ಎಲ್ಲರಿಗೂ ಸೇರಿರುವ ಶಕ್ತಿ.ನಂಬಿದವರಿಗೆ ಇಂಬುಕೊಡುವ ಶಕ್ತಿ ಎಂದು ಸುಧೀರ್ ಅತ್ತಾವರ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬಿಕರ್ನಕಟ್ಟೆಯ ಇನ್ಫೆಂಟ್ ಜೀಸಸ್ ದೇಗುಲದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ಬಿಕರ್ನಕಟ್ಟೆ, ಜನವರಿ 7, 2026: ಇನ್ಫೆಂಟ್ ಜೀಸಸ್‌ನ ವಾರ್ಷಿಕ ಹಬ್ಬದ ಆಚರಣೆಯ ಅಂಗವಾಗಿ, ಜನವರಿ 7, 2026 ರ ಬುಧವಾರದಂದು ಬಿಕರ್ನಕಟ್ಟೆಯ ಇನ್ಫೆಂಟ್ ಜೀಸಸ್ ದೇಗುಲದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಶಿಬಿರವು ಬೆಳಿಗ್ಗೆ 9:00 ಗಂಟೆಗೆ ಪ್ರಾರಂಭವಾಯಿತು ಮತ್ತು ಅಭೂತಪೂರ್ವ ಪ್ರತಿಕ್ರಿಯೆಯನ್ನು ಪಡೆಯಿತು. ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿತ್ತು. ನೇತ್ರಶಾಸ್ತ್ರಜ್ಞರಾದ ಡಾ. ಕ್ರಿಸ್ಮಾ, ಡಾ. ವಿಜಿತಾ ಮತ್ತು ಡಾ. ಮಹೇಶ್ ಸೇರಿದಂತೆ ಮಂಗಳೂರಿನ ಡಾ. ಅಗರ್ವಾಲ್ ಐ ಕ್ಲಿನಿಕ್‌ನ ವೈದ್ಯರ ತಂಡವು ತಮ್ಮ ಸಹಾಯಕ ಸಿಬ್ಬಂದಿಯೊಂದಿಗೆ ಸಮಗ್ರ ನೇತ್ರ ತಪಾಸಣೆ ನಡೆಸಿ ಫಲಾನುಭವಿಗಳಿಗೆ ಸೂಕ್ತ ಸರಿಪಡಿಸುವ ಕ್ರಮಗಳನ್ನು ಸೂಚಿಸಿತು. ಸಂಪರ್ಕದ ಭಾಗವಾಗಿ, ದೃಷ್ಟಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ 150 ಜೋಡಿ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು.ಶಿಬಿರವನ್ನು ಸೇಂಟ್ ಜೋಸೆಫ್ ಮಠದ ಸುಪೀರಿಯರ್ ರೆವರೆಂಡ್ ಫಾದರ್ ಮೆಲ್ವಿನ್ ಡಿ’ಕುನ್ಹಾ ಮತ್ತು ಇತರ ಗಣ್ಯರು ಸಾಂಕೇತಿಕವಾಗಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ರೆವರೆಂಡ್ ಫಾದರ್ ವಿಲಿಯಂ ಮಿರಾಂದಾ ಅವರು ಸಭೆಯನ್ನು ಸ್ವಾಗತಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಟ್ರಸ್ಟ್‌ನ ನಡೆಯುತ್ತಿರುವ ಸಾಮಾಜಿಕ ಕಾರ್ಯ ಉಪಕ್ರಮಗಳನ್ನು, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ದೀನದಲಿತರಿಗೆ ಕಲ್ಯಾಣ ಕಾರ್ಯಕ್ರಮಗಳಿಗೆ ಅದರ ಬದ್ಧತೆಯನ್ನು ಒತ್ತಿ ಹೇಳಿದರು.ಈ ಕಾರ್ಯಕ್ರಮದಲ್ಲಿ ಇನ್ಫೆಂಟ್ ಜೀಸಸ್ ದೇವಾಲಯದ ನಿರ್ದೇಶಕ ರೆವರೆಂಡ್ ಫಾದರ್ ಸ್ಟಿಫನ್ ಪಿರೇರಾ, ಶ್ರೀ ರೊನಾಲ್ಡ್ ಕೊಲಾಸೊ ಮತ್ತು ವರ್ಲ್ಡ್ ವಿಷನ್‌ನ ಶ್ರೀಮತಿ ಎಲ್ಸಿ ಉಪಸ್ಥಿತರಿದ್ದರು, ಅವರು ಈ ಉಪಕ್ರಮಕ್ಕೆ ತಮ್ಮ ಬೆಂಬಲವನ್ನು ನೀಡಿದರು. ಕಣ್ಣಿನ ತಪಾಸಣಾ ಶಿಬಿರದಿಂದ ಸುಮಾರು 150 ಜನರು ಪ್ರಯೋಜನ ಪಡೆದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘಟಕರು, ಹೂವಿನ ಹಡಗಲಿ (ಬಳ್ಳಾರಿ), ದಾವಣಗೆರೆ ಜಿಲ್ಲೆಯ ಜಲಗುರು ಮತ್ತು ಕಲಬುರಗಿ ಜಿಲ್ಲೆಯ ಕಡಗಂಚಿಯಲ್ಲಿನ ತನ್ನ ಶಾಖೆಗಳ ಮೂಲಕ ಕಾರ್ಯನಿರ್ವಹಿಸುವ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನಿಯಮಿತವಾಗಿ ಹಳ್ಳಿಗಳು ಮತ್ತು ಕಾರಾಗೃಹಗಳಲ್ಲಿ ಇದೇ ರೀತಿಯ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತದೆ, ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುತ್ತದೆ, ಪ್ರಾಣಿ ಆರೈಕೆ ಶಿಬಿರಗಳನ್ನು ಆಯೋಜಿಸುತ್ತದೆ ಮತ್ತು ಸಮಾಜದ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು ವಿವಿಧ ಉಪಕ್ರಮಗಳನ್ನು ಕೈಗೊಳ್ಳುತ್ತದೆ.ಉಚಿತ ನೇತ್ರ ತಪಾಸಣಾ ಶಿಬಿರವು ಫಲಾನುಭವಿಗಳಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆಯಿತು.

ಪ್ರಾದೇಶಿಕ ವಾರ್ತೆಗಳು

ಕಾರ್ಕಳ ಡಿವೈಎಸ್ ಪಿಯಾಗಿ ಬೆಳ್ಳಿಯಪ್ಪ ಕೆ . ಯು.ಅವರು ನೇಮಕ

ಕಾರ್ಕಳ- ಕಾರ್ಕಳ ಡಿವೈ ಎಸ್ಪಿಯಾಗಿ ಬೆಳ್ಳಿಯಪ್ಪ ಕೆ . ಯು.ಅವರು ನೇಮಕಗೊಂಡಿದ್ದಾರೆ. ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ನಿರ್ಭೀತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದರು. ಅವರು ಭಟ್ಕಳದಲ್ಲೂ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕುಂದಾಪುರದಲ್ಲಿ ಕೂಡಾ ಡಿವೈಎಸ್ಪಿಯಾಗಿ ಜನ ಮನ್ನಣೆ ಗಳಿಸಿದ್ದರು. ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ನಿರ್ಭೀತ ಪೊಲೀಸ್ ಅಧಿಕಾರಿಯಾಗಿ ಪ್ರಾಮಾಣಿಕ, ದಕ್ಷ, ಸಮರ್ಥ ಪೊಲೀಸ್ ಆಫೀಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬೆಳ್ಳಿಯಪ್ಪ ಅವರು ತನಿಖಾಧಿಕಾರಿಯಾಗಿ ಅಪರಾಧ ಜಗತ್ತಿನ ಕ್ಲಿಷ್ಟಕರ ಕೇಸುಗಳನ್ನು ಭೇದಿಸಿದ ಅತ್ಯಂತ ಚುರುಕಿನ ಅನುಭವಿ ಪೊಲೀಸ್ ಅಧಿಕಾರಿಯಾಗಿದ್ದಾರೆ. ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಬೆಳ್ಳಿಯಪ್ಪ ಅವರು ಕರ್ನಾಟಕ ಕಂಡಿರುವ ಹೆಸರಾಂತ, ಹೆಮ್ಮೆಯ ಪೊಲೀಸ್ ಅಧಿಕಾರಿಯಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ವಿನಯ ಹೆಗ್ಡೆ ಅವರಿಗೆ ರೆಡ್ ಕ್ರಾಸ್ ನಿಂದ ಶ್ರದ್ಧಾಂಜಲಿ ಸಭೆ. ವಿನಯ ಹೆಗ್ಡೆ ಅವರ ಆದರ್ಶ ಸಮಾಜಕ್ಕೆ ಪ್ರೇರಣಾದಾಯಿ -ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು: ಕರಾವಳಿ ಜಿಲ್ಲೆಯ ಶೈಕ್ಷಣಿಕ ಹಾಗೂ ಔದ್ಯಮಿಕ ಕ್ಷೇತ್ರಕ್ಕೆ ಅದ್ವಿತೀಯ ಕೊಡುಗೆ ನೀಡಿರುವ ನಿಟ್ಟೆ ವಿನಯ ಹೆಗ್ಡೆ ಅವರ ಆದರ್ಶಯುತ ಬದುಕು ಸಮಾಜಕ್ಕೆ ಸದಾ ಪ್ರೇರಣಾದಾಯಿ . ಸಾಧನೆಯ ಜತೆಗೆ ತನ್ನ ಸರಳ ನಡವಳಿಕೆಯಿಂದ ಅವರು ಜನಮಾನಸದಲ್ಲಿ ಗೌರವದ ಸ್ಥಾನ ಪಡೆದಿದ್ದಾರೆ ಎಂದು ದ.ಕ.ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.ಇತ್ತೀಚೆಗೆ ಅಗಲಿದ ನಿಟ್ಟೆ ಪರಿಗಣಿತ ವಿ.ವಿ.ಯ ಕುಲಾಧಿಪತಿ ನಿಟ್ಟೆ ವಿನಯ ಹೆಗ್ಡೆ ಅವರಿಗೆ ದ.ಕ.ಜಿಲ್ಲಾ ರೆಡ್ ಕ್ರಾಸ್ ವತಿಯಿಂದ ಆಯೋಜಿಸಲಾದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿ ನಮನ ಸಲ್ಲಿಸಿದರು.ದ.ಕ.ಜಿಲ್ಲಾ ರೆಡ್ ಕ್ರಾಸ್ ನ ಸಮಾಜ ಸೇವಾ ಕಾರ್ಯಗಳಿಗೆ ವಿನಯ ಹೆಗ್ಡೆ ಅವರು ನೀಡಿದ ಪ್ರೋತ್ಸಾಹ ಸದಾ ಸ್ಮರಣೀಯ ಎಂದು ಅವರು ಹೇಳಿದರು.ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ದ.ಕ.ಜಿಲ್ಲಾ ರೆಡ್ ಕ್ರಾಸ್ ಸಮಿತಿಯ ಉಪಾಧ್ಯಕ್ಷ ಡಾ.ಸತೀಶ್ ರಾವ್, ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ, ನಿರ್ದೇಶಕರಾದ ಡಾ.ಸುಮನಾ .ಬಿ., ಪಿ.ಬಿ.ಹರೀಶ್ ರೈ ನುಡಿ ನಮನ ಸಲ್ಲಿಸಿದರು.ನಿಟ್ಟೆ ಪರಿಗಣಿತ ವಿ.ವಿ.ಯ ಯೂತ್ ರೆಡ್ ಕ್ರಾಸ್ ನ ನೋಡಲ್ ಅಧಿಕಾರಿ ಡಾ.ಶಂತನು ಸಹ , ರೆಡ್ ಕ್ರಾಸ್ ಜಿಲ್ಲಾ ಘಟಕದ ಖಜಾಂಜಿ ಮೋಹನ್ ಶೆಟ್ಟಿ, ನಿರ್ದೇಶಕ ಗುರುದತ್ ನಾಯಕ್, ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಜನವರಿ 9 ರಂದು ಬಂಟರ ಮಾತೃಸಂಘದಿಂದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆಯವರಿಗೆ ಶ್ರದ್ದಾಂಜಲಿ ಸಭೆ, ನುಡಿನಮನ

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಇತ್ತೀಚೆಗೆ ನಿಧನರಾದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ವಿನಯ ಹೆಗ್ಡೆಯವರಿಗೆ ಶ್ರದ್ದಾಂಜಲಿ ಸಭೆ ಮತ್ತು ಪ್ರಾರ್ಥನಾ ಸಭೆ ಜನವರಿ 9 ರಂದು ಶುಕ್ರವಾರ ಸಂಜೆ 5 ಗಂಟೆಗೆ ಬಂಟ್ಸ್ ಹಾಸ್ಟೇಲ್ ಶ್ರೀ ರಾಮಕೃಷ್ಣ ಕಾಲೇಜು ಬಳಿ ಇರುವ ಶ್ರೀಮತಿ ಗೀತಾ ಎಸ್ ಎಂ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ.ಡಾ ವಿನಯ ಹೆಗ್ಡೆ ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಗ್ರಾಮೀಣ ಪ್ರದೇಶವಾಗಿದ್ದ ನಿಟ್ಟೆಯನ್ನು ಅಂತಾರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸಿದ ಶಿಕ್ಷಣ ತಜ್ಞರು. ನಿಟ್ಟೆ ಯೂನಿವರ್ಸಿಟಿ ರೂವಾರಿಯಾಗಿದ್ದ ಅವರು ದಕ್ಷ ಆಡಳಿತಗಾರರಾಗಿದ್ದರು. ಅವರಿಗೆ ಶ್ರದ್ದಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಜನವರಿ 11 ರಂದು ಸುರತ್ಕಲ್ ನಲ್ಲಿ ಬಂಟರ ಕ್ರೀಡೋತ್ಸವ. ಡಾ ಪಿ.ವಿ ಶೆಟ್ಟಿ ಮುಂಬೈ ಅವರಿಗೆ ಗೌರವ ಸನ್ಮಾನ

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಮಂಗಳೂರು ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇವರ ಸಹಯೋಗದಲ್ಲಿ ಬಂಟರ ಕ್ರೀಡೋತ್ಸವ ಜನವರಿ 11 ರಂದು ಭಾನುವಾರ ಸುರತ್ಕಲ್ ಗೋವಿಂದ ದಾಸ ಕಾಲೇಜು ಮೈದಾನದಲ್ಲಿ ನಡೆಯಲಿದೆ.ಅಂದು ಬೆಳಿಗ್ಗೆ 8.30 ಕ್ಕೆ ನಡೆಯುವ ಬಂಟರ ಕ್ರೀಡೋತ್ಸವ ಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಮಾತೃಸಂಘದ ಮಂಗಳೂರು ತಾಲೂಕು ಸಮಿತಿಯ ಸಂಚಾಲಕರಾದ ವಸಂತ ಶೆಟ್ಟಿ ಉದ್ಘಾಟಿಸಲಿದ್ದಾರೆ‌. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಾಳ ಜಗನ್ನಾಥ ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಕ್ಕಾರು ಬಂಟರ ಸಂಘದ ಅಧ್ಯಕ್ಷರಾದ ರತ್ನಾಕರ ಶೆಟ್ಟಿ ಎಕ್ಕಾರು, ಉದ್ಯಮಿ ಹರೀಶ್ ಶೆಟ್ಟಿ ಪೆರ್ಮುದೆ, ಮಂಗಳೂರು ಯಥಾಥ್೯ ಸೋಶಿಯಲ್ ನ ಈಶ್ವರ್ ಪ್ರಸಾದ್ ಶೆಟ್ಟಿ ಭಾಗವಹಿಸಲಿದ್ದಾರೆ. ಸಂಘದ ಸ್ಥಾಪಕಾಧ್ಯಕ್ಷ ರೋಹಿತಾಕ್ಷ ರೈ ಕುಳಾಯಿಗುತ್ತು ಉಪಸ್ಥಿತರಿರುವರು.ಮಧ್ಯಾಹ್ನ 12 ಗಂಟೆಗೆ ನಡೆಯುವ ಅಭಿನಂದನಾ ಸಮಾರಂಭದಲ್ಲಿ 2025 ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಡಾ ಪಿ ವಿ ಶೆಟ್ಟಿ ಮುಂಬೈ ಅವರಿಗೆ ಗೌರವ ಸನ್ಮಾನ ನಡೆಯಲಿದೆ. ಸಮಾರಂಭವನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮುಂಬೈ ವಿ ಕೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಮಂಗಳೂರು ಉತ್ತರ ವಿಧಾನ ಸಭಾಕ್ಷೇತ್ರದ ಶಾಸಕರಾದ ಡಾ ವೈ ಭರತ್ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಯುವ ವಿಭಾಗದ ಅಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ಚಿತ್ರನಟ, ನಿರ್ದೇಶಕ ರೂಪೇಶ್ ಶೆಟ್ಟಿ ಭಾಗವಹಿಸಲಿದ್ದಾರೆ. ಸುರತ್ಕಲ್ ಬಂಟರ ಸಂಘದ ಮಾಜೀ ಅಧ್ಯಕ್ಷರಾದ ಎಂ ದೇವಾನಂದ ಶೆಟ್ಟಿಯವರ ಉಪಸ್ಥಿತಿಯಲ್ಲಿ ವಿಶ್ವಕಪ್ ವಿಜೇತ ಅಂತರಾಷ್ಟ್ರೀಯ ಮಹಿಳಾ ಕಬಡ್ಡಿ ಆಟಗಾರ್ತಿ ಕುಮಾರಿ ಧನಲಕ್ಷಿ ಪೂಜಾರಿ ಸುರತ್ಕಲ್ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಗುವುದು.ಸಂಜೆ 5.30 ಕ್ಕೆ ಸಮಾರೋಪ ಸಮಾರಂಭದಲ್ಲಿ ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ (ರಿ) ನ ಕಾರ್ಯಾಧ್ಯಕ್ಚ ದೇವಿಚರಣ್ ಶೆಟ್ಟಿ, ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ (ನಿ) ಅಧ್ಯಕ್ಷ ಲಯನ್ ಸುರೇಶ್ ರೈ, ಸುರತ್ಕಲ್ ಬಾಲಾಜಿ ಐಕಾನ್ ಸಂಸ್ಥೆಯ ಆಡಳಿತ ನಿರ್ದೇಶಕ ಹರೀಶ್ ಶೆಟ್ಟಿ ಕಾವೂರು ಭಾಗವಹಿಸಲಿದ್ದಾರೆ. ಸಂಘದ ಮಾಜಿ ಅಧ್ಯಕ್ಷರುಗಳಾದ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ಸುಧಾಕರ ಎಸ್ ಪೂಂಜ, ಎಂ‌ ಲೋಕಯ್ಯ ಶೆಟ್ಟಿ ಉಪಸ್ಥಿತರಿರುವರು. ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.ಪುರುಷರಿಗೆ ಹಾಗೂ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ದೆಗಳನ್ನು ಆಯೋಜಿಸಲಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ತಿಳಿಸಿದ್ದಾರೆ.

Scroll to Top